No menu items!
9.3 C
Munich
Wednesday, April 29, 2026

ಕಲ್ಬುರ್ಗಿ ಜೈಲಿನಿಂದ ಕೈದಿಗಳು ಪರಾರಿ..! ಜೈಲಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ..?

Must read

 

ಅಲ್ಲಿ ಎಲ್ಲವೂ ಇದೆ, ಎಲ್ಲವೂ ಸಾಧ್ಯವಿದೆ, ಎಲ್ಲವೂ ನಡೆಯುತ್ತಿದೆ. ಅಲ್ಲಿಂದ ನಿಂತು ಚುನಾವಣೆಗೆ ನಿಲ್ಲುವುದರಿಂದ ಹಿಡಿದು, ಡೀಲಿಂಗು, ಸ್ಮಗ್ಲಿಂಗು, ಕೊಲೆ, ಲವ್ವು, ಮೋಸ, ವಂಚನೆ, ಡ್ರಗ್ಸು, ಸೆಕ್ಸು, ಫಿಕ್ಸು ಎಲ್ಲವೂ ಅಂದ್ರೇ ಎಲ್ಲವೂ ಸಾಧ್ಯವಿದೆ. ಯಾಕಂದ್ರೇ ಅದು ಜೈಲು, ವ್ಯವಸ್ಥೆ ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿರುವ ಹೆಡ್ಡಾಫೀಸು..!

ಜೈಲಿನಲ್ಲಿ ಎಲ್ಲವೂ ನಡೆಯುತ್ತಿದೆ ಎನ್ನುವುದಕ್ಕಿಂತ ನಡೀಲೇಬೇಕು. ಅದರಲ್ಲೂ ಮೊಬೈಲ್ ಹಾವಳಿಯಿಟ್ಟ ನಂತರ ಜೈಲಿನಿಂದಲೇ ಡೀಲು ಡೌಲುಗಳು ತೆರಪಿಲ್ಲದೆ ನಡೆಯುತ್ತಿದೆ. ಹೊರ ಜಗತ್ತಿನಲ್ಲಿದ್ದುಕೊಂಡು ಕ್ರೈಂ ನಿಭಾಯಿಸುವುದಕ್ಕಿಂತ ಈಸಿಯಾಗಿ ಜೈಲಿನಲ್ಲಿದ್ದುಕೊಂಡು ಹೊರಜಗತ್ತನ್ನು ನಿಯಂತ್ರಿಸುವುದು ಸೋಬಿಯಾಗಿದೆ. ಜೈಲಿನಲ್ಲಿ ನಡೆಯುವ ಪ್ರತಿಯೊಂದು ಅಕ್ರಮ ಚಟುವಟಿಕೆಗಳ ಹಿಂದೆ ಅಧಿಕಾರಿಗಳ ಬೆಂಬಲ ಇದೆ. ಅವರ ಆಶೀರ್ವಾದ ಇಲ್ಲದೆ ಜೈಲೊಳಗೆ ಒಂದು ಕಡ್ಡಿಯೂ ಆಚೀಚೆ ಹೋಗಲು ಸಾಧ್ಯವಿಲ್ಲ. ಅಧಿಕಾರಿಗಳ ಮೈಮರೆವು, ವೃತ್ತಿಯ ಕಡೆಗಿರುವ ತಾತ್ಸಾರ- ಸೋಂಬೇರಿತನ ಇವೆಲ್ಲಕ್ಕೂ ಕಾರಣ ಅಂದ್ರೆ ತಪ್ಪಲ್ಲ. ಇದೇನು ಜೈಲೋ ಮಾವನ ಮನೆಯೋ ಎಂಬ ಅನುಮಾನ ಬರುವಂತೆ ಮಾಡಿದೆ.

ಕೆಲ ತಿಂಗಳ ಹಿಂದೆ ಚಿತ್ರದುರ್ಗದ ಜೈಲಿನಿಂದ ಪರಾರಿಯಾಗಿದ್ದ ಜೀವಾವಧಿ ಶಿಕ್ಷೆಗೀಡಾಗಿದ್ದ ಮಂಜುನಾಥ್ನನ್ನೇ ತೆಗೆದುಕೊಳ್ಳಿ. ಅವನು ಪರಾರಿಯಾಗುವ ಬಿಳಿ ಸಮವಸ್ತ್ರ ಬದಲಾಯಿಸಿ, ಬಣ್ಣದ ಬಟ್ಟೆ ಹಾಕ್ಕೊಂಡಿದ್ದ. ಜೀವಾವಧಿ ಶಿಕ್ಷೆಗೀಡಾದ ಕೈದಿಗೆ ಅಷ್ಟು ಸುಲಭಕ್ಕೆ ಬಣ್ಣದ ಬಟ್ಟೆಗಳು ಹೇಗೆ ಸಿಗುವುದಿಕ್ಕೆ ಸಾಧ್ಯ..? ಸಂಜೆ ನಾಲ್ಕು ಮೂವತ್ತರ ಹೊತ್ತಿಗೆ ಕೈದಿಗಳನ್ನು ಬ್ಯಾರಕ್ಕಿನಿಂದ ಆವರಣಕ್ಕೆ ಬಿಟ್ಟಿದ್ದರು. ಈ ಸಂದರ್ಭದಲ್ಲಿ ಮಂಜುನಾಥ ಇಸ್ತ್ರಿ ವಿಭಾಗಕ್ಕೆ ಹೋಗಿದ್ದಾನೆ. ಅಲ್ಲಿಯೇ ಸಮವಸ್ತ್ರ ಬದಲಿಸಿದ್ದಾನೆ. ಇದಕ್ಕೆ ಅಲ್ಲಿನವರ ಬೆಂಬಲ ಇಲ್ಲದೇ ಇರುತ್ತಾ..? ಬಟ್ಟೆ ಬದಲಿಸಿದ ನಂತರ ನೇರವಾಗಿ ಆಡಳಿತ ಕಚೇರಿ, ದ್ವಾರ ಬಾಗಿಲಿನ ಕಡೆ ಹೋಗಿದ್ದಾನೆ. ಅಲ್ಲಿ ಸಂದರ್ಶಕರ ಕೈಮೇಲೆ ಹಾಕುವ ಸೀಲ್ ಹಾಕಿಸಿಕೊಂಡಿದ್ದಾನೆ. ಇಷ್ಟೆಲ್ಲ ಆದನಂತರ ಮೈನ್ ಗೇಟ್ ಮೂಲಕ ಹೊರಗಡೆ ಹೊರಗೆ ಹೋಗಲು ಯತ್ನಿಸಿದ್ದಾನೆ. ಆಗ ಅಲ್ಲಿದ್ದ ಸಿಬ್ಬಂದಿ ಅವನನ್ನು ತಡೆದಿದ್ದಾರೆ. ಇದರ ಸೂಚನೆಯಿದ್ದ ಮಂಜುನಾಥ್ ಮೊದಲೇ ಪ್ಲಾನ್ ಮಾಡಿಕೊಂಡಿದ್ದ. ಪೆರೋಲ್ ಮೇಲೆ ಹೊರಗಿದ್ದೇನೆ, ಅದು ಮುಗಿಯಲು ಇನ್ನೊಂದು ವಾರವಿದೆ. ಪೆರೋಲ್ ಅವಧಿ ವಿಸ್ತರಿಸಲು ಮನವಿ ಮಾಡಲು ಬಂದಿದ್ದೇ ಅಂತ ಕೈ ಮೇಲಿದ್ದ ಸೀಲ್ ತೋರಿಸಿದ್ದ. ಅಷ್ಟೇ ಸಿಬ್ಬಂದಿ ಅವನನ್ನು ಹೊರಗಡೆ ಬಿಟ್ಟಿದ್ದ. ಯಕಃಶ್ಚಿತ್ ಅವನ ಮಾತಿನ ಸತ್ಯಾಸತ್ಯತೆ ತಿಳಿದುಕೊಳ್ಳೋ ಪ್ರಯತ್ನ ಮಾಡಿಲ್ಲ. ಇವ್ರು ನಮ್ಮ ಪೊಲೀಸ್ರು- ಶಬ್ಬಾಸ್.

ಈ ಹೊತ್ತಿಗೆ ಜೈಲಿನ ಕಂಪೌಂಡ್ ಜಿಗಿದು ಎಸ್ಕೇಪ್ ಆಗಿದ್ದ ಕುಖ್ಯಾತ ಸೈಕೋ ಕಿಲ್ಲರ್ ಜಯಶಂಕರ್ ನೆನಪಾಗ್ತಾನೆ. ಒಂಟಿ ಮಹಿಳೆಯರಿದ್ದ ಮನೆಗೆ ನುಗ್ಗಿ ಅವರನ್ನು ರೇಪ್ ಮಾಡಿ ಕೊಲ್ಲುತ್ತಿದ್ದ ಈ ಸೀರಿಯಲ್ ಕಿಲ್ಲರ್ ಸಿಕ್ಕಿದ್ದೇ ಯಮಸಾಹಸದಿಂದ. ಹಾಗೆ ಕೈಗೆ ಸಿಕ್ಕವ್ನು ಜೈಲಿನಿಂದ ಆರಾಮಾಗಿ ಎಸ್ಕೇಪ್ ಆಗಿದ್ದ. ಇದರಿಂದ ಇಡೀ ರಾಜ್ಯ ಮಾತ್ರವಲ್ಲ, ಪಕ್ಕದ ತಮಿಳುನಾಡು ಕೂಡ ನಡುಗಿಹೋಗಿತ್ತು. ಏಕೆಂದರೇ ಈ ಸೈಕೋ ಶಂಕರ ಕರ್ನಾಟಕ-ತಮಿಳುನಾಡು, ಎರಡೂ ರಾಜ್ಯಕ್ಕೂ ಬೇಕಾಗಿದ್ದ. ಎರಡೂ ರಾಜ್ಯದಲ್ಲೂ ಅನೇಕ ಅತ್ಯಾಚಾರ, ಕೊಲೆಗಳನ್ನು ಮಾಡಿದ್ದ. ಇಂತ ಜಯಶಂಕರ್ ಎಸ್ಕೇಪ್ ಆಗಿದ್ದೇ, ಪೊಲೀಸ್ರು ಮೈ ಕೊಡವಿ ಎದ್ದುನಿಂತರು. ತಮಿಳುನಾಡು- ಕರ್ನಾಟಕದ ಮೂಲೆ ಮೂಲೆಯಲ್ಲಿ ಅವನನ್ನು ಹುಡುಕಾಡಲಾಯಿತು. ಆದ್ರೆ ಅವ್ನು ಅಲ್ಲೇ ಪರಪ್ಪನ ಅಗ್ರಹಾರದ ಆಸುಪಾಸಿನಲ್ಲೇ ತಗಲಾಕ್ಕೊಂಡಿದ್ದ. ಆಮೇಲೆ ಇದೇ ಪರಪ್ಪನ ಅಗ್ರಹಾರದಲ್ಲಿ ಆನಂದ್ ಎಂಬ ಕೈದಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದಿದ್ದ. ಆ ಕ್ಷಣ ಪೊಲೀಸ್ ಪೇದೆಯ ಕೆನ್ನೆಗೆ ಚಾಕುವಿನಿಂದ ಕುರ್ಪ್ ಹೊಡೆದಿದ್ದ.

ಇಂತಹ ನೂರಾರು ಪ್ರಕರಣಗಳು ಉದಾಹರಣೆಗೆ ಸಿಗುತ್ತವೆ. ಇದೀಗ ಕಲ್ಬುರ್ಗಿಯಲ್ಲಿ ನಾಲ್ಕು ಕೈದಿಗಳು ಆರಾಮಾಗಿ ಬ್ಯಾರಕ್ಕಿನ ಗೊಡೆ ಕೊರೆದು ಪರಾರಿಯಾಗಿದ್ದಾರೆ. ಒಬ್ಬೊಬ್ಬರ ಮೇಲೂ ಕೊಲೆ, ಅತ್ಯಾಚಾರದಂತಹ ಕೇಸುಗಳಿವೆ. ಅಲ್ಲಿನ ಸಿಬ್ಬಂದಿಗಳು ಇಷ್ಟೆಲ್ಲಾ ನಡೆಯುವಾಗ ಚಿರನಿದ್ರೆಯಲ್ಲಿದ್ರಾ..? ಗೊತ್ತಿಲ್ಲ. ಜೈಲುಗಳು ಅದ್ಯಾವ ಪರಿ ಕೆಟ್ಟು ಕೆರ ಹಿಡಿದು ಕುಂತಿದೆಯೆಂದರೇ ಇಲ್ಲಿ ಎಲ್ಲಾ ಅಕ್ರಮಗಳು ಸೋಬಿಯಾಗಿ ನಡೆಯುತ್ತದೆ. ಇಲ್ಲಿ ವ್ವವಸ್ಥೆಯ ಬೆಂಬಲವಿಲ್ಲದೆ ಏನೂ ನಡೆಯಲು ಸಾಧ್ಯವಿಲ್ಲ. ಎಲ್ಲವನ್ನು ಹೇಳುವ ಮುನ್ನ ಕಲೆಕ್ಷನ್ ಲೆಕ್ಕಾಚಾರಕ್ಕೆ ಬನ್ನಿ.

ದಿನಕ್ಕೆ ಜೈಲಿಗೆ ಏನಿಲ್ಲವೆಂದರೂ ಮುನ್ನೂರರಿಂದ ನಾಲ್ಕುನೂರು ಜನ ವಿಸಿಟರ್ಸ್ ಇರುತ್ತಾರೆ. ಒಬ್ಬರಿಂದ ಇಪ್ಪತ್ತು ರೂಪಾಯಿ ಅಂದರೇ ದಿನಕ್ಕೆ ನಾಲ್ಕು ನೂರು ಜನರಿಂದ ಕಲೆಕ್ಟ್ ಆಗೋ ಎಂಟ್ರೆನ್ಸ್ ವಸೂಲಾತಿ ಎಷ್ಟಾಗಬಹುದು..? ಲೆಕ್ಕ ನೀವೇ ಹಾಕಿ. ಇದು ಜೈಲು ಅಕ್ರಮದ ಮೊದಲ ಹಂತ. ದೇಶದಲ್ಲಿರುವ 1382 ಜೈಲಿನಲ್ಲಿ ಆವರಣ ಎಂಟ್ರೆನ್ಸ್ ವಸೂಲಿ ಮೂವತ್ನಾಲ್ಕು ಕೋಟಿ ಐವತ್ತೈದು ಲಕ್ಷವಾಗುತ್ತದೆ. ಇದು ಕೇವಲ ಇಪ್ಪತ್ತು ರೂಪಾಯಿ ಲೆಕ್ಕವಷ್ಟೇ. ಹಲವು ಕಡೆ, ಹಲವು ಸಂದರ್ಭದಲ್ಲಿ ತಲೆಯೊಂದಕ್ಕೆ ಐವತ್ತು, ನೂರು ರೂಪಾಯಿಯಷ್ಟು ವಸೂಲಾತಿಯಾಗುತ್ತದೆ. ಒಮ್ಮೊಮ್ಮೆ ಜೈಲೊಳಗೆ ಸರಬರಾಜಾಗುವ ಸಾಮಾಗ್ರಿಗಳಿಗಾಗಿ ತಲೆಯೊಂದಕ್ಕೆ ಐನೂರರಿಂದ ಸಾವಿರ ರೂಪಾಯಿಯನ್ನು ಪೀಕಲಾಗುತ್ತದೆ. ಹಾಳುಮೂಳು ಅಂತೆಲ್ಲ ಕೌಂಟ್ ಮಾಡಿದ್ರೇ ತಿಂಗಳಿಗೆ ಅದು ಐವತ್ತು ಕೋಟಿಯಿಂದ, ಎಪ್ಪತ್ತೈದು ಕೋಟಿಯ ಬಾಬತ್ತಾಗುತ್ತದೆ.

ಈ ಸಾಮಾನ್ಯ ಎಂಟ್ರಿಗೆ ಯಾವುದೇ ಫೀಸ್ ತೆಗೆದುಕೊಳ್ಳುವಂತಿಲ್ಲ. ದಿನದ ಎರಡು ಅವಧಿಯಲ್ಲಿ ಕೈದಿಗಳನ್ನು ನೋಡಲು ಅವಕಾಶವಿರುತ್ತದೆ. ಹೆಚ್ಚಾಗಿ ಯರ್ರಾಬಿರ್ರಿ ನೂಕು ನುಗ್ಗಲಿರುತ್ತದೆ. ಹಾಗಾಗಿ ಅಲ್ಲೂ ಕೂಡ ಅಡ್ಜಸ್ಟ್ಮೆಂಟ್ ಇರುತ್ತೆ. ಮಿನಿಮಮ್ ಹಂಡ್ರೆಡ್ ರುಪೀಸ್ ಕೊಟ್ಟವರಿಗೆ ಹೆಚ್ಚು ಹೊತ್ತು ತಮ್ಮವರ ಜೊತೆ ಮಾತನಾಡಲು ಅವಕಾಶವಿರುತ್ತದೆ. ನೂರು ಕೊಟ್ಟು ಮಾತಾಡುವವರು ಅಂದಾಜು ನಾನೂರು ಜನರ ಪೈಕಿ ಅಟ್ಲಿಸ್ಟ್ ಮುನ್ನೂರು ಜನರಾದರು ಇರುತ್ತಾರೆ. ಮುನ್ನೂರನ್ನು ನೂರಕ್ಕೆ ಗುಣಿಸಿ ನೋಡಿದರೇ, ಅದು ಮೂವತ್ತು ಸಾವಿರವಾಗುತ್ತದೆ. ಒಂದು ಜೈಲಿನಲ್ಲಿ ದಿನವೊಂದಕ್ಕೆ ಮೂವತ್ತು ಸಾವಿರ ಅಂದರೇ ತಿಂಗಳಿಗೆ ಒಂಬತ್ತು ಲಕ್ಷದಿಂದ ಹತ್ತು ಲಕ್ಷದಷ್ಟು ವಸೂಲಿಯಾಗುತ್ತದೆ. ಹತ್ತು ಲಕ್ಷವನ್ನ ಸಾವಿರದ ಮುನ್ನೂರ ಎಂಬತ್ತೆರಡು ಜೈಲುಗಳಿಂದ ಗುಣಿಸಿದರೇ ನೂರ ಮೂವತ್ತು ಕೋಟಿ ಎಂಬತ್ತೆರಡು ಲಕ್ಷವಾಗುತ್ತದೆ. ಹಾಗೂ.. ಹೀಗೂ ನೂರೈವತ್ತು ಕೋಟಿ ಕಲೆಕ್ಷನ್ಗೆ ಮೋಸವಿಲ್ಲ.

ಜೈಲಿನ ಎಲ್ಲಾ ತೆರನಾದ ವಿತೌಟ್ ರಸೀದಿ ವಸೂಲಾತಿಯಲ್ಲಿ ಯಮ ಭಯಂಕರ ವಸೂಲಾತಿ ನಡೆಯೋದು ಜೈಲಿನ ವಿಶೇಷ ಎಂಟ್ರಿಯಲ್ಲಿ. ವಿಶೇಷ ಎಂಟ್ರಿ ಅಂದ್ರೇ ಖೈದಿಗಳಿಗೆ ಸಂಬಂಧಿಸಿದವರು ಜೈಲಿನ ಕೋಣೆಯೊಂದರಲ್ಲಿ ಒಂದೆರಡು ಘಂಟೆಗಳ ಕಾಲ ಲೀಲಾಜಾಲವಾಗಿ ಹರಟಿಬರುವುದು. ಅಲ್ಲಿ ಪೊಲೀಸರು ಒಬ್ಬ ವಿಶೇಷ ಎಂಟ್ರಿಗೆ ಮಿನಿಮಮ್ ಐನೂರರಿಂದ ಸಾವಿರ ರೂಪಾಯಿಯವರೆಗೆ ವಸೂಲಿ ಮಾಡ್ತಾರೆ. ಅಷ್ಟೆಲ್ಲಾ.. ಹಣ ಕೊಟ್ಟು ಅಂದಾಜು ನೂರು ಜನರು ವಿಶೇಷ ಸಂದರ್ಶನಕ್ಕೆ ಹೋಗುತ್ತಾರೆ. ಕೆಲವರ ಎಂಟ್ರಿಗೆ ಜೈಲೊಳಗಿರೋ ವಿಚಾರಣಧೀನ ಅಥವಾ ಶಿಕ್ಷೆಗೊಳಪಟ್ಟ ಖೈದಿಗಳೇ ಮೊದಲೇ ದುಡ್ಡು ಕೊಟ್ಟು ವ್ಯವಸ್ಥೆ ಮಾಡಿರುತ್ತಾರೆ. ಅದರ ಅಂದಾಜು ಕಲೆಕ್ಷನ್ ಲೆಕ್ಕ ಹಾಕಿದರೇ, ಒಂದು ಜೈಲಿನಿಂದ ನೂರು ಜನರು ಅಂದರೇ ಅಂದಾಜು ಒಂದು ಲಕ್ಷ ವಸೂಲಾತಿಯಾಗುತ್ತದೆ. ಅಂದರೇ ತಿಂಗಳಿಗೆ ಮೂವತ್ತು ಲಕ್ಷ ಕಲೆಕ್ಷನ್. 1382 ಜೈಲಿನಿಂದ ಅಂದಾಜು ನಾನೂರು ಕೋಟಿ ಕಲೆಕ್ಷನ್ ಆಗುತ್ತದೆ. ಜೈಲ್ ಎಂಟ್ರೆನ್ಸ್, ಸಾಮಾನ್ಯ ಪ್ರವೇಶ, ವಿಶೇಷ ಪ್ರವೇಶ – ಇವೆಲ್ಲದರ ತಿಂಗಳ ಅಕ್ರಮ ಆದಾಯವನ್ನು ವರ್ಷಕ್ಕೆ ಲೆಕ್ಕ ಹಾಕಿದರೇ ಅಂದಾಜು 7296 ಕೋಟಿಯಾಗುತ್ತದೆ. ಇವಿಷ್ಟು ಹಣ ಎಷ್ಟು ಜನರ ಬೊಕ್ಕಸವನ್ನು ತುಂಬಿಸಬಹುದು ನೀವೇ ಹೇಳಿ.

ಹಾಗೆಯೇ ಜೈಲೊಳಗೆ ಡ್ರಗ್ಸು, ವೆಪನ್ಸು ಸರಬರಾಜು, ಅಂಡರ್ವರ್ಲ್ಡ್ ಚಟುವಟಿಕೆ ಹೇಗೆಲ್ಲಾ ಆಗುತ್ತೆ ಅನ್ನೋದನ್ನ ತಿಳಿದುಕೊಂಡರೂ ಹುಬ್ಬೇರುತ್ತದೆ. ಕೆಲವು ಸ್ಯಾಂಪಲ್ಗಳು ಇಲ್ಲಿವೆ ಕೇಳಿ. ಕ್ರಿಕೇಟ್ ಆಡುವ ಚೆಂಡಿನ ಮೇಲ್ಭಾಗವನ್ನು ಕತ್ತರಿಸಲಾಗುತ್ತದೆ. ಅದರಲ್ಲಿ ಗಾಂಜಾ, ಅಫೀಮು, ಮಾದಕ ಪದಾರ್ಥ, ಬ್ಲೆಡು ಇನ್ನಿತರೆ ಸೂಕ್ಷ್ಮ ನಿಷೇಧಿತ ವಸ್ತುಗಳನ್ನು ಹಾಕಿ ಮೇಲಿನಿಂದ ಗಮ್ನಿಂದ ಮುಚ್ಚಿ, ದಾರ ಸುತ್ತಲಾಗುತ್ತೆ. ಆನಂತರ ಜೈಲಿನ ಹೊರ ಆವರಣದ, ಆಯಕಟ್ಟಿನ ಸ್ಥಳದಲ್ಲಿ ನಿಂತು ಅದನ್ನು ಜೈಲಿನೊಳಗೆ ಥ್ರೋ ಮಾಡಲಾಗುತ್ತದೆ. ಅತ್ತ ಅದನ್ನು ಮೊದಲೇ ಮಾಹಿತಿಯಿದ್ದ ಕೈದಿಗಳು, ಅಥವಾ ರೌಡಿಗಳು ಕಲೆಕ್ಟ್ ಮಾಡಿಕೊಳ್ಳುತ್ತಾರೆ. ಇವೆಲ್ಲ ಸಿಬ್ಬಂಧಿಗಳು ಊಟಕ್ಕೆ ಹೋದಾಗ ಅಥವಾ, ಕೆಲ ಸಿಬ್ಬಂದಿಗಳ ಕೃಪೆಯಿಂದ ಜೈಲಿನಲ್ಲಿ ನಿರಾತಂಕವಾಗಿ ನಡೆಯುತ್ತದೆ. ಇನ್ನು ಜೈಲಿನಲ್ಲಿರೋ ಕೆಲ ಹಣವಂತ ಕೈದಿಗಳು ಅಥವಾ ರೌಡಿಗಳನ್ನು ಭೇಟಿಯಾಗಲು ಬರುವ ಅವರ ಕೆಲ ಚೇಲಾಗಳು, ಹುಟ್ಟಿದ ಹಬ್ಬ, ಅನಾರೋಗ್ಯದ ವಿಚಾರ ಹೇಳಿ ಹಣ್ಣು ಹಂಪಲು, ಕೇಕುಗಳನ್ನು ತರುತ್ತಾರೆ. ಅದರಲ್ಲಿ ನಿಷೇಧಿತ ವಸ್ತುಗಳನ್ನು ತುಂಬಿಸಿರುತ್ತಾರೆ. ಕೇಕ್ನಲ್ಲಿ ಶಾರ್ಪ್ ಬ್ಲೇಡ್, ಹಣ್ಣಿನ ಬುಟ್ಟಿಯಲ್ಲಿ ರಿವಾಲ್ವರ್ಗಳು ಜೈಲಿನೊಳಕ್ಕೆ ಅನಾಯಾಸವಾಗಿ ಹೋಗಿಬಿಡುತ್ತೆ. ಈ ತಂತ್ರಗಳಲ್ಲಿ ಕೆಲ ರೌಡಿಗಳ ಹತರಾಗಿದ್ದಾರೆ. ರೌಡಿ ಬಲರಾಮನನ್ನು ಇದೇ ರೀತಿಯಾಗಿ ಕೊಲ್ಲಲಾಯಿತು. ಇತ್ತೀಚೆಗೆ ಮೈಸೂರು ಜೈಲಿನಲ್ಲಿ ಪುಡಿ ರೌಡಿ ಟಿಬೆಟ್ ಬಾಲಾಜಿ, ಬೆತ್ತನಗೆರೆ ಸೀನನನ್ನು ಶೂಟ್ ಮಾಡಿದ್ದ. ಇಂಥ ಅನಾಹುತಕ್ಕೆಲ್ಲಾ ಅಲ್ಲಿರೋ ಕಮಿಟ್ಮೆಂಟ್ ಅಧಿಕಾರಿಗಳೇ ಕಾರಣರಾಗಿರುತ್ತಾರೆ.

ಯಾವತ್ತು ಜೈಲಿನಲ್ಲಿರುವ ಖೈದಿಗಳು ಅಥವಾ ರೌಡಿಗಳಿಗೆ ಅನಾಯಾಸವಾಗಿ ಮೊಬೈಲ್ ಸಿಕ್ಕಿತೋ ಆವತ್ತಿನಿಂದ ಅಂಡರ್ವಲ್ಡರ್್ ರಿವಾಜುಗಳೇ ಬದಲಾಗಿತ್ತು. ಜೈಲಿನಲ್ಲೇ ಕುಂತು ಹೊರ ಜಗತ್ತನ್ನು ನಿಭಾಯಿಸತೊಡಗಿದರು. ಹಫ್ತಾ, ಲಿಟಿಗೇಷನ್, ರಿಯಲ್ ಎಸ್ಟೆಟ್, ಹಲ್ಲೆ, ಕೊಲೆ ಸಾಕಷ್ಟು ಕೃತ್ಯಗಳನ್ನು ಜೈಲಿನಲ್ಲೇ ಕುಂತು ಮಾಡಿಸತೊಡಗಿದರು. ದೊಡ್ಡ ದೊಡ್ಡ ಉದ್ಯಮಿಗಳಿಗೆ ಜೈಲಿನಿಂದಲೇ ಧಮ್ಕಿ ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪರಿಪಾಠ ಶುರುವಾಗಿತ್ತು. ಮೊಬೈಲ್ ಎಂಬ ಮಾಯೇ ಅಂಡರ್ವರ್ಲ್ಡ್ ಇನ್ನಿಲ್ಲದಂತೆ ಅಟ್ಟಹಾಸಗೈಯ್ಯಲು ಕಾರಣವಾಗಿತ್ತು. ಈ ಮೊಬೈಲ್ ಜೈಲೊಳಗೆ ಸರಬರಾಜಾಗೋದು ಕೂಡ ಅಧಿಕಾರಿಗಳ ಕಮಿಟ್ಮೆಂಟ್ನಿಂದಲೇ ಅನ್ನೋದು ಅಸಲಿ ಸತ್ಯ. ಹೊರಗಡೇ ಎರಡು ಸಾವಿರ ಬೆಲೆಯಲ್ಲಿ ಸಿಗುವ ಮೊಬೈಲ್ ಅನ್ನು ಅಲ್ಲಿನ ಕೆಲ ಜೊಲ್ಲು ಅಧಿಕಾರಿಗಳು ಐದು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿಗೆ ಒಳಗಿರುವವರಿಗೆ ಪೂರೈಸುತ್ತಾರೆ. ಇಂಟರ್ನೆಟ್ ಸೌಲಭ್ಯ ಇರೋ ಮೊಬೈಲ್ಗೆ ಮತ್ತಷ್ಟು ದಂಡ ತೆರಬೇಕು. ಇನ್ನು ಜೈಲಿನಲ್ಲಿ ಮೊಬೈಲ್ ಜಾಮರ್ ಅಳವಡಿಕೆ ಎಲ್ಲಾ ಕೇವಲ ಕಥೆಗಳು, ಅಥವಾ ನಾಮಕಾವಸ್ತೆ ಅನ್ನಬಹುದು..!

ಹಾಗೆಯೇ ಜೈಲಿನಲ್ಲಿ ಲೈಂಗಿಕ ದೌರ್ಜನ್ಯಗಳೇನು ಹೊಸತಲ್ಲ, ಹೆಚ್ಚಾಗಿ ಸಹಮತದ ಸೆಕ್ಸ್ ಅಲ್ಲಿ ನಡೆಯುತ್ತದೆ. ಒಂದೇ ಲಿಂಗದ ಕೈದಿಗಳು ಹೆಚ್ಚಾಗಿ ಸೆಕ್ಸ್ ನಲ್ಲಿ ಪಾಲ್ಗೊಳ್ಳುತ್ತಾರೆ. ಅಜೀವಾವಧಿ, ದೀರ್ಘಾವಧಿ ಶಿಕ್ಷೆಗೊಳಗಾದ ಕೈದಿಗಳಲ್ಲಿ ಹಲವರು ಲೈಂಗಿಕ ಆಕಾಂಕ್ಷೆಗಳು ತಡೆಯದಿದ್ದಾಗ, ಹೊಸ ಕೈದಿಗಳ ಮೇಲೆ ಅಕ್ಷರಶಃ ಅತ್ಯಾಚಾರ ಮಾಡಿಬಿಡುತ್ತಾರೆ. ಕೆಲವರು ಮಹಿಳಾ ಕೈದಿಗಳನ್ನು ಗೊತ್ತು ಮಾಡಿಕೊಂಡಿರುತ್ತಾರೆ. ಮಹಿಳಾ ಕೈದಿಗಳು ಹಾಗೂ ಪುರುಷ ಖೈದಿಗಳ ನಡುವೆ ಸೆಕ್ಸ್ ನಡೆಯುತ್ತೆ ಅಂದ ಕೂಡಲೇ ಎಲ್ರಿಗೂ ಸಾಧ್ಯವಿಲ್ಲ. ಅದು ಸಾಕಷ್ಟು ಹೈಡ್ ಆಗಿ ನಡೆಯೋ ಹಾದರ. ದೊಡ್ಡ ಮೊತ್ತದ ವಿಲೇವಾರಿ ನಡೆಯಲೇಬೇಕು. ಇಲ್ಲಿ ಪಿಂಪ್ ಕೆಲಸವನ್ನು ಯಾರು ಮಾಡುತ್ತಾರೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇತ್ತೀಚೆಗೆ ಪರಪ್ಪನ ಅಗ್ರಾಹಾರದಲ್ಲಿ ಲೈಂಗಿಕ ದೌರ್ಜನ್ಯವಾಗುತ್ತಿದೆ ಎಂದು ಮಹಿಳಾ ಕೈದಿಗಳು ಪತ್ರ ಬರೆದು ಅಹವಾಲು ಕೊಟ್ಟಿರೋದು ಈ ಪ್ರಕರಣಕ್ಕೆ ತಾಳೆಯಾಗುತ್ತದೆ. ಸಣ್ಣ-ಸಣ್ಣ ಕ್ರೈಂಗಳಿಂದ ಹಿಡಿದು ದೊಡ್ಡಮಟ್ಟದ ಕ್ರೈಂಗಳವರೆಗೂ ಜೈಲ್ ಶೆಲ್ಟರ್ ಒದಗಿಸುತ್ತದೆ. ಅಲ್ಮೋಸ್ಟ್ ಅಪರಾಧ ಪ್ರಕರಣಗಳಲ್ಲಿ ಜೈಲ್ ಲಿಂಕ್ ಇರುತ್ತದೆ. ಎಷ್ಟೆಲ್ಲಾ ಆರೋಪ, ಆತಂಕ, ಅನಾಹುತಗಳು ನಡೆದರೂ ಆಡಳಿತ ಮತ್ತು ವ್ಯವಸ್ಥೆ ಈ ವಿಚಾರದಲ್ಲಿ ನಿರ್ದಾಕ್ಷೀಣ್ಯ ಕ್ರಮ ತೆಗೆದುಕೊಳ್ಳುತ್ತಿಲ್ಲ. ಏಕೆಂದರೇ ಜೈಲಿನ ಎಲ್ಲಾ ರೀತಿಯ ಅಕ್ರಮಗಳಿಂದ ವರ್ಷಕ್ಕೆ ಏನಿಲ್ಲವೆಂದರೂ ಇಪ್ಪತ್ತೈದು ಸಾವಿರ ಕೋಟಿ ಆದಾಯವಿದೆ ಎನ್ನಲಾಗುತ್ತಿದೆ. ಅಂದಮೇಲೆ ಅಕ್ರಮಕ್ಕೆ ಕಡಿವಾಣ ಸಾಧ್ಯವೇ..!?

ಒಟ್ಟಿನಲ್ಲಿ ಜೈಲೆಂಬ ಅಷ್ಟೂ ಅಕ್ರಮಗಳ ಹೆಡ್ಡಾಫೀಸು.. ತಪ್ಪಿತಸ್ತರಿಗೆ ಭಯ ಹುಟ್ಟಿಸೋ ಬದಲು ಹನಿಮೂನ್ ಅನುಭವವನ್ನು ನೀಡುತ್ತಿದೆ. ಕಾಸಿನ ಕಿಮ್ಮತ್ತಿನ ಮುಂದೆ ನ್ಯಾಯ, ಅನ್ಯಾಯದ ಪರಾಮರ್ಶೆ, ಹಾಳೂಮೂಳೆಲ್ಲ ಕೆಲಸಕ್ಕೆ ಬರುತ್ತಿಲ್ಲ. ಒಂದಂತೂ ಪಕ್ಕ, ಜಗತ್ತಿರುವವರೆಗೆ ಜೈಲಿರುತ್ತದೆ, ಜೈಲಿರುವವರೆಗೆ ಅಲ್ಲಿ ಅವ್ಯವಸ್ಥೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ.

  • ರಾ ಚಿಂತನ್

POPULAR  STORIES :

87+ರ ಯುವತಿ, ಇಳೀ ವಯಸ್ಸಲ್ಲೂ ಮಾಡ್ತಾರೆ ಮಾರ್ಷಲ್ ಆರ್ಟ್ಸ್..!

ಖಂಡೀಲ್ ಬೆತ್ತಲಾಗದಿದ್ರೇ ಏನಂತೆ..? ಆರ್ಷಿ ಖಾನ್ ಬೆತ್ತಲಾದಳಲ್ಲ..!!

ಅಮ್ಮನಿಗೆ ಸೇಟು ದುಡ್ಡು ಕೊಟ್ಟಿದ್ದು ಯಾಕೆ..? ಫ್ರಾಕ್ ಹುಡ್ಗೀಯ ಚಾಕೊಲೇಟ್ ಸ್ಟೋರಿ..!

ಶಿವಣ್ಣನ ಜೊತೆಗೆ ಬಿಬಿಸಿ ರೇಡಿಯೋ ನಡೆಸಿದ ಸಂದರ್ಶನ ಇಲ್ಲಿದೆ.. ಕೇಳಿ..!

ನಿಯ್ಯತ್ತಿನ ಪ್ರಾಣಿ ನಾಯಿ ಮರಿಗಳನ್ನು ಕೊಂದಳು..! ನಿಯ್ಯತ್ತಿಲ್ಲದ ಹೆಂಗಸು..!?

ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?

ಹೆಂಗಿದ್ದ ಹೆಂಗಾದ ಗೊತ್ತಾ ಅಂಬಾನಿ ಪುತ್ರ..! ಐಪಿಎಲ್ ವೇಳೆ ಅಚ್ಚರಿಗೊಳ್ಳಲು ಸಿದ್ಧರಾಗಿ..!

ದ್ವಾರಕೆಯ ದೋಸೆ ಮತ್ತವಳ ನೆನಪು..!

ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article