No menu items!
11.1 C
Munich
Wednesday, April 29, 2026

ಬೆಂಗಳೂರಿನ ಕೊರೊನಾ ಸೋಂಕಿತರಿಗೆ ಉಚಿತ ಆಕ್ಸಿಜನ್ ನೀಡಲು ಮುಂದಾದ ಸುನೀಲ್ ಶೆಟ್ಟಿ!

Must read

ದೇಶಾದ್ಯಂತ ಕೊರೊನಾ ಎರಡನೇ ಅಲೆ ಉಂಟು ಮಾಡುತ್ತಿರುವ ಸಮಸ್ಯೆಗಳು ನಾಗರೀಕರನ್ನು ಬೆಚ್ಚಿ ಬೀಳಿಸಿವೆ. ಅದರಲ್ಲೂ ರಾಜ್ಯದಲ್ಲಿ ಸ್ಥಿತಿ ಚಿಂತಾಜನಕವಾಗಿದೆ. ಬುಧವಾರ (ಏ.28) ಒಂದೇ ದಿನ 39 ಸಾವಿರಕ್ಕೂ ಅಧಿಕ ಹೊಸ ಕೊರೊನಾ ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಮಸ್ಯೆ ಹೆಚ್ಚಾಗಿದೆ. ಸಕಾಲದಲ್ಲಿ ರೋಗಿಗಳಿಗೆ ಆಕ್ಸಿಜನ್ ಸಿಗುತ್ತಿಲ್ಲ. ಇಂಥ ಸಮಯದಲ್ಲಿ ಸಹಾಯ ಹಸ್ತ ಚಾಚಿದ್ದಾರೆ ಬಾಲಿವುಡ್ ನಟ ಸುನೀಲ್ ಶೆಟ್ಟಿ. ಹೌದು, ಬೆಂಗಳೂರಿನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಮನಗಂಡು ಉಚಿತವಾಗಿ ಆಕ್ಸಿಜನ್ ಪೂರೈಕೆ ಮಾಡುವುದಕ್ಕೆ ಮುಂದಾಗಿದ್ದಾರೆ.

ಈ ಕುರಿತು ಅವರು ಟ್ವೀಟ್ ಮಾಡಿದ್ದು, ‘ನಾವೆಲ್ಲರೂ ಈಗ ಗಂಭೀರ ಪರಿಸ್ಥಿತಿಯ ಕಾಲಘಟ್ಟದಲ್ಲಿ ಇದ್ದೇವೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಅನೇಕರು ನಮ್ಮೊಂದಿಗೆ ಸಹಾಯಕ್ಕಾಗಿ ಕೈ ಜೋಡಿಸಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಫೀಡ್ ಮೈ ಸಿಟಿ ಮತ್ತು ಕೆವಿಎನ್ ಫೌಂಡೇಷನ್ ವತಿಯಿಂದ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಮಿಷನ್ ಮಿಲಿಯನ್ ಏರ್ ಹೆಸರಿನಲ್ಲಿ ನಡೆಯುತ್ತಿರುವ ಕೆಲಸವಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

‘ನನ್ನ ಎಲ್ಲ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಇದು ನನ್ನ ಮನವಿ ಆಗಿದೆ. ನಿಮಗೆ ಸಹಾಯ ಬೇಕಾಗಿದ್ದಲ್ಲಿ ಅಥವಾ ನಿಮ್ಮ ವಲಯದಲ್ಲಿ ಯಾರಿಗಾದರೂ ಸಹಾಯ ಬೇಕಿದ್ದಲ್ಲಿ, ಸಹಾಯ ಮಾಡಲು ಯಾರಾದರೂ ಸಿದ್ಧವಿದ್ದಲ್ಲಿ ನನಗೆ ನೇರವಾಗಿ ಸಂದೇಶ ಕಳಿಸಿ. ನೀವು ಕೂಡ ಕೊಡುಗೆ ನೀಡಿ, ನಿಮಗೆ ಇಷ್ಟವಿದ್ದಲ್ಲಿ ಈ ಮಿಷನ್‌ನ ಭಾಗವಾಗಿ. ದಯವಿಟ್ಟು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ಪ್ರಸ್ತುತ ಬೆಂಗಳೂರು ಮತ್ತು ಮುಂಬೈನಲ್ಲಿ ಆಕ್ಸಿಜನ್‌ ಪೂರೈಕೆ ಕೆಲಸಗಳು ನಡೆಯುತ್ತಿವೆ’ ಎಂದು ಸುನೀಲ್ ಶೆಟ್ಟಿ ತಿಳಿಸಿದ್ದಾರೆ.

ಕೋವಿಡ್-19ನಿಂದ ಬಳಲುತ್ತಿರುವ ಮುಂಬೈ ಜನತೆಗೆ ತುರ್ತು ಚಿಕಿತ್ಸೆ ನೀಡಲು ನಟ ಅಜಯ್ ದೇವ್‌ಗನ್ ಮುಂದಾಗಿದ್ದಾರೆ. ಸಿನಿಮಾರಂಗದ ಸಹೋದ್ಯೋಗಿಗಳ ಜೊತೆ ಸೇರಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿರುವ ಭಾರತ್ ಸ್ಕೌಟ್ಸ್ & ಗೈಡ್ಸ್ ಹಾಲ್‌ನಲ್ಲಿ 20 ಹಾಸಿಗೆ ಸಾಮರ್ಥ್ಯವುಳ್ಳ ಕೋವಿಡ್-19 ತುರ್ತು ಆರೋಗ್ಯ ಕೇಂದ್ರವನ್ನು ಶುರು ಮಾಡುತ್ತಿದ್ದಾರೆ ಅವರು. ಈ ಆರೋಗ್ಯ ಕೇಂದ್ರಕ್ಕೆ ವೆಂಟಿಲೇಟರ್, ಆಕ್ಸಿಜನ್ ಹಾಗೂ ಪ್ಯಾರಾ ಮಾನಿಟರ್ಸ್‌ಗಾಗಿ ಅಜಯ್ ದೇವ್‌ಗನ್ ಆರ್ಥಿಕ ನೆರವು ನೀಡಿದ್ದಾರೆ. ಜೊತೆಗೆ ಸೋನು ಸೂದ್‌, ಅಕ್ಷಯ್‌ ಕುಮಾರ್ ಸೇರಿದಂತೆ ಅನೇಕರು ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ನೆರವಿಗೆ ಧಾವಿಸಿದ್ದಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article