ಜುಲೈ 26ರಂದು ಎಲ್ಲಾ ಮುಖಂಡರ ನೇತೃತ್ವದಲ್ಲಿ ಮೌನ ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ ಕೋರ್ಟ್ ಗೆ ಹೋಗದೇ ವಿಚಾರಣೆಗೆ ಹಾಜರಾಗಿದ್ದಾರೆ. ಆದರೂ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ, ಮೌರ್ಯ ಸರ್ಕಲ್ನಲ್ಲಿ ಎಲ್ಲಾ ಮುಖಂಡರ ನೇತೃತ್ವದಲ್ಲಿ 26ನೇ ತಾರೀಕು ಮೌನ ಹೋರಾಟ ಮಾಡುತ್ತೇವೆ ಎಂದರು. ಇನ್ನೂ ಚೆಲುವರಾಯಸ್ವಾಮಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಭಾರತ್ ಜೋಡೋ ಯಾತ್ರೆ ಶ್ರೀರಂಗಪಟ್ಟಣದಿಂದ ಮೈಸೂರು, ನಾಗಮಂಗಲ ಮೂಲಕ ಹೋಗುತ್ತದೆ. ಹೀಗಾಗಿ, ಅವರನ್ನು ಭೇಟಿಯಾಗಿ ಸಿದ್ದತೆ ಬಗ್ಗೆ ಸಲಹೆ ಕೊಟ್ಟಿದ್ದೇನೆ. ಸಂಘಟನೆ ವಿಚಾರವನ್ನಷ್ಟೇ ಚರ್ಚೆ ಮಾಡಿದ್ದೇನೆ ಹೊರತು ಬೇರೆ ವಿಚಾರ ಪ್ರಸ್ತಾಪಿಸಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.