No menu items!
12.5 C
Munich
Tuesday, April 28, 2026

ಪ್ರತಿಯೊಬ್ಬರ ಜೀವನಕ್ಕೆ ಹತ್ತಿರವಾಗೋ ಸಿನಿಮಾ ‘ಸರ್ವಸ್ವ’..!

Must read

ಒಂದು ಸಿನಿಮಾ ಮನರಂಜನೆ, ಒಂದೊಳ್ಳೆ ಸಂದೇಶವನ್ನು ನೀಡುವುದರ ಜೊತೆಗೆ ನಮ್ಮ ಜೀವನಕ್ಕೆ ಹತ್ತಿರವಾಗುವಂತಿದ್ದರೆ ಹೇಗೆ..? ಪ್ರತಿಯೊಬ್ಬರ ಜೀವನವೂ ಬೇರೆ ಬೇರೆ… ಹೀಗಿರುವಾಗ ಎಲ್ಲರ ಜೀವನಕ್ಕೆ ಹತ್ತಿರವಾಗೋ ಸಿನಿಮಾ ನಿರ್ಮಾಣ ಹೇಗೆ ಸಾಧ್ಯ ಎನ್ನೋ ಪ್ರಶ್ನೆ ಮೂಡುತ್ತೆ..! ಈ ಪ್ರಶ್ನೆಗೆ ಉತ್ತರ ‘ಸರ್ವಸ್ವ’ ಸಿನಿಮಾ..!
ಟ್ರೇಲರ್ , ಹಾಡುಗಳಿಂದ ಭರ್ಜರಿ ಸದ್ದು ಮಾಡಿರೋ ‘ಸರ್ವಸ್ವ’ ಇಂದು ರಿಲೀಸ್ ಆಗಿದೆ..! ಹೊಸ ತಂಡ ತನ್ನ ಮೊದಲ ಪ್ರಯತ್ನದಲ್ಲಿಯೇ ಗೆದ್ದಿದೆ..! ಕಾರಣ, ಯಾರೇ ಈ ಸಿನಿಮಾವನ್ನು ನೋಡಲಿ, ಅವರ ಬದುಕಿಗೆ ಹತ್ತಿರವಾಗಿದೆ ಎಂದು ಅನಿಸಿಯೇ ಅನಿಸುತ್ತೆ..!
ಆರಂಭದಿಂದ ಕೊನೆಯವರೆಗೂ ಕುತೂಹಲವನ್ನು ಹಿಡಿದಿಡುವ ಸಿನಿಮಾ…ಕೊನೆಯಲ್ಲಿ ನಿಮ್ಮ ಬದುಕಿನ ‘ಸರ್ವಸ್ವ’ ಏನೆಂದು ನಿರ್ಧರಿಸಿ ಆ ನಿಟ್ಟಿನಲ್ಲಿ ಮುನ್ನುಗ್ಗಿ…ಎದುರಾಗೋ ಸೋಲುಗಳಿಗೆ, ಅವಮಾನಗಳಿಗೆ ತಲೆಕೆಡಿಸಿಕೊಳ್ಳದೆ ಸಾಗಿ ಗೆಲುವು ನಿಮ್ಮದೇ ಎಂದು ಪ್ರೇರೇಪಿಸುತ್ತೆ..!


ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಸ್ನೇಹ, ಪ್ರೀತಿ. ನಮ್ಮ ಕನಸು, ಗುರಿಗಳೇ ಬೇರೆ, ನಮ್ಮ ಗೆಳೆಯ, ಪ್ರೇಯಸಿ/ಪ್ರಿಯತಮನ ಕನಸು ಗುರಿಗಳೇ ಬೇರೆ. ಹೀಗಿರುವಾಗ ಜೊತೆಯಾಗಿ ಗೆಲ್ಲುವುದು ಹೇಗೆ..? ಎಂಬುದಕ್ಕೆ ದಾರಿ ತೋರಿಸುತ್ತೆ ಸರ್ವಸ್ವ..! ಸ್ನೇಹನಾ, ಪ್ರೀತಿನಾ, ಗುರಿನಾ..? ಎಲ್ಲವೂ ಮುಖ್ಯ…ಎಲ್ಲವನ್ನೂ ಉಳಿಸಿಕೊಳ್ಳೋದು ಹೇಗೆ ಎಂಬುದಕ್ಕೆ ಮಾರ್ಗದರ್ಶಿ ‘ಸರ್ವಸ್ವ..!
ಸರಿ, ಪುರಾಣ ಸಾಕು ನೇರವಾಗಿ ಸಿನಿಮಾ ಬಗ್ಗೆ ಹೇಳ್ತಾ ಹೋಗ್ತೀನಿ.. ಕೇಳಿ.. ಸಾರಿ ಓದಿ.
ಶ್ರೇಯಸ್ ಕಬಾಡಿ ನಿರ್ದೇಶನದ ಚೊಚ್ಚಲ ಸಿನಿಮಾ ‘ಸರ್ವಸ್ವ’. ಇದಕ್ಕೆ ಬಂಡವಾಳ ಹಾಕಿದ್ದಾರೆ ಗುಜರಾತ್‍ನ ವಿಮಲ್-ವಾಮ್ದೇವ್. ಉಗ್ರಂ, ಕರ್ವ ಖ್ಯಾತಿಯ ನಟ ತಿಲಕ್ ಶೇಖರ್ ಚಿತ್ರದ ನಾಯಕ ನಟ. ಪ್ರತಿ ಸಿನಿಮಾದಲ್ಲೂ ವಿಭಿನ್ನಪಾತ್ರಗಳಲ್ಲಿ ಕಾಣಿಸಿಕೊಂಡು, ಪಾತ್ರಕ್ಕೆ ನ್ಯಾಯ ಒದಗಿಸುವ ತಿಲಕ್ ‘ಸರ್ವಸ್ವ’ದಲ್ಲಿ ಎರಡು ಶೇಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ..! ಚಿತ್ರದ ಎರಡನೇ ನಾಯಕ ಚೇತನ್ ವರ್ಧನ್.. ತನ್ನ ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದಾರೆ. ನಾಯಕಿಯರಾದ ಸಾತ್ವಿಕ, ರನುಷಾ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವೀಕ್ಷಕರಿಗೆ ಇಷ್ಟವಾಗ್ತಾರೆ.
ಇದೊಂದು ಸಿನಿಮಾ ಒಳಗಿನ ಸಿನಿಮಾ ಕಥೆ.. ಸಿನಿಮಾವೇ ನನ್ನ ಸರ್ವಸ್ವ ಎಂದು ಕನಸಿನ ಬೆನ್ನತ್ತಿ ಹೊರಟವರ ಬದುಕಿನ ಕಥೆ. ಸಿನಿಮಾ ಹೀರೋ ಆಗಬೇಕೆಂದು ಚಿಕ್ಕಂದಿನಿಂದಲೂ ಕನಸು ಕಾಣ್ತಾ ಇದ್ದ ಆಯುಷ್ (ಚೇತನ್ ವರ್ಧನ್), ನಿನ್ನ ಹೀರೋ ಮಾಡೇ ಮಾಡ್ತೀನಿ ಎಂದು ಪಣ ತೊಟ್ಟ ಗೆಳೆಯ ಗುರು (ತಿಲಕ್ ಶೇಖರ್) ಹೀಗೆ ಸಿನಿಮಾವೇ ತಮ್ಮ ಸರ್ವಸ್ವ ಎಂದುಕೊಂಡವರು ತಮ್ಮ ಮೊದಲ ಸಿನಿಮಾ ಮಾಡೋಕೆ ಏನೆಲ್ಲಾ ಕಷ್ಟ ಪಡ್ತಾರೆ? ಎಷ್ಟೆಲ್ಲಾ ಅವಮಾನಗಳನ್ನು ಎದುರಿಸ್ತಾರೆ..? ಕೊನೆಗೆ ಹೇಗೆ ತಮ್ಮ ಗುರಿ ತಲುಪ್ತಾರೆ ಎನ್ನೋದೇ ಚಿತ್ರದ ಜೀವಾಳ.


ಸಿನಿಮಾವೇ ತನ್ನ ಸರ್ವಸ್ವ ಎಂದುಕೊಂಡು ಗುರಿಯತ್ತ ಸಾಗುತ್ತಿರುವಾಗ ಆಯುಷ್ ಜೀವನದಲ್ಲಿ ಹುಡುಗಿಯ ಪ್ರವೇಶ..! ಏನೋ ಸಾಧಿಸಬೇಕು ಎಂದು ಹೊರಟಾಗ ಪ್ರೀತಿ-ಗೀತಿ ಅಂತ ಗೆಳೆಯ ಹಾಳಾಗಿ ಹೋಗ್ತಾ ಇದ್ದಾನಲ್ಲ ಎಂಬ ಕೋಪ ಗುರುಗೆ. ಇದೇ ಒಂದು ಹಂತದಲ್ಲಿ ಮನಸ್ತಾಪಕ್ಕೆ ಕಾರಣವಾಗುತ್ತೆ..! ಪ್ರೀತಿ ಸ್ನೇಹಕ್ಕೆ ಮುಳುವಾಗುತ್ತೆ..! ಅಷ್ಟೇ ಅಲ್ಲ ಆಯುಷ್ ನಡೆಯಲಾಗದ ಸ್ಥಿತಿ ತಲುಪತ್ತಾನೆ.. ವೀಲ್‍ಚೇರೇ ಅವನಿಗೆ ಗತಿ. ಆಗ ಅವನಿಗೆ ಎರಡು ಕಾಲುಗಳಾಗಿ ಜೊತೆಯಾಗಿರೋದು ಪ್ರೇಯಸಿ ಸಾತ್ವಿಕ ಮತ್ತು ಗೆಳೆಯ ಗುರು. ವೀಲ್‍ಚೇರ್ ಬಿಟ್ಟಿರಲಾಗದ ಆಯುಷ್‍ನನ್ನೇ ಹೀರೋ ಮಾಡ್ತೀನಿ ಎಂಬ ಛಲ ನಿರ್ದೇಶಕನಾಗ ಹೊರಟ ಗುರುವಿಗೆ. ನಡೆಯಕ್ಕಾಗದೇ ಇರೋನೇ ಚಿತ್ರದ ಹೀರೋ ಎಂದ್ರೆ ಯಾರ್‍ತಾನೆ ಬಂಡವಾಳ ಹಾಕೋಕೆ ರೆಡಿ ಆಗ್ತಾರೆ..? ಕೊನೆಗೂ ಒಬ್ಬ ನಿರ್ಮಾಪಕ ಸಿಕ್ತಾರೆ.. ಸಿನಿಮಾ ಶೂಟಿಂಗ್ ಶುರುವಾಗುತ್ತೆ.. ಸಿನಿಮಾದೊಳಗಿನ ಸಿನಿಮಾ ನಾಯಕಿ ಜಸ್ಸಿ (ರನುಷಾ)ಜೊತೆ ಡೆರೆಕ್ಟರ್ ಗುರುಗೆ ಲವ್ ಆಗುತ್ತೆ..! ಸಿನಿಮಾ ರಿಲೀಸ್ ಆಗಿ ಗೆಲ್ಲುತ್ತೆ..ಆಯುಷ್ ಸೂಪರ್ ಸ್ಟಾರ್ ಆಗ್ತಾನೆ..! ಒಂದೇ ಸಿನಿಮಾದಲ್ಲಿ ಅಪಾರ ಅಭಿಮಾನಿಗಳನ್ನು ಪಡೀತಾನೆ..! ಈ ನಡುವೆ ದಿಢೀರನೇ ಅವನಿಗೆ ನಡೆಯೋಕಾಗುತ್ತೆ..! ವೀಲ್‍ಚೇರ್ ಬೇಡವಾಗುತ್ತೆ..!
ಆಯುಷ್‍ಗೆ ಸೊಂಟಮುರ್ಕೊಂಡು ನಡೆಯಕ್ಕಾಗದೇ ಇರೋ ಸ್ಥಿತಿ ತಲುಪಿದ್ದು ಹೇಗೆ..? ಅವನು ಹೀರೋ ಆದ ಸಿನಿಮಾಕ್ಕೆ ಬಂಡವಾಳ ಹಾಕಲು ನಿರ್ಮಾಪಕರು ಹೆಂಗೆ ಒಪ್ಪಿಕೊಂಡ್ರು..? ಸಿನಿಮಾ ಗೆದ್ದಿದ್ದು ಹೇಗೆ..? ದಿಢೀರನೇ ಆಯುಷ್ ನಡೆಯುವಂತಾಗಿದ್ದು ದೇವರ ಮಹಿಮೆಯಂತೂ ಅಲ್ಲ.. ಆಪರೇಷನ್ ಸಕ್ಸಸ್ ಆಗಿದ್ದೂ ಅಲ್ಲ.. ಹಾಗಾದ್ರೆ ಇದು ಹೇಗೆ ಸಾಧ್ಯವಾಯ್ತು..ಎನ್ನೋದನ್ನು ತಿಳಿಯಬೇಕಂದ್ರೆ ನೀವು ಸಿನಿಮಾ ನೋಡಲೇಬೇಕು..!
ಇದು ಚಿತ್ರದ ಕಥೆಯಾದ್ರೆ ಇನ್ನು ಶ್ರೀಧರ್ ಸಂಭ್ರಮ್ ಅದ್ಭುತ ಸಂಗೀತದ ಬಲ ಚಿತ್ರಕ್ಕಿದೆ. ಭೂಪಿಂದರ್ ಸಿಂಗ್ ಪಾಲ್ ರೈನಾ ಛಾಯಾಗ್ರಹಣವಂತೂ ಅತ್ಯುದ್ಭುತ..!


ಜೀವನದಲ್ಲಿ ಒಂದು ಗುರಿ ಇರ್ಬೇಕು. ನಾಲ್ಕು ಜನ ಗೆಳೆಯರಿದ್ರೆ ಒಬ್ಬೊಬ್ಬರಲ್ಲಿ ಒಂದೊಂದು ಪ್ರತಿಭೆ ಇರುತ್ತೆ…ಅಹಂಕಾರವಿಲ್ದೆ.. ಒಬ್ಬರ ಜೊತೆ ಇನ್ನೊಬ್ಬರಿದ್ದು ಇಬ್ಬರೂ ಗೆಲ್ಲಬಹುದು ಎನ್ನೋದನ್ನು ಸೂಕ್ಷ್ಮವಾಗಿ ಹೇಳುತ್ತೆ ಸರ್ವಸ್ವ. ನೀವು ನಿಮ್ಮ ಜೀವನದ ಸರ್ವಸ್ವ ಏನು ಎಂಬುದನ್ನು ಕೂಡಲೇ ಅರಿತು ಮುನ್ನುಗ್ಗಿ.. ಒಳ್ಳೇದಾಗುತ್ತೆ..ಸುಮ್ ಸುಮ್ನೆ ಸಿನಿಮಾ ಬಗ್ಗೆ ಹೇಳಿಲ್ಲ.. ಇಷ್ಟವಾಯ್ತು ಅದಕ್ಕೆ ಹೇಳಿದ್ದೇವೆ. ನಿಮಗೂ ಇಷ್ಟವಾಗುತ್ತೆ.. ನೋಡ್ಕೊಂಡು ಬನ್ನಿ. ಕನ್ನಡ ಸಿನಿಮಾ ಗೆಲ್ಲಿಸಿ.

  • ಶಶಿಧರ್ ಎಸ್ ದೋಣಿಹಕ್ಲು
- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article