No menu items!
12.4 C
Munich
Wednesday, April 29, 2026

ಕೋಟಿಗೊಬ್ಬ 3 ಬಿಡುಗಡೆ ತಡೆದಿದ್ದ ನಿರ್ಮಾಪಕನ ಸಾಕ್ಷ್ಯ ಇದೆ: ಸುದೀಪ್

Must read

‘ಕೋಟಿಗೊಬ್ಬ 3’ ಸಿನಿಮಾದ ಬಿಡುಗಡೆ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ಅಕ್ಟೋಬರ್ 14 ರಂದು ಬಿಡುಗಡೆ ಆಗಬೇಕಿತ್ತು, ಆದರೆ ವಿತರಕರು ಕೊಟ್ಟ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ಆಗಲಿಲ್ಲ ಎಂದು ನಿರ್ಮಾಪಕ ಸಂದೇಶ ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದ ಸುದೀಪ್, ”ಯಾರು ಇದರ ಹಿಂದೆ ಇದ್ದಾರೆಂಬುದು ಗೊತ್ತಿದೆ” ಎಂದಿದ್ದರು.

ಸಿನಿಮಾವು ಅಕ್ಟೋಬರ್ 15 ರಂದು ಬಿಡುಗಡೆ ಆಯಿತಾದರೂ ವಿವಾದ ತಣ್ಣಗಾಗಿಲ್ಲ. ಇಂದು ಮಾಧ್ಯಮದೊಂದಿಗೆ ಮಾತನಾಡಿರುವ ಕಿಚ್ಚ ಸುದೀಪ್, ”ಭೂಮಿಕಾ ಚಿತ್ರಮಂದಿರಕ್ಕೆ ಕರೆ ಮಾಡಿ, ‘ಕೋಟಿಗೊಬ್ಬ 3′ ಸಿನಿಮಾ ಬಿಡುಗಡೆ ಮಾಡಬೇಡಿ ಎಂದು ಬೆದರಿಕೆ ಹಾಕಿದ್ದರು, ಇದಕ್ಕೆ ಸಾಕ್ಷ್ಯ ಇದೆ’ ಎಂದಿದ್ದಾರೆ.

 

”ಚಿತ್ರರಂಗದ ಹಿರಿಯ ವಿತರಕರೊಬ್ಬರು, ಚಿತ್ರಮಂದಿರ ಕೊಡಬೇಡಿ ಎಂದು ಕರೆಮಾಡುತ್ತಾರೆ. ಆಡಿಯೋ ಕ್ಲಿಪ್ಪಿಂಗ್ ಸಹ ಕಳಿಸಿದ್ದಾರೆ. ಇದನ್ನೆಲ್ಲ ನೋಡಿ ನಗು ಬರುತ್ತದೆ. ಇಷ್ಟು ದಿನ ಬರೀ ಸಿನಿಮಾ ಬಗ್ಗೆ, ಚಿತ್ರಕತೆ ಬಗ್ಗೆ, ಕತೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೆ. ಇನ್ನು ಮುಂದೆ ಇಂಥಹವರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ” ಎಂದು ಪರೋಕ್ಷವಾಗಿ ಎಚ್ಚರಿಕೆಯ ದನಿಯನ್ನೇ ಹೇಳಿದ್ದಾರೆ ಸುದೀಪ್.

”ಅವರನ್ನು ದೇವರು ಚೆನ್ನಾಗಿಟ್ಟಿದ್ದಾರೆ, ಒಳ್ಳೆಯ ಹೆಸರಿದೆ, ಅವರ ಸಿನಿಮಾಗಳು ಚೆನ್ನಾಗಿ ಓಡುತ್ತಿರುತ್ತವೆ. ಹೀಗಿದ್ದಾಗ ಚಿತ್ರಮಂದಿರಗಳಿಗೆ ಕರೆ ಮಾಡಿ, ಸಿನಿಮಾ ರಿಲೀಸ್ ಮಾಡಬೇಡಿ ಎನ್ನುತ್ತಾರೆ. ಇಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದಾರೆ, ಹೀಗೆ ಮಾಡಿ-ಮಾಡಿ ಎಷ್ಟು ಹೊಸಬರನ್ನು ಇವರು ಹಾಳು ಮಾಡಿರಬಹುದು ಎಂಬ ಯೋಚನೆ ಬರುತ್ತದೆ” ಎಂದು ಹೆಸರು ಹೇಳದೆ ಹಿರಿಯ ವಿತರಕರ ವಿರುದ್ಧ ವಾಗ್ದಾಳಿ ನಡೆಸಿದರು ಸುದೀಪ್.

”ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ನಾವು ಬರ್ತೀವಿ, ಆಡಿಯೋ ಕ್ಲಿಪ್ಪಿಂಗ್ ಎಲ್ಲ ಇದೆ. ಅದನ್ನು ತೆಗೆದುಕೊಂಡು ಜನರ ಮುಂದೆ ಬರ್ತೀವಿ. ಈಗಾಗಲೇ ನಿನ್ನೆ ಜಾಕ್ ಮಂಜು ಈ ವಿಷಯವಾಗಿ ಸಾಕಷ್ಟು ಮಾತನಾಡಿದ್ದಾರೆ. ನಾವು ಸಾಕ್ಷ್ಯ ಸಮೇತ ಬರ್ತೀವಿ. ಅವರದ್ದೂ ಸಿನಿಮಾ ಬಿಡುಗಡೆ ಇರುತ್ತಲ್ಲ ಆಗಲೇ ಅವರ ಬಣ್ಣ ಬಯಲು ಮಾಡ್ತೀವಿ” ಎಂದು ಸವಾಲು ಎಸೆದಿದ್ದಾರೆ ಸುದೀಪ್. ಆ ಮೂಲಕ ‘ಕೋಟಿಗೊಬ್ಬ 3’ ಸಿನಿಮಾ ವಿವಾದ ಇನ್ನೂ ಮುಂದುವರೆಯಲಿದೆ ಎಂಬುದು ಖಾತ್ರಿಯಾಗಿದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article