ಬೆಂಗಳೂರು :ಚಾಮರಾಜಪೇಟೆಯಲ್ಲಿ ಈದ್ಗಾ ಮೈದಾನ ವಿವಾದ ಸಂಬಂಧ ಜುಲೈ 12 ರಂದು ನಾಗರಿಕ ಒಕ್ಕೂಟದಿಂದ ಚಾಮರಾಜಪೇಟೆ ಬಂದ್ ಗೆ ಕರೆ ನೀಡಲಾಗಿದೆ. ಚಾಮರಾಜಪೇಟೆಯಲ್ಲಿನ ಈದ್ಗಾ ಮೈದಾನ ಮಾಲೀಕತ್ವದ ವಿವಾದ ಸಂಬಂಧ ಬಿಬಿಎಂಪಿ ಹಾಗೂ ವಕ್ಫ್ ಬೋರ್ಡ್ ಗೆ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ದಾಖಲೆ ನೀಡುವಂತೆ ನೋಟಿಸ್ ನೀಡಿದ ಬೆನ್ನಲ್ಲೇ ಇದೀಗ ಬಕ್ರೀದ್ ಹಬ್ಬದ ಬಳಿಕ ಜಾಮರಾಜಪೇಟೆ ಬಂದ್ ಗೆ ಕರೆ ನೀಡಲಾಗಿದೆ.
ವಕ್ಫ್ ಬೋರ್ಡ್ ದ್ದೇ ಸ್ವತ್ತು ಎಂದು ಪಾಲಿಕೆ ಹೇಳಿದ ಬೆನ್ನಲ್ಲೇ, ಜಂಗಮ ಮಠದಲ್ಲಿ ಸಭೆ ನಡೆದಿದ್ದು, ಕಾನೂನಾತ್ಮಕವಾಗಿ ಬಿಬಿಎಂಪಿಯದ್ದೇ ಸ್ವತ್ತು ಎಂದು ಸಾಬೀತುಪಡಿಸಲು ಕಾನೂನು ಹೋರಾಟ ಮಾಡಲು ಒಕ್ಕೂಟದ ವೇದಿಕೆ ನಿರ್ಧಾರ ಮಾಡಿದೆ. ಇನ್ನೂ ರಕ್ತ ಬೇಕಾದ್ರೂ ಕೊಡ್ತೀವಿ, ಆದ್ರೆ ಮೈದಾನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಹಿಂದುಗಳನ್ನ ಕೆಣಕಬೇಡಿ, ಎಲ್ಲೋ ಕೂತು ಆಪರೇಟ್ ಮಾಡಿ ಇಲ್ಲಿ ಆಟವಾಡೋದು ಬೇಡ ಜಮೀರ್ ಅಹಮ್ಮದ್ ಅವರೇ ಹುಷಾರಾಗಿರಿ ಎಂದು ನಾಗರೀಕ ಒಕ್ಕೂಟದ ವೇದಿಕೆ ಸದಸ್ಯರು ಶಾಸಕ ಜಮೀರ್ ಗೆ ನೇರ ಸವಾಲ್ ಹಾಕಿದ್ದಾರೆ. ಈ ಹಿನ್ನೆಲೆ ಈದ್ಗಾ ಮೈದಾನದ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುವಂತಾಗಿದೆ.