ಆಗಸ್ಟ್ 13ರ ಬಂದ್ ನಡೆಯುವುದು ಅನುಮಾನ!? ಸಾರಾ ಗೋವಿಂದ್, ನಾರಾಯಣ ಗೌಡ ಸೇರಿ ಹಲವು ಸಂಘಟನೆಗಳು ಬೆಂಬಲ ವಾಪಸ್
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ವಿರೋಧಿಸಿ ಆಗಸ್ಟ್ 13ರಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ಗೆ ಇದೀಗ ಅನಿಶ್ಚಿತತೆ ಎದುರಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನೀರಿನ ಸಮಸ್ಯೆ ಸದ್ಯಕ್ಕೆ ತೀವ್ರವಾಗಿಲ್ಲ ಎಂಬ ಕಾರಣ ನೀಡಿ ಹಲವು ಕನ್ನಡಪರ ಹಾಗೂ ರೈತಪರ ಸಂಘಟನೆಗಳು ಬಂದ್ನಿಂದ ಹಿಂದೆ ಸರಿಯುವ ಸೂಚನೆ ನೀಡಿವೆ.
ವಾಟಾಳ್ ನಾಗರಾಜ್ ಬಣದೊಂದಿಗೆ ಗುರುತಿಸಿಕೊಂಡಿರುವ ಸಾರಾ ಗೋವಿಂದ್ ಅವರು ಬಂದ್ಗೆ ತಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಕೂಡ ಈಗಾಗಲೇ ಬಂದ್ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿ ಹಿಂದೆ ಸರಿದಿದ್ದಾರೆ.
ಇನ್ನು ಪ್ರವೀಣ್ ಶೆಟ್ಟಿ ಬಣವೂ ಬಂದ್ನಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ಆಗಸ್ಟ್ 13ರಂದು ನಡೆಯಬೇಕಿದ್ದ ಕರ್ನಾಟಕ ಬಂದ್ಗೆ ಮತ್ತಷ್ಟು ಹಿನ್ನಡೆಯಾಗಿದೆ.
ಕರ್ನಾಟಕ ಬಂದ್ಗೆ ಓಲಾ-ಉಬರ್ ಅಸೋಸಿಯೇಷನ್ನಿಂದಲೂ ಇದುವರೆಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಬಂದ್ ನಡೆಸುವುದರಿಂದ ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬಂದ್ನಿಂದ ದಿನಗೂಲಿ ಕಾರ್ಮಿಕರು, ರೈತರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಹೋಟೆಲ್ ಉದ್ಯಮವನ್ನು ಅವಲಂಬಿಸಿರುವವರಿಗೆ ತೊಂದರೆಯಾಗಲಿದೆ ಎಂದು ಹಲವು ಸಂಘಟನೆಗಳು ಹಾಗೂ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಹಲವು ಪ್ರಮುಖ ಸಂಘಟನೆಗಳು ಬೆಂಬಲದಿಂದ ಹಿಂದೆ ಸರಿಯುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 13ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಬಹುತೇಕ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆದರೆ ಬಂದ್ ಕುರಿತು ಅಂತಿಮ ನಿರ್ಧಾರವನ್ನು ಸಂಘಟನೆಗಳು ಅಧಿಕೃತವಾಗಿ ಪ್ರಕಟಿಸಬೇಕಿದೆ. ಹೀಗಾಗಿ ಆಗಸ್ಟ್ 13ರ ಬಂದ್ ನಡೆಯುತ್ತದೆಯೇ ಅಥವಾ ರದ್ದಾಗುತ್ತದೆಯೇ ಎಂಬುದು ಸಂಘಟನೆಗಳ ಮುಂದಿನ ನಿರ್ಧಾರದ ಮೇಲೆ ಅವಲಂಬಿತವಾಗಿದೆ.



