ಉಪೇಂದ್ರ ಅಭಿನಯದ ಲಗಾಮ್ ಚಿತ್ರದ ಮುಹೂರ್ತ ಸಮಾರಂಭ ಮೊನ್ನೆಯಷ್ಟೇ ನಡೆದಿದೆ. ಮುಹೂರ್ತ ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಅವರು ಕ್ಲ್ಯಾಪ್ ಮಾಡಿ ಚಿತ್ರ ಯಶಸ್ಸು ಗಳಿಸಲಿ ಎಂದು ಕೋರಿದರು. ತುಂಬಾ ವರ್ಷಗಳ ನಂತರ ಸಾಧುಕೋಕಿಲಾ ಅವರು ಲಗಾಮ್ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ.
ಚಿತ್ರದ ಮುಹೂರ್ತಕ್ಕೆ ಬಂದಿದ್ದ ಅವರು ಮಾಧ್ಯಮದವರ ಜೊತೆ ಮಾತನಾಡುವಾಗ ತಮಗೆ ಆದ ಕಷ್ಟದ ಅನುಭವವನ್ನು ಹಂಚಿಕೊಂಡಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಅವರು ಎದುರಿಸಿದ ಕಷ್ಟವನ್ನು ಸಾಧುಕೋಕಿಲಾ ಹಂಚಿಕೊಂಡರು. ಸಾಧು ಕೋಕಿಲಾ ಅವರ ಅಣ್ಣನ ಮಗನಿಗೆ ಕೊರೋನಾವೈರಸ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು ಈ ಸಂದರ್ಭದಲ್ಲಿ ಒಂದೇ ಒಂದು ಆಕ್ಸಿಜನ್ ಪಡೆದುಕೊಳ್ಳಲು ಇಡೀ ದಿನ ಸಾಧುಕೋಕಿಲಾ ಪರದಾಡಿದ್ದರಂತೆ.
ನನ್ನ ಅಣ್ಣನ ಮಗನಿಗೆ ಕೊರೊನಾ ಸೋಂಕು ತಗುಲಿತ್ತು ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದೆವು. ಉಸಿರಾಟದ ಸಮಸ್ಯೆ ಎದುರಾದ್ದರಿಂದ ಆಕ್ಸಿಜನ್ ಗಾಗಿ ಒಂದು ದಿನ ಪೂರ್ತಿ ಅಲೆದಾಡಿದೆ. ಒಬ್ಬ ಸೆಲೆಬ್ರಿಟಿಯಾಗಿ ನನಗೆ ಆಕ್ಸಿಜನ್ ತೆಗೆದುಕೊಳ್ಳಲು ಇಷ್ಟು ಕಷ್ಟ ಆಯಿತು ಎಂದರೆ ಇನ್ನು ಸಾಮಾನ್ಯ ಜನರ ಗತಿಯೇನು? ಕೊರೊನಾ ಸೋಂಕು ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ ದಯವಿಟ್ಟು ಎಚ್ಚರದಿಂದಿರಿ ಎಂದು ಸಾಧು ಕೋಕಿಲಾ ಇದೇ ವೇಳೆ ಕೇಳಿಕೊಂಡರು.