ಶೇಖರ್ ಕಮ್ಮುಲ ನಿರ್ದೇಶನದಲ್ಲಿ ನಾಗಚೈತನ್ಯ, ಸಾಯಿಪಲ್ಲವಿ ಅಭಿನಯಿಸಿರುವ “ಲವ್ ಸ್ಟೋರಿ’ ಚಿತ್ರ ಕಳೆದ ಶುಕ್ರವಾರ ವಿಶ್ವದಾದ್ಯಂತ ಬಿಡುಗಡೆ ಹೊಂದಿ ಭರ್ಜರಿ ಯಶಸ್ಸನ್ನು ಕಾಣುತ್ತಿದೆ. ಬಿಡುಗಡೆಯಾದ ಮೊದಲ ಮೂರು ದಿನದಲ್ಲೇ ಸುಮಾರು 25 ಕೋಟಿ ಹಣ ಗಳಿಸಿದ ಚಿತ್ರ ಪ್ರೇಕ್ಷಕರ ಬೆಂಬಲದಿಂದ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ, ಇನ್ನೊಂದೆಡೆ ವಿಮರ್ಶಕರಿಂದ ಕೂಡ ಚಿತ್ರ ಬಹುಪರಾಕ್ ಅನ್ನಿಸಿಕೊಳ್ಳುತ್ತಿದೆ. ಹೀಗಾಗಿ ಸಹಜವಾಗಿಯೇ ಚಿತ್ರತಂಡ ಯಶಸ್ಸಿನ ಉತ್ತುಂಗದಲ್ಲಿ ತೇಲುತ್ತಿದೆ. ಅಲ್ಲದೆ ‘ಲವ್ ಸ್ಟೋರಿ’ ಕೊಟ್ಟ ಯಶಸ್ಸಿನ ಟಾನಿಕ್ ನಿಂದಾಗಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲು ಸಾಲು ಸಾಲು ಚಿತ್ರಗಳು ಥಿಯೇಟರ್ ಗಳನ್ನು ಬುಕ್ ಮಾಡಿಕೊಂಡು ಪಬ್ಲಿಸಿಟಿ ಕೂಡ ಆರಂಭಿಸಿವೆ. ಒಟ್ಟಿನಲ್ಲಿ ಕರೋನದ ಸಂಕಷ್ಟದ ಸಮಯದಲ್ಲಿ “ಲವ್ ಸ್ಟೋರಿ’ ಯಶಸ್ಸು ಸಿನಿಮಾ ಮಂದಿ ನಿಟ್ಟುಸಿರು ಬಿಡುವಂತೆ ಮಾಡಿದೆ.
ಭಾರತೀಯ ಸಮಾಜ ಇಂದಿಗೂ ಕೂಡ ಜಾತಿ, ಧರ್ಮದ ಆಧಾರದ ಮೇಲೆ ವಿಘಟನೆ ಹೊಂದಿರುವ ಸಮಾಜ. ವಿದ್ಯೆ, ಉದ್ಯೋಗ, ಹಣ, ಆಸ್ತಿ, ಶ್ರೀಮಂತಿಕೆ ಇದೆಲ್ಲದಕ್ಕಿಂತ ಒತ್ತು ನೀಡಿ ಬದುಕುತ್ತಿದ್ದೇವೆ. ಅನ್ಯ ಜಾತಿ ಅಥವಾ ಕೋಮಿನ ಹುಡುಗ ಅಥವಾ ಹುಡುಗಿಯನ್ನು ಪ್ರೀತಿಸಿದರೆ ‘ಮರ್ಯಾದ ಹತ್ಯೆ’ ಮಾಡಲು ಕೂಡ ಹಿಂದೆ ಮುಂದೆ ನೋಡದ ದಬ್ಬಾಳಿಕೆ ಈಗಲೂ ಕೂಡ ಜೀವಂತವಾಗಿದೆ. ಒಂದು ತುಳಿತಕ್ಕೊಳಗಾದ ಅಥವಾ ದಮನಿತ ಸಮಾಜದ ಹುಡುಗನೊಬ್ಬ ತನಗಿಂತ ಉನ್ನತ ವರ್ಗದ ಹುಡುಗಿಯನ್ನು ಪ್ರೀತಿಸಿದರೆ ಅದನ್ನು ಜಮೀನ್ದಾರಿ ಸಮಾಜ ಹೇಗೆ ತೆಗೆದುಕೊಳ್ಳುತ್ತದೆ ಹಾಗೂ ಹೇಗೆ ರಿಯಾಕ್ಟ್ ಆಗುತ್ತದೆ ಎಂಬುದನ್ನು ಅತ್ಯಂತ ನೈಜವಾಗಿ ಜೊತೆಗೆ ಭಾವನಾತ್ಮಕವಾಗಿ ಪ್ರಸ್ತುತಪಡಿಸಿದ್ದಾರೆ ನಿರ್ದೇಶಕ ಶೇಖರ್ ಕಮ್ಮುಲ. ಹೀಗಾಗಿಯೇ ಪ್ರಸ್ತುತ ಈ ಚಿತ್ರ ವ್ಯಾಪಕ ಜನಮನ್ನಣೆಯ ಜೊತೆಗೆ ಒಂದೊಳ್ಳೆ ಕಲಾಕೃತಿ ಅಂತ ವಿಮರ್ಶಕರಿಂದ ಕೂಡ ಮೆಚ್ಚುಗೆಯನ್ನು ಪಡೆಯುತ್ತಿದೆ.
ಸೆಪ್ಟಂಬರ್ 24ರಂದು ಬಿಡುಗಡೆಯಾಗಿರುವ ಲವ್ ಸ್ಟೋರಿಯ ಬಾಕ್ಸಾಫೀಸ್ ಸಕ್ಸಸ್ ಸಧ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಸಹಜವಾಗಿಯೇ ಚಿತ್ರದ ಭರ್ಜರಿ ಯಶಸ್ಸಿನಿಂದ ಹುರುಪುಗೊಂಡಿರುವ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಸಕ್ಸಸ್ ಮೀಟ್ ಗಳನ್ನ ಆಯೋಜಿಸುತ್ತಿದೆ. ಇದೇ ಕ್ರಮದಲ್ಲಿ ಸಕ್ಸಸ್ ಮೀಟ್, ಮ್ಯೂಸಿಕಲ್ ಸಕ್ಸೆಸ್ ಮೀಟ್ ಗಳನ್ನು ಇತ್ತೀಚೆಗೆ ಚಿತ್ರತಂಡ ಆಯೋಜಿಸಿತ್ತು. ಅಲ್ಲದೆ ಚಿತ್ರದ ಯಶಸ್ಸಿನಿಂದ ಅತ್ತ ನಾಗಚೈತನ್ಯ ಇತ್ತ ಸಾಯಿಪಲ್ಲವಿ ಇಬ್ಬರು ನಿತ್ಯ ಒಂದಲ್ಲ ಒಂದು ಚಾನಲ್ ಗಳಿಗೆ ಸಂದರ್ಶನ ನೀಡುವುದರ ಮೂಲಕ ತಮ್ಮ ಚಿತ್ರದ ಯಶಸ್ಸಿನ ಕಥೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಇದೇ ಕ್ರಮದಲ್ಲಿ ಇತ್ತೀಚೆಗೆ ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಸಾಯಿ ಪಲ್ಲವಿ ಚಿತ್ರದ ಒಂದು ಪ್ರಮುಖ ದೃಶ್ಯಕ್ಕೆ ಸಂಬಂಧಿಸಿದಂತೆ ಆಸಕ್ತಿದಾಯಕ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಆದಾಗ್ಯೂ, ಚಿತ್ರದ ಒಂದು ದೃಶ್ಯದಲ್ಲಿ ಪಡ್ಡೆಗಳಿಗೆ ಬೆಚ್ಚನೆ ಅನುಭವ ನೀಡುವ ಒಂದು ಲಿಪ್ ಲಾಕ್ ದೃಶ್ಯವಿದೆ. ಅತ್ಯಂತ ನೈಜವಾಗಿ ಈ ಲಿಪ್ ಲಾಕ್ ದೃಶ್ಯ ಮೂಡಿ ಬಂದಿದೆ. ಇಲ್ಲಿ ನಾಯಕಿ, ನಾಯಕನ ತುಟಿಗಳನ್ನು ಚುಂಬಿಸಿ ಓಡುತ್ತಾಳೆ. ಇದು ಅಷ್ಟು ಸಹಜ ಹಾಗೂ ನೈಜವಾಗಿ ಮೂಡಿ ಬಂದಿರುವುದರ ಹಿನ್ನಲೆಯನ್ನು ಬಗ್ಗೆ ಸಾಯಿಪಲ್ಲವಿ ಹೀಗೆ ಹೇಳುತ್ತಾರೆ. ‘ಆ ದೃಶ್ಯದಲ್ಲಿ ನಾನು, ನಾಗಚೈತನ್ಯನಿಗೆ ನಿಜವಾಗಿಯೂ ಕಿಸ್ ಮಾಡಿಲ್ಲ. ದೃಶ್ಯವನ್ನು ನೈಜವಾಗಿ ಕಾಣುವಂತೆ ಮಾಡಲು ಕ್ಯಾಮರಾಮನ್ ಕ್ಯಾಮೆರಾ ಕೋನ (angle) ಸೆಟ್ ಮಾಡಿ ಹೊಂದಿಸಿದರು. ಏಕೆಂದರೆ ನಾನು ಚುಂಬಿಸುವ ದೃಶ್ಯಗಳಲ್ಲಿ ಎಂದಿಗೂ ನಟಿಸಿಲ್ಲ. ಚಿತ್ರಕ್ಕೆ ಡೇಟ್ಸ್ ನೀಡುವಾಗ ನಾನು ಅಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಮುಂಚಿತವಾಗಿ ನಿರ್ದೇಶಕರಿಗೆ ಸ್ಪಷ್ಟಪಡಿಸುತ್ತೇನೆ. ಅಲ್ಲದೆ, ನಿರ್ದೇಶಕ ಶೇಖರ್ ಕಮ್ಮುಲ ಈ ಸಿನಿಮಾದ ಆ ಚುಂಬನ ದೃಶ್ಯದಲ್ಲಿ ನಟಿಸುವಂತೆ ಯಾವುದೇ ಒತ್ತಡ ಕೂಡ ನನ್ನ ಮೇಲೆ ಹಾಕಲಿಲ್ಲ’ ಅಂತ ಸ್ಪಷ್ಟಪಡಿಸಿದ್ದಾರೆ.