ಠಾಣೆಗೆ ಬಂದ ಹಂಸಲೇಖ; ಆತಂಕದ ವಾತಾವರಣ

0
38

ಪೇಜಾವರ ಶ್ರೀಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖಾ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಪೇಜಾವರ ಶ್ರೀ ಕುರಿತ ಹೇಳಿಕೆ ವಿಚಾರವಾಗಿ ಹಂಸಲೇಖಾ ವಿರುದ್ಧ ಬಸವನಗುಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಪೊಲೀಸರು ನೋಟೀಸ್ ನೀಡಿದ್ದರು. ಆದರೆ ಅನಾರೋಗ್ಯ ಕಾರಣದಿಂದ ವಿಚಾರಣೆಗೆ ಹಂಸಲೇಖಾ ಹಾಜರಾಗಿರಲಿಲ್ಲ. ಇದೀಗ ಹಂಸಲೇಖಾ ವಿಚಾರಣೆಗೆ ಹಾಜರಾಗಿದ್ದಾರೆ.

ಈ ನಡುವೆ ಬಸವನಗುಡಿ ಪೊಲೀಸ್ ಠಾಣೆ ಎದುರು ಹೈಡ್ರಾಮಾ ನಡೆಯುತ್ತಿದ್ದು, ನಟ ಚೇತನ್ ಕೂಡ ಠಾಣೆಗೆ ಆಗಮಿಸಿದ್ದಾರೆ. ಕನ್ನಡಪರ ಸಂಘಟನೆಗಳು ನಟ ಚೇತನ್ ಪರ ಹಾಗೂ ಹಂಸಲೇಖಾ ಪರ ನಾವಿದ್ದೇವೆ ಎಂದು ಘೋಷಣೆ ಕೂಗುತ್ತಿದ್ದರೆ ಇನ್ನೊಂದೆಡೆ ಭಜರಂಗದಳ ಕಾರ್ಯಕರ್ತರು ಕೂಡ ಠಾಣೆ ಮುಂದೆ ಜಮಾವಣೆಗೊಂಡಿದ್ದು ಹಂಸಲೇಖಾ ವಿರುದ್ಧ ಘೋಷಣೆ ಕೂಗಿದ್ದಾರೆ.

ಠಾಣೆಗೆ ಆಗಮಿಸುತ್ತಿದ್ದ ನಟ ಚೇತನ್ ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದು, ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ

LEAVE A REPLY

Please enter your comment!
Please enter your name here