No menu items!
4.8 C
Munich
Saturday, May 2, 2026

‘ವಜ್ರ ವಾಸವಿ’, ‘ವಾಸವಿ ಭವನ’ ಯೋಜನೆಗಳ ಉದ್ಘಾಟನೆ

Must read

ಬೆಂಗಳೂರು: ಶ್ರೀ ಸಪ್ತಗಿರಿ ಸಾಯಿ ವಾಸವಿ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ಶಿರಡಿ ಸಾಯಿ ವಾಸವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ವಜ್ರ ವಾಸವಿ’ ಹಾಗೂ ‘ವಾಸವಿ ಭವನ’ ಕಟ್ಟಡಗಳ ನಿರ್ಮಾಣ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಬೆಂಗಳೂರಿನ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ಡಿಸೆಂಬರ್ 22ರ ಭಾನುವಾರ ಆಯೋಜಿಸಲಾಗಿದೆ.

ಆಂಧ್ರಪ್ರದೇಶದ ತಿರುಪತಿಯ ಅಲಿಪಿರಿ ರಸ್ತೆಯ ಮೃಗಾಲಯದ ಬಳಿ 108 ರೂಮ್‌ಗಳ ‘ವಜ್ರ ಭವನ’ ಅತಿಥಿ ಗೃಹ (ವಸತಿ ಸಂಕೀರ್ಣ) ನಿರ್ಮಾಣಕ್ಕೆ ‘ಶ್ರೀ ಸಪ್ತಗಿರಿ ಸಾಯಿ ವಾಸವಿ ಚಾರಿಟೇಬಲ್ ಟ್ರಸ್ಟ್’ ಮುಂದಾಗಿದೆ. ಅಂತೆಯೇ ಭಗವಾನ್ ಬಾಬಾ ಕೃಪೆಯಿಂದಾಗಿ ಶಿರಡಿಯಲ್ಲಿ 50 ರೂಮ್‌ಗಳ ‘ವಾಸವಿ ಭವನ–2’ ಅತಿಥಿ ಗೃಹ (ವಸತಿ ಸಂಕೀರ್ಣ) ನಿರ್ಮಾಣಕ್ಕೆ ‘ಶ್ರೀ ಶಿರಡಿ ಸಾಯಿ ವಾಸವಿ ಚಾರಿಟೇಬಲ್ ಟ್ರಸ್ಟ್’ ಸಜ್ಜಾಗಿದೆ. ಈ ಎರಡೂ ಕಟ್ಟಡಗಳ ನಿರ್ಮಾಣಕ್ಕೆ ಈಗಾಗಲೇ ನೀಲಿನಕ್ಷೆ (ಬ್ಲೂ ಪ್ರಿಂಟ್) ಸಿದ್ಧವಾಗಿದೆ. ಈ ಕಟ್ಟಡಗಳ ನಿರ್ಮಾಣ ಯೋಜನೆಯ ಉದ್ಘಾಟನೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಜ್ಯದ ಉಪಮುಖ್ಯಮಂತ್ರಿಯಾದ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಭಾಗವಹಿಸಲಿದ್ದು, ಆಂಧ್ರಪ್ರದೇಶದ ಚಂದ್ರಗಿರಿ ತಾಲ್ಲೂಕಿನ ಶಾಸಕ ಡಾ. ಚೆವಿ ರೆಡ್ಡಿ ಭಾಸ್ಕರ್ ರೆಡ್ಡಿ, ಆಂಧ್ರಪ್ರದೇಶದ ಅನಂತಪುರದ ಪರಿಷತ್ ಸದಸ್ಯ ಗುಂಡಮಲ ತಿಪ್ಪೇಸ್ವಾಮಿ, ಮಾಜಿ ಗೃಹ ಸಚಿವ ಆರ್. ರಾಮಲಿಂಗ ರೆಡ್ಡಿ ಹಾಗೂ ಸಹಾಯಕ ಪೊಲೀಸ್ ಕಮಿಷನರ್ ಕೆ.ಎನ್. ರಮೇಶ್ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಿರ್ಮಿಸಲು ಉದ್ದೇಶಿಸಿರುವ ವಸತಿ ಸಂಕೀರ್ಣಗಳಲ್ಲಿ ಯಾವುದೇ ಜಾತಿ, ಧರ್ಮ ಆಧಾರದ ಮೇಲೆ ರೂಮ್‌ಗಳನ್ನು ನಿರಾಕರಣೆ ಮಾಡದೆ ಸರ್ವರಿಗೆ ಅವಶ್ಯಕತೆಗನುಗುಣವಾಗಿ ರೂಮ್‌ಗಳನ್ನು ಯಾತ್ರಿಗಳಿಗೆ ಒದಗಿಸಲಾಗುತ್ತದೆ. ಹೀಗೆ ರೂಮ್‌ಗಳನ್ನು ಪಡೆಯುವ ಯಾತ್ರಿಗಳಿಂದ ಬಾಡಿಗೆ ಪಡೆಯುವುದಿಲ್ಲ. ಕೇವಲ ನಿರ್ವಹಣಾ ವೆಚ್ಚವನ್ನಷ್ಟೇ ಪಡೆದುಕೊಳ್ಳಲಾಗುತ್ತದೆ. ಪ್ರತಿ ಕೊಠಡಿಯಲ್ಲಿ ಮೂವರು ಯಾತ್ರಿಗಳು ತಂಗಲು ಅವಕಾಶ ಕಲ್ಪಿಸಲಾಗುತ್ತದೆ. ಅದರಂತೆ ಅವರಿಗೆ ದಿನದ ಮೂರು ಹೊತ್ತು (ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ) ಆಹಾರವನ್ನು ಉಚಿತವಾಗಿ ಪೂರೈಸಲಾಗುತ್ತದೆ.

‘ವಜ್ರ ವಾಸವಿ’ ವಸತಿ ಸಂಕೀರ್ಣ ಐದು ಮಹಡಿಯ ಕಟ್ಟಡದಿಂದ ಕೂಡಿರಲಿದೆ. ಆ ಕಟ್ಟಡದಲ್ಲಿ ಒಟ್ಟು 108 ಸುಸಜ್ಜಿತ ರೂಮ್‌ಗಳು ಇರಲಿವೆ. ಅದೇ ರೀತಿ ‘ವಾಸವಿ ಭವನ–2’ದಲ್ಲೂ 50 ಸುಸಜ್ಜಿತ ರೂಮ್‌ಗಳು ಇರಲಿವೆ. ಎಲ್ಲ ಮಹಡಿಗೂ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜೊತೆಗೆ ವಿಶಾಲವಾದ ಪ್ರತ್ಯೇಕ ಊಟದ ಮನೆ ಇರಲಿದೆ. ‘ವಜ್ರ ವಾಸವಿ’ಯಲ್ಲಿ 100 ಮಂದಿ ಒಟ್ಟಿಗೆ ಕೂತು ಊಟ ಮಾಡಬಹುದಾಗಿದೆ. ಜತೆಗೆ ಧ್ಯಾನ ಮಾಡಲು ಪ್ರತ್ಯೇಕ ಧ್ಯಾನ ಮಂದಿರ ವ್ಯವಸ್ಥೆ ಇದೆ. ಎರಡೂ ವಸತಿ ಸಂಕೀರ್ಣದಲ್ಲಿ 24 ಗಂಟೆಯೂ ಬಿಸಿನೀರಿನ ಸೌಕರ್ಯ ಇರಲಿದೆ. ಎಲ್‌ಇಡಿ ಟೀವಿ, ಮೆಡಿಕಲ್ ಸೌಲಭ್ಯ, ವಾಹನ ನಿಲುಗಡೆಗೆ ವಿಶಾಲವಾದ ಜಾಗದ ವ್ಯವಸ್ಥೆ ಇರಲಿದೆ’ ಎಂದು ಟ್ರಸ್ಟ್‌ನ ಅಧ್ಯಕ್ಷ ಪಿ.ವಿ. ಮನೋಹರ್ ಗುಪ್ತಾ ತಿಳಿಸಿದ್ದಾರೆ.

‘ಶ್ರೀ ಸಪ್ತಗಿರಿ ಸಾಯಿ ವಾಸವಿ ಚಾರಿಟಬಲ್ ಟ್ರಸ್ಟ್ ಹಾಗೂ ಶ್ರೀ ಶಿರಡಿ ಸಾಯಿ ವಾಸವಿ ಚಾರಿಟೇಬಲ್ ಟ್ರಸ್ಟ್ ಸದಾ ಚಟುವಟಿಕೆಯಿಂದ ಕೂಡಿರುತ್ತವೆ. ಅತಿಥಿಗಳಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಉದ್ದೇಶಿತ ಕಟ್ಟಡಗಳಲ್ಲಿ ಕಲ್ಪಿಸಲು ಈ ಎರಡೂ ಟ್ರಸ್ಟ್‌ಗಳು ಪಣ ತೊಟ್ಟಿವೆ. ಸಾಯಿಬಾಬಾ ದೇವರ ಮೇಲಿನ ಭಕ್ತಿಯಿಂದ ಟ್ರಸ್ಟ್ ಜತೆ ಬಾಬಾ ಭಕ್ತರು ಕೈಜೋಡಿಸಿ ಧನಸಹಾಯ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರಬಹುದು. ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ದೇಣಿಗೆ ನೀಡಲು ಹೆಸರು ನೋಂದಾಯಿಸಿಕೊಳ್ಳಬಹುದು. ಸಂಘ–ಸಂಸ್ಥೆಗಳು, ಪರಿಚಿತರು ಹಾಗೂ ಆಪ್ತರಿಗೂ ಧನಸಹಾಯ ಕೊಡುಗೆ ನೀಡುವಂತೆ ಸಲಹೆ ನೀಡಬಹುದು’ ಎಂದು ಟ್ರಸ್ಟ್ ಮುಖ್ಯಸ್ಥರು ಮನವಿ ಮಾಡಿದ್ದಾರೆ.

ಸ್ಥಳ: ಮಂಗಲ ಮಂಟಪ ಸಭಾಂಗಣ, ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜು, 3ನೇ ಬ್ಲಾಕ್, ಜಯನಗರ, ಬೆಂಗಳೂರು
ಸಮಯ: ಸಂಜೆ 6, ರಾತ್ರಿ 8.30ಕ್ಕೆ ಊಟದ ವ್ಯವಸ್ಥೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article