ಮುಂಬೈನಲ್ಲಿ ದಾರುಣ ಘಟನೆ: ಬಿರಿಯಾನಿ ಬಳಿಕ ಕಲ್ಲಂಗಡಿ ತಿಂದ ಕುಟುಂಬದ ನಾಲ್ವರು ಸಾವು!
ಮಹಾರಾಷ್ಟ್ರ: ದಕ್ಷಿಣ ಮುಂಬೈನಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಆತಂಕ ಹುಟ್ಟಿಸಿದೆ. ಬಿರಿಯಾನಿ ಸೇವಿಸಿದ ಬಳಿಕ ಕಲ್ಲಂಗಡಿ ಹಣ್ಣು ತಿಂದಿರುವುದರಿಂದ ಫುಡ್ ಪಾಯಿಸನಿಂಗ್ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಪೊಲೀಸರ ಮಾಹಿತಿ ಪ್ರಕಾರ, ಅಬ್ದುಲ್ಲಾ (40), ಅವರ ಪತ್ನಿ ನಸ್ರೀನ್ (35), ಹಾಗೂ ಪುತ್ರಿಯರಾದ ಝೈನಾಬ್ (13) ಮತ್ತು ಆಯೆಷಾ (16) ಮೃತಪಟ್ಟವರು. ಇತ್ತೀಚೆಗೆ ತಮ್ಮ ಮನೆಯಲ್ಲಿ ಸಣ್ಣ ಸಮಾರಂಭವನ್ನು ಆಯೋಜಿಸಿದ್ದ ಈ ಕುಟುಂಬ, ಅತಿಥಿಗಳೊಂದಿಗೆ ಸೇರಿ ಬಿರಿಯಾನಿ ಸೇವಿಸಿತ್ತು. ಅತಿಥಿಗಳು ತೆರಳಿದ ಬಳಿಕ ಕುಟುಂಬದ ಸದಸ್ಯರು ಕಲ್ಲಂಗಡಿ ಹಣ್ಣು ಸೇವಿಸಿದ್ದರು.ಏಪ್ರಿಲ್ 25ರ ರಾತ್ರಿ ಸಮಾರಂಭದ ನಂತರ, ಮಧ್ಯರಾತ್ರಿ 1ರಿಂದ 1.30ರ ವೇಳೆಯಲ್ಲಿ ಕಲ್ಲಂಗಡಿ ತಿಂದಿದ್ದರು. ಮರುದಿನ ಬೆಳಗ್ಗೆ ಎಲ್ಲರಿಗೂ ವಾಂತಿ, ತಲೆಸುತ್ತು ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಜೆ.ಜೆ. ಆಸ್ಪತ್ರೆಗೆ ವರ್ಗಾಯಿಸಲಾಯಿತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಸಾವನ್ನಪ್ಪಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿನ ನಿಖರ ಕಾರಣ ಹಿಸ್ಟೋಪಾಥಾಲಜಿ ವರದಿ ಬಂದ ಬಳಿಕವೇ ತಿಳಿಯಲಿದೆ.ಈ ಸಂಬಂಧ ಪ್ರವೀಣ್ ಮುಂಡೆ ತಿಳಿಸಿದ್ದಾರೆ, ಜೆ.ಜೆ. ಮಾರ್ಗ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



