ಮಾಜಿ ಕ್ರಿಕೆಟಿಗ, ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನ್ ಸೇನೆಯ ಸಹಾಯದಿಂದ ಉಗ್ರರು ಸಂಚುರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ತಿಳಿಸಿದೆ.
ಇಮ್ರಾನ್ ಖಾನ್ ಆಗಸ್ಟ್ 11ರಂದು ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಆಗಸ್ಟ್ 15ರಂದು ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಈ ಎರಡು ಕಾರ್ಯಕ್ರಮಗಳ ನಡುವೆ ಭಾರತದಲ್ಲಿ ಭಾರಿ ಪ್ರಮಾಣದ ಕೃತ್ಯ ಎಸಗಲು ಪಾಕ್ ಮೂಲದ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಗೃಹಸಚಿವಾಲಯಕ್ಕೆ ಎಚ್ಚರಿಕೆ ರವಾನಿಸಿದೆ.
ಉಗ್ರರ ಬಾರ್ಡರ್ ಆ್ಯಕ್ಷನ್ ಟೀಂ (ಬ್ಯಾಟ್) ನ ಸೋಗಿನಲ್ಲಿ ಪಾಕ್ ಸೈನಿಕರೇ ಭಾರತೀಯ ಯೋಧರ ಮೇಲೆ ದಾಳಿ ನಡೆಸಲು ಸಂಚು ಮಾಡುತ್ತಿರುವುದಾಗಿ ತಿಳಿದುಬಂದಿದೆ. ಸುಮಾರು 600ಕ್ಕೂ ಹೆಚ್ಚು ಮಂದಿ ಉಗ್ರರು ದಾಳಿ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ. ಇವರು ಗಡಿನಿಯಂತ್ರಣ ರೇಖೆ ದಾಟಲು ಕಾದು ಕುಳಿತಿದ್ದು, ಅವಕಾಶಕ್ಕಾಗಿ ಕಾದಿದ್ದಾರೆ ಎನ್ನಲಾಗಿದೆ.