ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಡಾ|| ಶಿವರಾಮಕಾರಂತರು ಓದದ, ಬರೆಯದ ಕೈಯಾಡಿಸದ ಕ್ಷೇತ್ರಗಳೇ ಇಲ್ಲ..! ಎಲ್ಲಾ ಸಾಹಿತ್ಯ ಪ್ರಕಾರಗಳನ್ನೂ ಬರೆದ ಅಪರೂಪದ ಸಾಹಿತಿ..! ಕವನ, ನಾಟಕ, ಕಾದಂಬರಿ, ಕಥೆ, ಪ್ರವಾಸ, ಸಾಹಿತ್ಯ ವಿಜ್ಞಾನ, ಯಕ್ಷಗಾನ, ಸಿನಿಮಾ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಛಾಪುಮೂಡಿಸಿದ ಸಕಲಕಲಾ ಪಾರಂಗತರು..! ಇಪ್ಪತ್ತನೇ ಶತಮಾನದ ಪ್ರಯೋಗಶೀಲ ಬಹುಮುಖ ವ್ಯಕ್ತಿತ್ವವೆಂದರೆ ಅದು ನಮ್ಮ ಕಾರಂತರು ಮಾತ್ರ..!
ಆ ಕೆಲಸವಾಗಲ್ಲ, ಆ ಕೆಲಸವಾಗಲ್ಲ, ಟೈಮೇ ಸಾಕಗಲ್ಲ ಅನ್ನೋ ನಾವು ಶಿವರಾಮಕಾರಂತರನ್ನು ನೋಡಿ ಕಲಿಯಲಿಕ್ಕೆ ತುಂಬಾ.. ಅಂದ್ರೆ ತುಂಬಾನೇ ಇದೆ..! ಕಾರಂತರ ಬಗ್ಗೆ ಸಂಪೂರ್ಣವಾಗಿ ಓದಿಕೊಂಡರೆ ಒಬ್ಬರೇ ವ್ಯಕ್ತಿ ತಮ್ಮ ಜೀವಿತಾವಧಿಯಲ್ಲಿ ಇಷ್ಟೊಂದು ಕೆಲಸವನ್ನು ಮಾಡಲು ಸಾಧ್ಯವೇ ಅಂತ ಅಚ್ಚರಿಯಾಗುತ್ತೆ..! ಆದ್ರೂ ಅದು ಸತ್ಯ.. ಕಾರಂತರು ಸಾಹಿತ್ಯ, ವಿಜ್ಞಾನ, ಕಲೆ, ವಿಜ್ಞಾನ , ಹೀಗೆ ಹೆಚ್ಚುಕಡಿಮೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನಮಗೆಲ್ಲಾ ಸ್ಫೂರ್ತಿಯ ಚಿಲುಮೆ ಆಗಿದ್ದಾರೆ..! ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಯೋಚಿಸಿ ಬರೆದರು..!
ಸದಾ ಹೊಸತನ್ನು ಬಯಸುತ್ತಿದ್ದ ಪ್ರಯೋಗಶೀಲ ವ್ಯಕ್ತಿಯಾಗಿದ್ದ ಕಾರಂತರು ತಮ್ಮ ಬದುಕಿಗೆ ಯಾವುದೇ ಚೌಕಟ್ಟನ್ನು ಹಾಕಿಕೊಳ್ಳಲು ಬಯಸಿದವರಲ್ಲ..! ಕಲಿಕೆ ಎಲ್ಲಿಂದ ಸಾಧ್ಯವೋ ಅವುಗಳೆಲ್ಲವುಗಳಿಂದ ಕಲಿಯುವುದನ್ನು ಎದುರು ನೋಡ್ತಾ ಇದ್ದ ಇವರು ಜ್ಞಾನದ ಎಲ್ಲಾ ಬಗೆಗಳಲ್ಲೂ ಕೈಯಾಡಿಸಿದರು..! ಇವರಿಗೆ ಇಂತಹದ್ದೇ ಆಸಕ್ತಿದಾಯಕ ಕ್ಷೇತ್ರವೆಂದಿರಲಿಲ್ಲ…! ಮೊದಲೇ ಹೇಳಿದಂತೆ ಸಾಹಿತ್ಯ ಕೃಷಿಯನ್ನೂ ಮಾಡಿದರು.., ರಂಗಭೂಮಿಯಲ್ಲೂ ಸೈ ಅನಿಸಿಕೊಂಡು..! ಯಕ್ಷಗಾನದಲ್ಲಿ ಎಂದೂ ಮರೆಯದ ಹೆಸರಾದರು..! ಇವರಿಗೆ ಅತ್ತ ವಿಜ್ಞಾನವೂ ಗೊತ್ತಿತ್ತು.. ವಿಜ್ಞಾನ ಕೋಶವನ್ನೂ ಬರೆದ್ರು..! ಸಂಗೀತವನ್ನೂ ಬಲ್ಲವರಾಗಿದ್ರು..! ಮಕ್ಕಳಿಗೆ ಬೇಕಾದ “ಬಾಲ ಪ್ರಪಂಚ”ವನ್ನೂ ಕಾರಂತರು ಸಾಹಿತ್ಯ ಲೋಕಕ್ಕೆ ಕೊಟ್ಟರು..! ಪತ್ರಿಕೋದ್ಯಮದಲ್ಲಿಯೂ ಪ್ರಖ್ಯಾತರಾದ್ರು..! ಅರ್ಥಕೋಶವನ್ನೂ ಬರೆದರು..!
ಇಂತಹ ಬೇರೆ ಬೇರೆ ವಿಷಯಗಳನ್ನು ಇಟ್ಟುಕೊಂಡು ಕೃತಿ ಬರೆದ ಕಾರಂತರನ್ನು ಸದಾ ನೆನಪಿನಲ್ಲಿಡುವಂತಹ ಕೆಲವು ಅತ್ಯಮೂಲ್ಯ ಕೃತಿಗಳಲ್ಲಿ “ಮೂಕಜ್ಜಿಯ ಕನಸುಗಳು”, “ಬೆಟ್ಟದ ಜೀವ” “ಚೋಮನದುಡಿ”, “ಸರಸಮ್ಮನ ಸಮಾಧಿ” “ಮೈಮನಗಳ ಸುಳಿಯಲಿ”, “ಬತ್ತದ ಹೊರೆ”, “ಅಳಿದ ಮೇಲೆ” “ಗೊಂಡಾರಣ್ಯ”, “ಸ್ವಪ್ನದ ಹೊಳೆ”, “ಗೆದ್ದವರ ದೊಡ್ಡಸ್ತಿಕೆ” ಕಾದಂಬರಿಗಳನ್ನಂತೂ ಯಾರೂ ಮರೆಯಲು ಸಾಧ್ಯವೇ ಇಲ್ಲ…! ಇವರ ಬಹುತೇಕ ಕಾದಂಬರಿಗಳು ಸಿನಿಮಾವಾಗಿ ತೆರೆಯಮೇಲೂ ಬಂದಿವೆ..! “ಮೂಕಜ್ಜಿಯ ಕನಸುಗಳು” ಕಾದಂಬರಿಗೆ 1978ರಲ್ಲಿ “ಜ್ಞಾನಪೀಠ” ಪ್ರಶಸ್ತಿಯೂ ಲಭಿಸಿದೆ..! ಇವರ ಜೀವನ ಚರಿತ್ರೆ “ಹುಚ್ಚು ಮನಸ್ಸಿನ ಹತ್ತು ಮುಖಗಳು” ಎಲ್ಲರಿಗೂ ಜೀವನ ಮಾರ್ಗದಶರ್ಿ..! “ದೇವದೂತರು” “ಗ್ನಾನ”ದಂತಹ ಕೃತಿಯಲ್ಲಿ ಮೌಢ್ಯಗಳನ್ನು ಧರ್ಮದ ಹೆಸರಿನಲ್ಲಾಗುವ ಶೋಷಣೆಗಳನ್ನು ಬಯಲಿಗಿಳಿದರು..! ಇಷ್ಟೇ ಅಲ್ಲದೇ ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದ ಇವರು ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗಿಯಾಗಿದ್ದರು..!
ಹೀಗೆ ನಾನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಆ ಎಲ್ಲಾ ಕ್ಷೇತ್ರಗಳಿಗೂ ನ್ಯಾಯಕೊಡಿಸಿದ ಶಿವರಾಮಕಾರಂತರು ತಮ್ಮ 95 ವರ್ಷಗಳ ಜೀವನದಲ್ಲಿ 427 ಪುಸ್ತಕಗಳನ್ನು ರಚಿಸಿದರು..! “ಕಡಲ ತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶವೆಂದೇ” ಪ್ರಸಿದ್ಧರಾಗಿರುವ ಶಿವರಾಮ ಕಾರಂತರು ಉಡುಪಿ ಜಿಲ್ಲೆಯ ಕೋಟಾದಲ್ಲಿ 1902 ಅಕ್ಟೋಬರ್ 10 ರಂದು ಜನಿದ್ದರು..! ಇವತ್ತು ಆ ಕಡಲ ತೀರದ ಭಾರ್ಗವ ನಮ್ಮೊಡನೆ ಇಲ್ಲ..! ಅವರ ಸಾಧನೆ ಮತ್ತು ಪುಸ್ತಕಗಳೊಡನೆ ಸದಾ ನಮ್ಮೊಡನೆ ಇದ್ದಾರೆ..! ಅಂದಹಾಗೆ ಇಂದು ಶಿವರಾಮಕಾರಂತರ 114ನೇ ಜಯಂತಿ..! ನಮ್ಮೊಡನೆ ಇಲ್ಲದೇ ಇದ್ದರೂ ನಮ್ಮಲ್ಲೇ ಇರುವ ಅವರಿಗೆ ಹುಟ್ಟು ಹಬ್ಬದ ಶುಭಾಷಯಗಳು..!
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]