No menu items!
10.8 C
Munich
Wednesday, April 29, 2026

ಇಂದಿನ ಟಾಪ್ 10 ಸುದ್ದಿಗಳು..! 29.12.2015

Must read

1. ಕೇರಳದಲ್ಲಿ ಮದ್ಯ ನಿಷೇಧಕ್ಕೆ ಸುಪ್ರೀಂ ಅಸ್ತು
ಕೇರಳ ಸರ್ಕಾರ ಜಾರಿಗೆ ತಂದಿದ್ದ ಮದ್ಯ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಕೇವಲ ಪಂಚತಾರ ಹೋಟೆಲ್ಗಳಿಗೆ ಮಾತ್ರ ಬಾರ್ ಲೈಸೆನ್ಸ್ ಎಂದು ಸರ್ಕಾರ ತಂದಿರುವ ಹೊಸ ನೀತಿಯನ್ನು ಪ್ರಶ್ನಿಸಿ ಅಲ್ಲಿನ ಬಾರ್ ಮಾಲೀಕರ ಸಂಘ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಪೀಠದ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಹಾಗೂ ನ್ಯಾ. ಶಿವಕೀರ್ತಿ ಸಿಂಗ್ ಅರ್ಜಿಯನ್ನು ತಳ್ಳಿ ಹಾಕಿ ಕೇರಳದಲ್ಲಿಮದ್ಯ ನಿಷೇದ ನೀತಿಗೆ ಅಸ್ತು ಎಂದಿದೆ. ನೀತಿಗೆ ಅನುಸಾರವಾಗಿ ಮುಚ್ಚಿರುವ ಬಾರ್ಗಳನ್ನು ತೆರೆಯುವಂತಿಲ್ಲ ಎಂದು ಆದೇಶಿದೆ.

2. ಜನಾರ್ದನ ರೆಡ್ಡಿ ಮನಗೆ ಲೋಕಾಯಕ್ತ ದಾಳಿ
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯ ನಿವಾಸಗಳು ಮತ್ತು ಕಚೇರಿಗಳ ಮೇಲೆ ಇಂದು ಬೆಳ್ಳಂಬೆಳಗೆ ಲೋಕಾಯುಕ್ತರು ದಾಳಿ ಮಾಡಿ ಅಪಾರ ಪ್ರಮಾಣದ ಚಿನ್ನವನ್ನು ವಶಪಡಿಸಿಕೊಂಡಿರೋದು ವರದಿಯಾಗಿದೆ. ಲೋಕಾದಾಳಿಯ ಸಂದರ್ಭದಲ್ಲಿ ಮನೆಯಲ್ಲಿ ಸಂಸದ ಶ್ರೀರಾಮುಲು ಇದ್ದರು ಎಂದು ಹೇಳಲಾಗುತ್ತಿದೆ. 2007-11ರ ಅವಧಿಯಲ್ಲಿ 11 ಬೇನಾಮಿ ಕಂಪನಿಗಳನ್ನು ಸೃಷ್ಟಿಸಿ ಅಕ್ರಮಗಣಿಗಾರಿಕೆ ನಡೆಸುವ ಮೂಲಕ 362.73 ಕೋಟಿ ರೂ ಹಣವನ್ನು ಅಕ್ರಮವಾಗಿ ಸಂಪಾದಿಸಿದ್ದಾರೆಂಬ ಕಾರಣಕ್ಕಾಗಿ ದಾಳಿ ನಡೆದಿದೆ. ಲೋಕಾಯುಕ್ತ ಡಿವೈಎಸ್ಪಿ ವೆಂಕಟ್ ಸ್ವಾಮಿ ಮುಂದಾಳತ್ವದಲ್ಲಿ 12 ಕ್ಕೂ ಹೆಚ್ಚು ಮಂದಿ ಪೊಲೀಸರು ದಾಳಿ ನಡೆಸಿದ್ದಾರೆಂಬುದು ವರದಿಯಾಗಿದೆ.
ಲೋಕಾಯುಕ್ತ ದಾಳಿಯನ್ನು ಖಂಡಿಸಿರುವ ಶ್ರೀರಾಮುಲು, ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮನ್ನು ನಿರ್ಣಾಮ ಮಾಡುತ್ತಿದ್ದಾರೆ. ಆದರೆ ನಮ್ಮ ಮೇಲೆ ಜನರ ಆಶಿರ್ವಾದ ಇದ್ದೇ ಇರುತ್ತೆ. ಸಿದ್ದರಾಮಯ್ಯನವರು ಅಕ್ರಮ ಗಣಿಗಾರಿಕೆ ಹಗರಣವನ್ನು ಸಿಬಿಐಗೆ ಒಪ್ಪಿಸಲಿ. ಇದರಲ್ಲಿ ಅವರ ಮಗ ಮತ್ತು ಆಪ್ತರೇ ಭಾಗಿಯಾಗಿದ್ದಾರೆಂದು ಟೀಕಿಸಿದ್ದಾರೆ.

3. ಐಸಿಸ್ ಸೇರಲು ಹೊರಟಿದ್ದ ಇನ್ನೂ ಮೂವರ ಬಂಧನ..!

ಐಸಿಸ್ ಉಗ್ರ ಸಂಘಟನೆಯನ್ನು ಸೇರಲು ಹೊರಟಿದ್ದ ಮೂವರು ಯುವಕರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಮೊಬೈಲ್ ಹಾಗೂ ಟ್ಯಾಬ್ಲೆಟ್ ಅನ್ನು ವಶಪಡಿಸಿಕೊಂಡಿದ್ದು ಅವುಗಳನ್ನು ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆಂದು ವರದಿಯಾಗಿದೆ.
ಬಂಧಿತ ಯುವಕರು ಕಾಶ್ಮೀರಕ್ಕೆ ಹೋಗಿ, ಅಲ್ಲಿಂದ ಅಫ್ಘಾನ್ಸ್ಥಾನಕ್ಕೆ ಹೋಗಿ ಆ ಮೂಲಕ ಇರಾಕ್, ಸಿರಿಯಾಗೆ ಪ್ರಯಾಣಿಸಿ ಐಸಿಸ್ ಸೇರಲು ಉದ್ದೇಶಿಸಿದ್ದರೆಂಬುದು ಆಘಾತಕಾರು ಅಂಶ ತಿಳಿದು ಬಂದಿದೆ.

4. ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಯುವತಿ ಮೇಲೆ ಅತ್ಯಾಚಾರ..!
ಮಹಾರಾಷ್ಟ್ರದ ಪುಣೆಯಲ್ಲಿರುವ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಘಟನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಣವನ್ನು ಮಾಡಿಕೊಂಡಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪುಣೆಯ ಪೊಲೀಸರು ಬಂಧಿಸಿದ್ದಾರೆ.

5. ಹುಡುಗಿಗೆ ಮದ್ಯ ಕುಡಿಸಿ ಸೇನಾ ಸಿಬ್ಬಂದಿಗಳಿಂದ ಸಾಮೂಹಿಕ ಅತ್ಯಾಚಾರ
ನಿನ್ನೆ ರಾತ್ರಿ ಚಲಿಸುತ್ತಿರು ರೈಲಿನಲ್ಲಿ ಮೂವರು ಸೇನಾ ಸಿಬ್ಬಂದಿಗಳು ಬಲವಂತವಾಗಿ ಮದ್ಯ ಕುಡಿಸಿ ತನ್ನ ಮೇಲೆ ಅತ್ಯಾಚಾರ ಎಸಗಿರೋದಾಗಿ ಹುಡುಗಿಯೊಬ್ಬಳು ದೂರು ನೀಡಿದ್ದಾಳೆ. ಆಕೆಯ ದೂರಿನ ಮೇರೆಗೆ ಒಬ್ಬನನ್ನು ಬಂಧಿಸಿದ್ದು ಇನ್ನಿಬ್ಬರನ್ನು ಶೀಘ್ರದಲ್ಲೇ ಬಂಧಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಹುಡುಗಿ ಹೌರಾ-ಅಮೃತಸರ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ,ಹೌರಾದಲ್ಲಿ ಅವಳು ಸೇನಾ ಸಿಬ್ಬಂದಿ ಕಂಪಾರ್ಟ್ ಮೆಂಟ್ ಏರಿದ್ದಳು. ಅವಳು ಮನೆಯಿಂದ ಓಡಿಬಂದು, ಲೂಧಿಯಾನಾಗೆ ಗೆಳೆಯನನ್ನು ಭೇಟಿಯಾಗಲು ಹೋಗುತ್ತಿದ್ದಳೆಂದು ವರದಿಯಾಗಿದೆ.

6. ಆಪ್ ನಾಯಕನ ಬರ್ಬರ ಹತ್ಯೆ

ದೆಹಲಿಯ ಬೇಗಂಪುರದಲ್ಲಿ ಆಮ್ ಆದ್ಮಿ ಪಕ್ಷದ ನಾಯಕರೊಬ್ಬನನ್ನು ಬರ್ಬರ ಹತ್ಯೆ ಮಾಡಲಾಗಿದೆ. ಧೀರೇಂದ್ರ ಈಶ್ವರ್ ಎಂಬ ಆಪ್ ನಾಯಕನ ಶವ ಕೆಸರಿನಲ್ಲಿ ಪತ್ತೆಯಾಗಿದೆ. ಧೀರೇಂದ್ರರವರ ಮರ್ಮಾಂಗವನ್ನು ಕತ್ತರಿಸಿ ಹತ್ಯೆಗೈದು ಶವವನ್ನು ಬಿಸಾಡಿ ಹೋಗಲಾಗಿದೆ ಎನ್ನಲಾಗಿದೆ. ಧೀರೇಂದ್ರರವರ ಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಹಲವಾರು ಮಂದಿಯನ್ನು ತನಿಖೆಗೆ ಒಳಪಡಿಸಿದ್ದಾರೆ.

7. ಬಿಜೆಪಿ ನಾಯಕ ಸಾಕ್ಷಿ ಮಹಾರಾಜ್ ಗೆ ಇಸಿಸ್ ಬೆದರಿಕೆ

ಇಸಿಸ್ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ ಕರೆ ಬಂದಿದೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಶಾಸಕ ಸಂಗೀತ್ ಸೋಮ್ ಅವರು ಸಹ ಬೆದರಿಕೆ ಕರೆ ಬಂದಿರುವುದಾಗಿ ಹೇಳಿಕೊಂಡಿದ್ದರು. ಇಸಿಸ್ ಉಗ್ರ ಸಂಘಟನೆಯಿಂದ ಬೆದರಿಕೆ ಕರೆಯೊಂದು ಬಂದಿದ್ದು, ಅಂತರ್ಜಾಲದ ಮೂಲಕ ಬಂದಿರುವ ಕರೆಯಾಗಿದೆ ಎಂದು ಹೇಳಿದ್ದರು. ಇನ್ನು ದಕ್ಷಿಣ ಚಿಲಿಯಿಂದ ಈ ಕರೆ ಮಾಡಲಾಗಿದ್ದು, ಇಬ್ಬರೂ ನಾಯಕರಿಗೂ ಒಂದೇ ದೂರವಾಣಿಯಿಂದ ಬೆದರಿಕೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿದ್ದು, ತಾನು ಇಸಿಸ್ ಸದಸ್ಯನಾಗಿದ್ದು, ತಮ್ಮನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಸಾಕ್ಷಿ ಮಹಾರಾಜ್ ತಿಳಿಸಿದ್ದಾರೆ.

8. ರಾಜ್ಯದ ಎಲ್ಲಾ ಹೋಬಳಿಯಲ್ಲೂ ವಸತಿ ಶಾಲೆ : ಎಚ್.ಆಂಜನೇಯ

ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ಮುಂದಿನ ಶೈಕ್ಷಣಿಕ ವರ್ಷದಿಂದ ವಸತಿ ಶಾಲೆ ಆರಂಭಿಸುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಪ್ರತಿ ಶಾಲೆಗೆ 10 ಎಕರೆ ಪ್ರದೇಶ, 15 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗುವುದು. ಜೊತೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಿ, ಸಿಬ್ಬಂದಿ ವಸತಿ ಗೃಹ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ವಸತಿ ಶಾಲೆಗಳ ಶಿಕ್ಷಣವನ್ನು ದ್ವಿತೀಯ ಪಿಯುಸಿವರೆಗೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ 100
ವಸತಿ ಶಾಲೆಗಳ ಪ್ರಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಲ್ಲಾ ಹೋಬಳಿಗಳಲ್ಲೂ ವಸತಿ ಶಾಲೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.

9. ಮಲ್ಲಿಕಾರ್ಜುನ ಖರ್ಗೆಗೆ `ವೈ’ ಕ್ಯಾಟಗರಿ ಭದ್ರತೆ

ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆಗೆ ಶೀಘ್ರದಲ್ಲೇ ವೈ ಕ್ಯಾಟಗರಿ ಭದ್ರತೆ ದೊರೆಯಲಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಖರ್ಗೆಗೆ ವೈ ಕ್ಯಾಟಗರಿ ಭದ್ರತೆ ನೀಡುವ ಅಗತ್ಯವಿದೆ ಎಂದು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದ್ದು, ಖರ್ಗೆ ಅವರಿಗೆ ವೈ ಕ್ಯಾಟಗೆರಿ ಭದ್ರತೆ ಒದಗಿಸುವುದು ಖಚಿತವಾಗಿದೆ. ವೈ ಕ್ಯಾಟಗರಿಯಲ್ಲಿ ಒಟ್ಟು 11 ಮಂದಿ ಭದ್ರತಾಧಿಕಾರಿಗಳಿರುತ್ತಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

10. ಅಮೆರಿಕಾದಲ್ಲಿ ಕಾಡ್ಗಿಚ್ಚು : ಸಾವಿರ ಎಕರೆ ಕಾಡು ಭಸ್ಮ

ಕ್ಯಾಲಿಫೋರ್ನಿಯಾದ ದಕ್ಷಿಣದ ಪೆಸಿಫಿಕ್ ಕರಾವಳಿ ಹೆದ್ದಾರಿ 101ರ ಬಳಿ ಮೂರು ದಿನಗಳ ಹಿಂದೆ ಕಾಣಿಸಿಕೊಂಡ ಬೆಂಕಿ ಕಾಡ್ಗಿಚ್ಚಾಗಿ ಪರಿವರ್ತನೆಗೊಂಡು, ಸುಮಾರು 1 ಸಾವಿರ ಎಕರೆ ಪ್ರದೇಶದಲ್ಲಿನ ಸಸ್ಯ ಸಂಕುಲವನ್ನು ನಾಶಪಡಿಸಿದೆ. ಇನ್ನೂ ಕೂಡ ಕಾಡಿನ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶದಲ್ಲಿನ ಸ್ಥಳೀಯರನ್ನು ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ ನೂರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತೆರವುಗೊಳಿಸಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article