ರಾಜಕೀಯ ಅಂದರೆ ಹಾಗೇ. ಅದು ನಿಂತ ನೀರಲ್ಲ. ಯಾವತ್ತು ಯಾವ ಕ್ಷಣದಲ್ಲಿ ಯಾವ ಕಡೆಯಿಂದ ಗಾಳಿ ಬೀಸುತ್ತೆ ಎಂದು ಇಲ್ಲಿ ಹೇಳಲು ಸಾಧ್ಯವೂ ಇಲ್ಲ. ಕುರ್ಚಿಯ ಮೇಲೆ ಕೂರಲು ಇಲ್ಲಿ ಹಲವಾರು ಜನ ಟವಲ್ ಹಾಕಿರುತ್ತಾರೆ. ಎದುರಾಳಿಗಳಿಗೆ ಮಣ್ಣು ಮುಕ್ಕಿಸಲು ರಣತಂತ್ರ ಹೆಣೆಯುತ್ತಿರುತ್ತಾರೆ. ಸುಳಿವು ಸಿಗುವುದಿಲಲ್ ಅಷ್ಟೇ.
ಇನ್ನೂ ಎಲೆಕ್ಷನ್ ಹತ್ತಿರ ಬಂದರೆ ಮುಗಿಯಿತು. ಈ ಪೊಲಿಟಿಕಲ್ ಗೇಮ್ ಯಾವ ಹಂತಕ್ಕೆ ಹೋಗುತ್ತೆ ಅಂದರೆ ರಾಜಕೀಯ ವಿಶ್ಲೇಷಕರಿಗೆ ಮಾತ್ರ ಅಲ್ಲ. ಮತದಾರ ಪ್ರಭುಗೆ ಕೂಡ ತಲೆ ಸುತ್ತಿ ಬರುತ್ತೆ. ಇಲ್ಲಿ ನಿಷ್ಠೆ ಮುಖ್ಯ ಅಲ್ಲ. ಚದುರಂಗದಲ್ಲಿ ಉದುರಿಸುವ ದಾಳಗಳಂತೆ ವ್ಯಕ್ತಿಯ ನಡೆಯೇ ಮುಖ್ಯ.
ಇದಕ್ಕೆ ಒಂದು ಕೈಗನ್ನಡಿ ಎಂಬಂತೆ ಸದ್ಯ ಆಮ್ ಆದ್ಮಿ ಪಕ್ಷಕ್ಕೆ ಆಘಾತವಾಗಿದೆ. ಆಮ್ ಆದ್ಮಿಯ ಪೋಸ್ಟರ್ ಬಾಯ್ ರಾಘವ್ ಚಡ್ಡಾ ಸದ್ಯ ತಮ್ಮ ಗುರು ಕ್ರೇಜ್ರಿವಾಲ್ಗೆ ಕೈ ಕೊಟ್ಟಿದ್ದಾರೆ. ಇನ್ನೂ ಚಡ್ಡಾ ತಾವು ಒಬ್ಬರೇ ಲಾಂಗ್ ಜಂಪ್ ಮಾಡಿಲ್ಲ. ತಮ್ಮ ಜೊತೆ ಇನ್ನೂ ಆರು ಜನರನ್ನು ಕರೆದುಕೊಂಡು ಆಪ್ ಕೋಟೆಯಿಂದ ಜಿಗಿದಿದ್ದಾರೆ.
ರಾಘವ್ ಚಡ್ಡಾ ಅವರ ಈ ಮಾಸ್ಟರ್ ಸ್ಟ್ರೋಕ್ ದಿಂದ ಸಹಜವಾಗಿ ಅರವಿಂದ್ ಕ್ರೇಜ್ರಿವಾಲ್ ಹೈರಾಣಾಗಿದ್ದಾರೆ. ಯಾಕೆಂದರೆ ಕನಸು ಮನಸಿನಲ್ಲಿಯೂ ಇಂತಹದ್ದೊಂದು ದಿನ ಬರುತ್ತೆ ಎನ್ನುವ ಲೆಕ್ಕಾಚಾರ ಅರವಿಂದ್ ಕ್ರೇಜ್ರಿವಾಲ್ ಹಾಕಿರಲಿಕ್ಕಿಲ್ಲ. ಆದರೆ ಈಗ ಆ ದಿನ ಬಂದಿದೆ.
ಹೀಗಾಗಿಯೇ ಕೆರಳಿ ಕೆಂಡವಾಗಿರುವ ಅರವಿಂದ್ ಕ್ರೇಜ್ರಿವಾಲ್ ತಮ್ಮ ಆಕ್ರೋಶವನ್ನು ಸೋಶಿಯಲ್ ಮೀಡಿಯಾದಲ್ಲಿ ಹೊರ ಹಾಕಿದ್ದಾರೆ. ಬಿಜೆಪಿ ಮತ್ತೊಮ್ಮೆ ಪಂಜಾಬಿಗಳಿಗೆ ದ್ರೋಹ ಮಾಡಿದೆ ಎಂದು ಬರೆದುಕೊಂಡಿದ್ದಾರೆ. ರಾಘವ್ ಚಡ್ಡಾ ನಿರ್ಗಮನದ ನಂತರ ಇದು ಅರವಿಂದ್ ಕ್ರೇಜ್ರಿವಾಲ್ ನೀಡಿದ ಮೊದಲ ಪ್ರತಿಕ್ರಿಯೆ ಆಗಿದ್ದು ಮುಂದಿನ ದಿನಗಳಲ್ಲಿ ಅರವಿಂದ್ ಕ್ರೇಜ್ರಿವಾಲ್ ಮತ್ತು ರಾಘವ್ ಚಡ್ಡಾ ನಡುವೆ ಆರೋಪ-ಪ್ರತ್ಯಾರೋಪದ ಸರಣಿ ಶುರುವಾಗುವ ನಿರೀಕ್ಷೆ ರಾಜಕೀಯ ಪಂಡಿತರಿಗಿದೆ.



