ಕೇರಳದಲ್ಲಿ ಹಲವರನ್ನು ಬಲಿಪಡೆದ ನಿಪಾ ಸೋಂಕು ಕರಾವಳಿಯಿಂದ ಮಲೆನಾಡಿಗೂ ಹರಡಿತೇ ಎಂಬ ಶಂಕೆ ವ್ಯಕ್ತವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಆಸ್ಪತ್ರೆಯಲ್ಲಿ ನಿಪಾ ಸೋಂಕು ಶಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಿಥುನ್ ಎಂಬ ಯುವಕನಿಗೆ ಸೋಂಕು ತಗುಲಿರುವ ಶಂಕೆ ಇದೆ. ಸಾಗರ ಮೂಲದ ಮಿಥುನ್ ಕೇರಳದ ಕಾಸರಗೋಡಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕೇರಳದಲ್ಲಿ ನಿಪಾ ಸೋಂಕು ಹರಡಿದ ಹಿನ್ನೆಲೆಯಲ್ಲಿ ಸಾಗರಕ್ಕೆ ವಾಪಸ್ಸಾಗಿದ್ದರು. ಜ್ವರ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಾಗರದ ಶಿರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ಈಗ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ತಪರೀಕ್ಷೆ ವರದಿ ಬಳಿಕ ಖಚಿತಪಡಿಸುವುದಾಗಿ ಡಿಎಚ್ ಒ ಡಾ. ವೆಂಕಟೇಶ್ ತಿಳಿಸಿದ್ದಾರೆ.