ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಭಾರತೀಯ ಚಿತ್ರರಂಗದಲ್ಲಿ ಹಿಂದೊಮ್ಮೆ ಪೌರಾಣಿಕ ಚಿತ್ರಗಳದ್ದೇ ಹವಾ ಇತ್ತು. ಫಾಲ್ಕೆ ಅವರ ”ಹರಿಶ್ಚಂದ್ರ” ಚಿತ್ರವನ್ನು ನೋಡಿ ಹಲವಾರು ಜನ ಪ್ರೇರಣೆಗೊಂಡಿದ್ದರು. ಇನ್ನು..ಡಾ.ರಾಜ್ ಕುಮಾರ್.. ಎನ್.ಟಿ.ಆರ್.. ಅಕ್ಕಿನೇನಿ ನಾಗೇಶ್ವರ ರಾವ್.. ಎಸ್.ವಿ.ರಂಗರಾವ.. ಹೀಗೆ ಹಲವರು ಪೌರಾಣಿಕ ಪಾತ್ರಧಾರಿಗಳಾಗಿ ಮಿಂಚಿದರು. ಜನಪ್ರಿಯರಾದರು. ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾದ ಸ್ಥಾನ ಕೂಡ ಪಡೆದರು.
ಆದರೆ .. ಈಗ ಪೌರಾಣಿಕ ಚಿತ್ರಕ್ಕೆ ಚಿತ್ರರಂಗದಲ್ಲಿ ಮೊದಲಿದ್ದ ಬೆಲೆ ಇಲ್ಲ.ಹಾಗಂಥ, ಪ್ರಯತ್ನಗಳಾಗಿಯೇ ಇಲ್ಲ ಅಂತಲ್ಲ. ಅಲ್ಲೊಂದು.. ಇಲ್ಲೊಂದು ಚಿತ್ರಗಳನ್ನು ಅಲ್ಲೊಬ್ಬರು.. ಇಲ್ಲೊಬ್ಬರು ಮಾಡುತ್ತಾರೆ ಆದರೂ ಹೊಡಿ ಬಡಿ ಚಿತ್ರಗಳಿಂದ ಪ್ರೇಕ್ಷಕರನ್ನು ಚಿತ್ರರಂಗ ಕಮರ್ಷಿಯಲ್ ಜಾಲದಲ್ಲಿ ಸಿಲುಕಿಸಿದೆ.

ಇಂತಹ ಕಾಲದಲ್ಲಿ ಭಕ್ತಿಯ ಭಾವವನ್ನು ಉಕ್ಕಿಸುವ, ಮನಸ್ಸಿಗೆ ಶಾಂತಿ ಮತ್ತು ದೈವಿಕ ಅನುಭೂತಿಯನ್ನು ನೀಡುವ ಆಲ್ಬಂ ಹಾಡೊಂದನ್ನು ಹೊರ ತರುವ ಪ್ರಯತ್ನವನ್ನು ರಘು ಭಟ್-ಸುಗುಣ ಭಟ್ ಮಾಡಿದ್ದಾರೆ. ಆ ಪ್ರಯತ್ನದ ಹೆಸರೇ ”ರಾಯರ ದರ್ಶನ”.
ಹೌದು, ”ರಾಯರ ದರ್ಶನ”.. ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದು ಖ್ಯಾತರಾದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದಿವ್ಯ ಚರಿತ್ರೆಯನ್ನು ಹೊಂದಿರುವ ಹಾಡು. ”ಶ್ರೀ ಲಕ್ಷ್ಮೀ ಗಣೇಶ” ಪ್ರೊಡಕ್ಷನ್ ಮತ್ತು ”ದಿ ”ನ್ಯೂ ಇಂಡಿಯನ್ ಟೈಮ್ಸ್” ಹೆಮ್ಮೆಯಿಂದ ಅರ್ಪಿಸುತ್ತಿರುವ ಈ ವಿಶೇಷ ಪ್ರಾಜೆಕ್ಟ್ನ ಟೀಸರ್ ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದು ಮಂತ್ರಾಲಯದಲ್ಲಿ ರಾಯರ ಸನ್ನಿಧಿಗೆ ಬಂದ ಭಕ್ತರು ಹಾಡಿನ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಾಡಿನ ಟೀಸರ್ ಗೆ ಮನಸೋತು ತಮ್ಮ ಮನದ ಮಾತುಗಳನ್ನು ನಿಮ್ಮ ”ದಿ ನ್ಯೂ ಇಂಡಿಯನ್ ಟೈಮ್ಸ್” ಜೊತೆ ಹಂಚಿಕೊಂಡಿದ್ಧಾರೆ.
ನೋಡುಗರಿಗೆ ಮತ್ತು ಕೇಳುಗರಿಗೆ ತುಂಬಾ ಇಷ್ಟವಾಗುವಂತಹ ಹಾಡು ಇದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಹಲವು ಭಕ್ತರು ರಾಯರ ಕುರಿತು ಇಂತಹದ್ದೊಂದು ಹಾಡು ಬೇಕಿತ್ತು ಎಂದು ಹೇಳಿದ್ಧಾರೆ. ಹಾಡು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಪದೇ ಪದೇ ಕೇಳುವಂತೆ ಇದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಮತ್ತೊಬ್ಬ ಭಕ್ತರು ಒಂದೇ ಹಾಡಿನಲ್ಲಿ ರಾಯರ ಸಂಪೂರ್ಣ ಜೀವನ ಚಿತ್ರಣ ಕಟ್ಟಿ ಕೊಡುವ ಪ್ರಯತ್ನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಈ ಹಾಡಿಗೆ ಸಿ.ಆರ್. ಬಾಬಿ ಹಾಗೂ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ಧಾರೆ. ನಾಗಾರ್ಜುನ ಶರ್ಮಾ ಹಾಡಿಗೆ ಸಾಹಿತ್ಯ ಬರೆದಿದ್ದು ಶ್ರೀನಿಧಿ ಎಂ.ಕೆ. ಹಾಗೂ ಖುಷಿ ಪ್ರಾಜೆಕ್ಟ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ಧಾರೆ. ಆಗಲೇ ಹೇಳಿದಂತೆ ಈ ಆಲ್ಬಂ ಹಾಡು ಸುಗುಣ ಭಟ್ ಮತ್ತು ರಘು ಭಟ್ ಅವರ ಕನಸಾಗಿದ್ದು, ಸುಗುಣ ಭಟ್ ಹಾಡನ್ನು ನಿರ್ಮಾಣ ಮಾಡಿದ್ದರೆ ರಘು ಭಟ್ ನಿರ್ದೇಶನ ಮಾಡಿದ್ಧಾರೆ.
ಇನ್ನೂ ಈ ಹಾಡು ಕೇವಲ ಭಕ್ತಿಗೀತೆಯಾಗಿ ಉಳಿಯದೆ, ದಕ್ಷಿಣ ಭಾರತದ ಖ್ಯಾತ ನಟರ ಸಮಾಗಮಕ್ಕೆ ಸಾಕ್ಷಿಯಾಗುತ್ತಿದೆ. ಇದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್, ನೆನಪಿರಲಿ ಪ್ರೇಮ್ ಸೇರಿದಂತೆ ಚಿತ್ರರಂಗದ 25ಕ್ಕೂ ಹೆಚ್ಚು ಜನಪ್ರಿಯ ತಾರೆಯರು ಈ ಆಲ್ಬಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ.



