ಇಂದಿನ ಟಾಪ್ 10 ಸುದ್ದಿಗಳು..! 07.12.2015

0
61

1. ಟಿವಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಿಷೇಧಕ್ಕೆ ಚಿಂತನೆ – ಸಿಎಂ ಸಿದ್ದರಾಮಯ್ಯ

ಟಿವಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ಪ್ರಸಾರ ನಿರ್ಬಂಧಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ. ಇಂದು ನಗರದಲ್ಲಿ ಡಿ.ಜಿ.ಸಾಗರ್ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಎಲ್ಲಾ ಟಿವಿಗಳಲ್ಲೂ ಪ್ರತಿದಿನ ಜ್ಯೋತಿಷ್ಯ ಪ್ರಸಾರವಾಗುತ್ತದೆ. ಮಾಧ್ಯಮಗಳಲ್ಲಿ ಪ್ರಸಾರವಾಗುವ ಜ್ಯೋತಿಷ್ಯ ಕಾರ್ಯಕ್ರಮಗಳು ಮೌಢ್ಯವನ್ನು ಬಿತ್ತುತ್ತಿವೆ ಎಂದರು. ನಮ್ಮ ಮನೆಯ ಹೆಣ್ಣು ಮಕ್ಕಳು ಸಹ ಇದನ್ನೇ ನೋಡುತ್ತಾರೆ. ಮೊದಲ ಇದರ ಬಗ್ಗೆ ಜನ ಎಚ್ಚೆತ್ತುಕೋಳ್ಳಬೇಕು. ಹೀಗಾಗಿ ಜ್ಯೋತಿಷ್ಯ ಕಾರ್ಯಕ್ರಮ ನಿರ್ಬಂಧಕ್ಕೆ ಚಿಂತನೆ ನಡೆದಿದೆ ಎಂದರು.

2. ಲೋಕಾ ಡೀಲ್ ಪ್ರಕರಣ – ನಾಲ್ವರಿಗೆ ಜಾಮೀನು ನೀಡಲು ಸುಪ್ರಿಂ ನಕಾರ

ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ಮತ್ತೆ ನಿರಾಕರಿಸಿದೆ. ತಕ್ಷಣ ಜಾಮೀನು ನೀಡುವಂತೆ ಕೋರಿ ಆರೋಪಿಗಳಾದ ಲೋಕಾಯುಕ್ತ ಮಾಜಿ ಪಿ.ಆರ್.ಓ ಸೈಯದ್ ರಿಯಾಜ್, ಅಶೋಕ್ ಕುಮಾರ್, ಶಂಕರೇಗೌಡ ಹಾಗೂ ಶ್ರೀನಿವಾಸ್ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ತಕ್ಷಣ ಜಾಮೀನು ನೀಡಲು ನಿರಾಕರಿಸಿ, ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿದೆ.

3. ಬೆಂಗಳೂರಿನಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭ

ಬೆಂಗಳೂರಿನ ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭವಾಗಿದೆ. ದೊಡ್ಡಬಸವಣ್ಣ ಮೂರ್ತಿಗೆ ಕಡಲೆಕಾಯಿ ಹಾರ, ವಿಶೇಷ ಹೂವುಗಳಿಂದ ಅಲಂಕಾರ ಮಾಡಿ ಪೂಜಿಸುವ ಮೂಲಕ ಪರಿಷೆಗೆ ಚಾಲನೆ ನೀಡಲಾಯಿತು. ದೇವಸ್ಥಾನದ ಆಸುಪಾಸು ಸೇರಿದಂತೆ ರಾಶಿ ರಾಶಿ ಕಡಲೆಕಾಯಿಗಳ ಗುಡ್ಡೆಗಳು ಜನರನ್ನ ಆಕರ್ಷಿಸುತ್ತಿವೆ. ಹಸಿ ಕಡಲೆಕಾಯಿ, ಹುರಿದದ್ದು, ಬೇಯಿಸಿದ ಕಾಯಿ ಹೀಗೆ ಅವರವರ ರುಚಿಗೆ ತಕ್ಕಂತೆ ಬೇಕಾದ ಕಡ್ಲೆಕಾಯಿ ಖರೀದಿಸಿ ಜನರು ಎಂಜಾಯ್ ಮಾಡುತ್ತಿದ್ದಾರೆ.

4. ಪ್ರಿಯಕರನ ಅಗಲಿಕೆ ತಾಳದೆ ಯುವತಿ ಆತ್ಮಹತ್ಯೆ

ಪ್ರಿಯಕರನ ಸಾವಿನಿಂದ ಬೇಸರಗೊಂಡ ಯುವತಿಯೊಬ್ಬಳು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಕಸ್ತೂರ್ ಬಾ ರಸ್ತೆಯಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪೂಜಾ ಎನ್ನೋ ಯುವತಿಯ ಪ್ರೀಯಕರ ಚರಣ್ ಕೆಲ ದಿನಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದ. ಇದರಿಂದ ಆಘಾತಕೊಂಡಿದ್ದಳೆನ್ನಲಾದ ಪೂಜಾ `ಐ ಯಾಮ್ ಸಾರಿ’ ಎಂದು ಪತ್ರ ಬರೆದಿಟ್ಟು ಕಟ್ಟಡದ ಮೇಲಿಂದ ಜಿಗಿದು ಸಾವಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.

5. ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ 337 ರನ್ ಅಂತರದ ಜಯ

ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ನಾಲ್ಕನೇ ಟೆಸ್ಟ್ ಪಂದ್ಯವನ್ನು ಇಂದಿನ ಐದನೇ ದಿನದಾಟದಲ್ಲಿ 337 ರನ್ ಗಳ ಭರ್ಜರಿ ಅಂತರದಲ್ಲಿ ಜಯಿಸಿರುವ ಭಾರತ, ನಾಲ್ಕು ಟೆಸ್ಟ್ ಪಂದ್ಯಗಳ ಈ ಸರಣಿಯನ್ನು 3-0 ಅಂತರದಲ್ಲಿ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ.
6. ನ್ಯಾಷನಲ್ ಹೆರಾಲ್ಡ್ ಪ್ರಕರಣ – ಸೋನಿಯಾ, ರಾಹುಲ್ ಗಾಂಧಿಗೆ ಹಿನ್ನಡೆ

ನ್ಯಾಷನಲ್ ಹೆರಾಲ್ಡ್ ಕಂಪನಿಯ ಆಸ್ತಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ರದ್ದುಪಡಿಸಬೇಕು ಎಂದು ಕೋರಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ವಜಾಗೊಳಿಸಿ, ವಿಚಾರಣಾ ಕೋರ್ಟ್ ಗೆ ಹಾಜರಾಗಲೇಬೇಕು ಎಂದು ಸೋಮವಾರ ಸೂಚಿಸಿದೆ.

7. ಆ್ಯಸಿಡ್ ದಾಳಿಗೊಳಗಾವರಿಗೆ ಉಚಿತ ಚಿಕಿತ್ಸೆಗೆ ಸುಪ್ರಿಂ ಸೂಚನೆ

ಆಸಿಡ್ ದಾಳಿಯಿಂದ ಬದುಕುಳಿದವರಿಗೆ ಅಗತ್ಯ ಪರಿಹಾರ, ಪುನರ್ವಸತಿ ಮತ್ತು ಉಚಿತ ಚಿಕಿತ್ಸೆ ನೀಡುವಂತೆ ಹಿಂದಿನ ತೀರ್ಪಿನಲ್ಲಿ ನೀಡಿದ್ದ ಆದೇಶಾನುಸಾರವಾಗಿ ನಡೆದುಕೊಳ್ಳಲು ಎಲ್ಲ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಮ್ ಕೋರ್ಟ್ ಸೂಚಿಸಿದೆ. ಬಿಹಾರದ ಆಸಿಡ್ ದಾಳಿಯ ಸಂಸ್ತ್ರಸ್ತೆಯ ಪ್ರಕರಣದ ವಿಚಾರಣೆಯೊಂದನ್ನು ನಡೆಸುವಾಗ ನ್ಯಾಯಾಧೀಶರಾದ ಎಂ ವೈ ಇಕ್ಬಾಲ್ ಮತ್ತು ಸಿ ನಾಗಪ್ಪನ್ ಈ ಆದೇಶ ನೀಡಿದ್ದಾರೆ. ಇನ್ನು ಉಚಿತ ಚಿಕಿತ್ಸೆಯೊಂದಿಗೆ ಸಂಸ್ರಸ್ತೆಗೆ 10 ಲಕ್ಷ ಪರಿಹಾರ ನೀಡುವಂತೆ ಬಿಹಾರ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

8. ಐಸಿಸ್ ವಿರುದ್ಧ ಹೋರಾಡಿ ಇಸ್ಲಾಂ ವಿರುದ್ಧವಲ್ಲ : ಒಬಾಮಾ

ಐಸಿಸ್ಆಗಲಿ ಅಥವಾ ಯಾವುದೇ ಉಗ್ರ ಸಂಘಟನೆಯಾಗಲೀ ಅಮೆರಿಕ ವಿರುದ್ಧ ಸಮರ ಸಾರಿದರೆ ಆ ಸಂಘಟನೆಯನ್ನು ನಾಶಮಾಡದೇ ಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.
9. ಹಸುಗೂಸಿಗೆ ಯೂನುಸ್ ಎಂದು ಹೆಸರಿಟ್ಟ ಹಿಂದೂ ದಂಪತಿ

ಚೆನ್ನೈ ಪ್ರವಾಹದಲ್ಲಿ ಮುಳುಗಿ ಹೋಗುತ್ತಿದ್ದ ಚಿತ್ರ ಮತ್ತು ಮೋಹನ್ ದಂಪತಿಗೆ ಆಶಾ ಕಿರಣವಾಗಿ ಬಂದಿದ್ದ ಮಹಮದ್ ಯೂನಸ್ರ ಹೆಸರನ್ನೇ ನಿನ್ನೆ ಜನಿಸಿದ ಅವರ ಹೆಣ್ಣು ಮಗುವಿಗೆ ‘ಯೂನಸ್’ ಎಂದು ಹೆಸರಿಸುವ ಮೂಲಕ ಗೌರವ, ಕೃತಜ್ಞತೆ ತೋರಿದ್ದಾರೆ. ಉರಪಕ್ಕಂನಲ್ಲಿ ವಾಸಿಸುತ್ತಿದ್ದ ಚಿತ್ರ ಅವರು ಗರ್ಭಿಣಿಯಾಗಿದ್ದರು. ಮಗುವಿಗೆ ಜನ್ಮ ನೀಡಲು ಕೆಲವೇ ದಿನಗಳು ಉಳಿದಿದ್ದವು. ಆದರೆ ಮಾನ್ಸೂನ್ ನಿಂದ ಹೊಡೆದ ಭಾರಿ ಮಳೆಗೆ ತಮ್ಮ ಮನೆಯೂ ಸಿಕ್ಕಿಹಾಕಿಕೊಂಡು ಕುತ್ತಿಗೆಯವರೆಗೆ ನೀರು ಹರಿದಿತ್ತಂತೆ. ಈ ಸಮಯದಲ್ಲಿ ಸಂಕಷ್ಟದಲ್ಲಿದ್ದವರ ವಿಷಯವನ್ನು ಮೆಸೆಜಿಂಗ್ ಆಪ್ ಮೂಲಕ ತಿಳಿದ ಮೊಹಮ್ಮದ್ ಯೂನಸ್ ಚಿತ್ರಾರನ್ನು ರಕ್ಷಿಸಿದ್ದರು.

10. ಉದ್ಯೋಗ, ಶಿಕ್ಷಣದಿಂದ ಅಸಹಿಷ್ಣುತೆ ನಿವಾರಣೆ – ರತನ್ ಟಾಟಾ

ಉದ್ಯೋಗ, ಶಿಕ್ಷಣದಿಂದ ಅಸಹಿಷ್ಣುತೆ ನಿವಾರಣೆ ಮಾಡಲು ಸಾಧ್ಯ ಎಂದು ಟಾಟಾ ಸಂಸ್ಥೆಯ ಗೌರವಾಧ್ಯಕ್ಷ ರತನ್ ಟಾಟಾ ಹೇಳಿದ್ದಾರೆ. ನಮ್ಮ ದೇಶ ಸಾಮರಸ್ಯದಿಂದ ಕೂಡಿದ್ದು, ನಾವೆಲ್ಲರೂ ಒಂದಾಗಿ ಕಾರ್ಯನಿರ್ವಹಿಸಬೇಕಿದೆ. ಅಲ್ಲದೇ ಒಟ್ಟಾಗಿ ಜೀವಿಸುತ್ತಾ ಸಾಗಬೇಕಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here