ಬೀದರ್: ಬಿಸಿಲಿನ ಝಳಕ್ಕೆ ಕುಸಿದು ಬಿದ್ದು ಯುವಕ ಸಾವು!
ಬೀದರ್: ಜಿಲ್ಲೆಯಲ್ಲಿ ತೀವ್ರ ಬಿಸಿಲಿನ ಪರಿಣಾಮವಾಗಿ ಯುವಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕಮಲನಗರ ಪಟ್ಟಣದ ಡಿಗ್ಗಿ ರೋಡ್ ಬಳಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಮೊಹ್ಮದ್ ಸಮೀರ್ ಅಹ್ಮದ್ (20) ಮೃತಪಟ್ಟ ದುರ್ದೈವಿ ಯುವಕನಾಗಿದ್ದಾನೆ. ಗರಿಷ್ಠ ತಾಪಮಾನವನ್ನು ಸಹಿಸಲಾಗದೇ ಸಾವನ್ನಪ್ಪಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.
ಘಟನೆ ನಡೆದ ದಿನ ಸಮೀರ್ ತರಕಾರಿ ತರಲು ತೆರಳಿದ್ದನು. ನಂತರ ಮನೆಗೆ ಮರಳುವಾಗ ತಲೆ ಸುತ್ತಿದಂತೆ ಅನುಭವಗೊಂಡು, ಸಮೀಪದಲ್ಲಿದ್ದ ಮೆಕಾನಿಕ್ ಅಂಗಡಿಯಲ್ಲಿ ನೀರು ಕುಡಿದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದಿದ್ದಾನೆ. ಆದರೆ ಬಳಿಕ ಮತ್ತೆ ಮನೆಗೆ ಹೊರಟಾಗ ಡಿಗ್ಗಿ ಗ್ರಾಮದ ರಸ್ತೆ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಮಗ ಬಿಸಿಲಿನ ಪರಿಣಾಮದಿಂದಲೇ ಸಾವನ್ನಪ್ಪಿದ್ದಾನೆ ಎಂದು ತಂದೆ ಲಯಿಕ್ ಅಹ್ಮದ್ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



