ಪಿಚ್ ವಿವಾದದ ಬಗ್ಗೆ ರಹಾನೆ ಕೆಂಡಾಮಂಡಲ

0
62

ಇಂಗ್ಲೆಂಡ್‌ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಅಹಮದಾಬಾದ್‌ ಪಿಚ್ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬಂದಿದ್ದವು. ಇಲ್ಲಿನ ಮೊಟೆರಾ ವಿಕೆಟ್‌ ಅನ್ನು ಕೆಲವರು ಟೀಕಸಿದ್ದರೆ, ಮತ್ತೆ ಕೆಲವರು ಸಮರ್ಥಿಸಿಕೊಂಡಿದ್ದರು. ಇದೀಗ ಟೀಮ್‌ ಇಂಡಿಯಾ ಉಪ ನಾಯಕ ಅಜಿಂಕ್ಯ ರಹಾನೆ ಕೂಡ ಸಮರ್ಥಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗರಾದ ಮೈಕಲ್‌ ವಾನ್‌, ಮಾಂಟಿ ಪನೇಸರ್‌ ಸೇರಿದಂತೆ ಹಲವರು ಎರಡನೇ ಹಾಗೂ ಮೂರನೇ ಟೆಸ್ಟ್ ಪಂದ್ಯಗಳು ನಡೆದಿದ್ದ ಪಿಚ್‌ಗಳು ಸರಿಯಿಲ್ಲ ಎಂದು ಟೀಕಿಸಿದ್ದರು. ಈ ಎರಡೂ ವಿಕೆಟ್‌ಗಳು ಟೆಸ್ಟ್ ಕ್ರಿಕೆಟ್‌ಗೆ ಲಾಯಕ್ಕಿಲ್ಲ ಎಂದು ಟೀಕಾ ಪ್ರಹಾರ ನಡೆಸಿದ್ದರು. ಅದರಂತೆ ಇಂಗ್ಲೆಂಡ್‌ ನಾಯಕ ಜೋ ರೂಟ್ ಕೂಡ‌ ಇದಕ್ಕೆ ತಾಳ ಹಾಕಿದ್ದರು.

 

ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಿಮಿತ್ತ ವರ್ಚುವಲ್‌ ಪ್ರೆಸ್‌ ಕಾನ್ಫೆರೆನ್ಸ್‌ನಲ್ಲಿ ಮಾತನಾಡಿದ ಉಪ ನಾಯಕ ಅಜಿಂಕ್ಯ ರಹಾನೆ, ಭಾರತದ ಪಿಚ್‌ಗಳ ಬಗ್ಗೆ ಯಾವುದೇ ಟೀಕೆಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ವಿದೇಶಿ ನೆಲದಲ್ಲಿ ಭಾರತೀಯ ಆಟಗಾರ ಬ್ಯಾಟಿಂಗ್‌ ಕೌಶಲವನ್ನು ಪ್ರಶ್ನಿಸುವ ಹಾಗೂ ಆ ಸಂದರ್ಭದಲ್ಲಿ ಅಲ್ಲಿನ ಪಿಚ್‌ಗಳ ಬಗ್ಗೆ ಮಾತನಾಡದ ಕ್ರಿಕೆಟ್‌ ಪಂಡಿತರನ್ನು ರಹಾನೆ ತರಾಟೆಗೆ ತೆಗೆದುಕೊಂಡರು.

“ಈ ರೀತಿಯ ಕಾಮೆಂಟ್‌ಗಳು ಡ್ರೆಸ್ಸಿಂಗ್‌ ಕೊಠಡಿಯ ಮೇಲೆ ಪರಿಣಾಮ ಬೀರುವುದಿಲ್ಲ. ಜನರು ತಮಗೆ ಇಷ್ಟ ಬಂದ ರೀತಿಯಲ್ಲಿ ಮಾತನಾಡಲಿ. ನಾವು ವಿದೇಶಿ ಪ್ರವಾಸ ಕೈಗೊಂಡಾಗ ಯಾರೊಬ್ಬರೂ ಸೀಮಿಂಗ್‌ ವಿಕೆಟ್‌ಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ, ಎಲ್ಲರೂ ಭಾರತೀಯ ಬ್ಯಾಟ್ಸ್‌ಮನ್‌ಗಳ ಕೌಶಲದ ಬಗ್ಗೆ ಅನಿಸಿಕೆ ವ್ಯಕ್ತಪಡಿಸುತ್ತಾರೆ. ಇದೀಗ ಎದ್ದಿರುವ ಟೀಕೆಗಳನ್ನು ನಮ್ಮವರು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ,” ಎಂದು ಅಜಿಂಕ್ಯ ರಹಾನೆ ತಿಳಿಸಿದರು.

ಆಟಗಾರರಿಗೆ ಅಪಾಯಕಾರಿಯಾದಾಗ ಮಾತ್ರ ಪಿಚ್ ಟೆಸ್ಟ್ ಕ್ರಿಕೆಟ್‌ಗೆ ಅನರ್ಹವೆಂದು ಪರಿಗಣಿಸಬಹುದು ಎಂದು ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ, ಟೀಮ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ತಮ್ಮ ಪ್ರವಾಸದಲ್ಲಿ ಅನುಭವಿಸಿರುವ ಮಾರಕ ಬೌನ್ಸ್ ಪಿಚ್‌ಗಳ ಬಗ್ಗೆ ಮಾತನಾಡಿದರು.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಭಾರತ ತಂಡ, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸೋಲಿನಿಂದ ತಪ್ಪಿಸಿಕೊಳ್ಳುವ ಅನಿವಾರ್ಯತೆ ಇದೆ. ಒಂದು ವೇಳೆ ಸೋತರೆ, ಇದರ ಲಾಭದೊಂದಿಗೆ ಆಸ್ಟ್ರೇಲಿಯಾ ತಂಡ ಫೈನಲ್‌ ಹಣಾಹಣಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ.

 

LEAVE A REPLY

Please enter your comment!
Please enter your name here