No menu items!
2.7 C
Munich
Friday, May 1, 2026

IAS ಅಧಿಕಾರಿ ಹೋರಾಟ – 31 ವರ್ಷದ ಬಳಿಕ ತಂದೆ ಸಾವಿಗೆ ನ್ಯಾಯ!

Must read

35 ವರ್ಷಗಳ ಹಿಂದೆ ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಕಲಿ ಎನ್ಕೌಂಟರ್ ವೊಂದು ನಡೆದಿತ್ತು. ಆ ದಿನ 13 ಮಂದಿ ಸಾವನ್ನಪ್ಪಿದ್ರು, ಅರ್ಥಾತ್ ಕೊಲೆಯಾಗಿ ಹೋಗಿದ್ರು. ಅವರಲ್ಲೊಬ್ಬರು ಡಿಎಸ್ಪಿ ಕೆ.ಪಿ.ಸಿಂಗ್. ಸರಳುಗಳ ಹಿಂದೆ ಪ್ರಾಣಕಳೆದುಕೊಂಡ ನಿರಪರಾಧಿ. ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳಲೇಬೇಕೆಂದು ಪುತ್ರಿ ಕಿಂಜಲ್ ಸಿಂಗ್ ಪಣತೊಟ್ಟಿದ್ಲು. ಆದರೆ, ಈಗ 31 ವರ್ಷಗಳ ಬಳಿಕ ತಂದೆ ಸಾವಿಗೆ ನ್ಯಾಯ ಒದಗಿಸಿದ್ದಾರೆ. ಐಎಎಸ್ ಅಧಿಕಾರಿಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ತನ್ನ ವಯಸ್ಸಿನ ಮಕ್ಕಳೆಲ್ಲ ಆಟ-ಪಾಠ ಅಂತಾ ಮಜಮಾಡ್ತಿದ್ರೆ, ಕಿಂಜಲ್ ಸಿಂಗ್ ಮಾತ್ರ ತನ್ನ ತಾಯಿ ವಿಭಾ ಜೊತೆಗೆ ಉತ್ತರಪ್ರದೇಶದ ಚಿಕ್ಕ ಹಳ್ಳಿಯಿಂದ ದೆಹಲಿಯ ಸುಪ್ರೀಂ ಕೋರ್ಟ್​ಗೆ ಅಲೆಯುತ್ತಿದ್ಲು. ಇಬ್ಬರು ಹೆಣ್ಣು ಮಕ್ಕಳಿಗೆ ತಂದೆ ತಾಯಿ ಇಬ್ಬರೂ ಆಗಿ ಬೆಳೆಸುವ ಜವಾಬ್ಧಾರಿ ವಿಭಾ ಮೇಲಿತ್ತು. ವಾರಣಾಸಿಯಲ್ಲಿ ವಿಭಾಗೆ ಉದ್ಯೋಗ ದೊರೆತಿತ್ತು. ಮಕ್ಕಳಾದ ಕಿಂಜಲ್ ಹಾಗೂ ಪ್ರಾಂಜಲ್​ಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಮೃತ ಪತಿಯ ಸಾವಿಗೆ ನ್ಯಾಯ ಪಡೆಯಲು ವಿಭಾ ಹೋರಾಟ ನಡೆಸಿದ್ಲು. 31 ವರ್ಷಗಳ ಈ ಹೋರಾಟಕ್ಕೆ ಕೊನೆಗೂ ಗೆಲುವು ಸಿಕ್ಕಿದೆ.

ಡಿಎಸ್ಪಿ ಕೆ.ಪಿ.ಸಿಂಗ್ ಅವರನ್ನು ಸಹೋದ್ಯೋಗಿಗಳೇ ನಕಲಿ ಎನ್ಕೌಂಟರ್​ನಲ್ಲಿ ಹತ್ಯೆ ಮಾಡಿದ್ದರು. ಭ್ರಷ್ಟಾಚಾರ ಮತ್ತು ಲಂಚದ ಆರೋಪ ಎದುರಿಸ್ತಾ ಇದ್ದ ಸರೋಜ್ ಎಂಬಾತ ಅವರನ್ನು ಹತ್ಯೆ ಮಾಡಿದ್ದ. ಮಾಧವಪುರದಲ್ಲಿ ಕ್ರಿಮಿನಲ್ ಗಳ ಹಾವಳಿ ಹೆಚ್ಚಿದೆ ಅಂತಾ ಹೇಳಿ ಸಿಂಗ್​ರನ್ನು ಅಲ್ಲಿಗೆ ಕರೆಸಿಕೊಂಡಿದ್ದ. ಕ್ರಿಮಿನಲ್​ಗಳಾದ ರಾಮ್ ಭುಲಾವನ್ ಮತ್ತು ಅರ್ಜುನ್ ಪಸಿ ಅಲ್ಲಿ ಅಡಗಿದ್ದಾರೆಂಬ ಮಾಹಿತಿ ಮೇರೆಗೆ ಇಬ್ಬರೂ ಅಧಿಕಾರಿಗಳು ಅಲ್ಲಿಗೆ ಬಂದಿದ್ರು. ಅಲ್ಲಿ ಯಾರ ಸುಳಿವೂ ಇರಲಿಲ್ಲ ಬಾಗಿಲು ತಟ್ಟಿದ ಸಿಂಗ್ ಹಿಂತಿರುಗಿ ನೋಡುವಷ್ಟರಲ್ಲಿ ಅವರ ಎದೆಗೆ ಸರೋಜ್ ಗುಂಡು ಹಾರಿಸಿದ್ದ. ಅದೇ ದಿನ ನಕಲಿ ಎನ್ಕೌಂಟರ್​ನಲ್ಲಿ ಇನ್ನೂ 12 ಗ್ರಾಮಸ್ಥರನ್ನು ಹತ್ಯೆ ಮಾಡಲಾಗಿತ್ತು.
ಕೋರ್ಟ್ ನಲ್ಲಿ ಹೋರಾಟ ಮುಂದುವರಿಸುತ್ತಲೇ ಕಿಂಜಲ್ ಕಷ್ಟಪಟ್ಟು ಓದಿದ್ದಾಳೆ. ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಕಿಂಜಲ್ ಗೆ ಸೀಟು ಸಿಕ್ಕಿತ್ತು. ಅಷ್ಟರಲ್ಲಾಗ್ಲೇ ಈ ಕುಟುಂಬಕ್ಕೆ ಬರಸಿಡಿಲು ಬಡಿದಿತ್ತು, ತಾಯಿ ವಿಭಾ ಕ್ಯಾನ್ಸರ್ ಪೀಡಿತೆ ಅನ್ನೋದು ಗೊತ್ತಾಗಿತ್ತು. ಕ್ಯಾನ್ಸರ್​ ಜೊತೆಗೆ ಹೋರಾಡುತ್ತಲೇ ತನ್ನ ಇಬ್ಬರು ಹೆಣ್ಣುಮಕ್ಕಳು ಐಎಎಸ್ ಅಧಿಕಾರಿಯಾಗುತ್ತಾರೆ ಎಂಬ ವಿಶ್ವಾಸದೊಂದಿಗೆ ವಿಭಾ ಕೊನೆಯುಸಿರೆಳೆದ್ರು. ತಾಯಿಯ ನಿಧನದ ನಂತರ ಕಿಂಜಲ್ ಪದವಿಯ ಅಂತಿಮ ಪರೀಕ್ಷೆ ಬರೆದ್ಲು.

ಇನ್ನು ಪದವಿ ಬಳಿಕ ಸಹೋದರಿ ಪ್ರಾಂಜಲ್ ಸಿಂಗ್ ಳನ್ನು ಕೂಡ ಕಿಂಜಲ್ ದೆಹಲಿಗೆ ಕರೆತಂದ್ಲು. ಇಬ್ಬರೂ ಜೊತೆಯಾಗಿ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಿದ್ರು. 2007ರಲ್ಲಿ ಇಬ್ಬರೂ ಪರೀಕ್ಷೆ ಪಾಸು ಮಾಡಿದ್ರು. ಕಿಂಜಲ್ 25ನೇ ರ್ಯಾಂಕ್ ಪಡೆದ್ರೆ, ಪ್ರಾಂಜಲ್ 252ನೇ ರ್ಯಾಂಕ್ ಪಡೆದ್ರು. ಇದರ ಜೊತಗೆ ತಮ್ಮ ತಂದೆಯ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಅನ್ನೋದೇ ಈ ಸಹೋದರಿಯರ ಬದುಕಿನ ಗುರಿಯಾಗಿತ್ತು. ಅವರ ಶ್ರಮದ ಫಲವಾಗಿ ತಂದೆಯ ಸಾವಿಗೆ ನ್ಯಾಯ ದೊರೆತಿದೆ.

31 ವರ್ಷಗಳ ಹೋರಾಟದ ಬಳಿಕ 2013ರಲ್ಲಿ ಲಖ್ನೋ ಸಿಬಿಐ ಸ್ಪೆಷಲ್ ಕೋರ್ಟ್, ಕೆಪಿ ಸಿಂಗ್ ಹತ್ಯೆಯ ಎಲ್ಲಾ 18 ಆರೋಪಿಗಳನ್ನು ದಂಡನೆಗೆ ಗುರಿಮಾಡಿದೆ. ಪ್ರಾಮಾಣಿಕ ಐಎಎಸ್ ಅಧಿಕಾರಿ ಕಿಂಜಲ್ ಸಿಂಗ್ ಅವರ ಹೋರಾಟ ನಿಜಕ್ಕೂ ಮಾದರಿಯಾಗುವಂಥದ್ದು. ಅವರ ಬದುಕು ಇತರರಿಗೆ ಪ್ರೇರಣೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article