ಬಿಗ್ ಬಾಸ್ ಕನ್ನಡ ಸೀಸನ್ 8 ಶೋನಲ್ಲಿ ಎರಡನೇ ದಿನಕ್ಕೆ ಎಲಿಮಿನೇಶನ್ ಮಾಡಲು ಬಿಗ್ ಬಾಸ್ ಟಾಸ್ಕ್ ನೀಡಿದ್ದರು. ಆಗ ಶಮಂತ್ ಬ್ರೊ ಗೌಡ ಮೊದಲ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ನಿರ್ಮಲಾ ಚೆನ್ನಪ್ಪ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ. ಉಳಿದವರು ಪ್ರತಿಯೊಬ್ಬರೂ ಕೂಡ ಇಬ್ಬಿಬ್ಬರನ್ನು ನಾಮಿನೇಟ್ ಮಾಡಬೇಕಾಗಿತ್ತು. ಆಗ ಶಂಕರ್ ಅಶ್ವತ್ಥ್ ಅವರ ಹೆಸರನ್ನು ಬಹುತೇಕರು ಹೇಳಿದ್ದಾರೆ.
ಶಂಕರ್ ಅಶ್ವತ್ಥ್ ಅವರು ಬಿಗ್ ಬಾಸ್ ಕನ್ನಡ 8ರ ಮನೆಯಲ್ಲಿ ಹಿರಿಯ ಸ್ಪರ್ಧಿ. ಹೀಗಾಗಿ ಅವರಿಗೆ ಆಟ ಆಡುವಾಗ ಕಷ್ಟ ಆಗಬಹುದು, ಟಾಸ್ಕ್ ಮಾಡುವಾಗ ತೊಂದರೆ ಆಗಬಹುದು ಎಂಬ ಕಾರಣ ನೀಡಿ ಅವರನ್ನು ನಾಮಿನೇಟ್ ಮಾಡಲಾಗಿದೆ. ಶಂಕರ್ ಅವರಿಗೆ ನಾಮಿನೇಶನ್ ವೇಳೆ 8 ವೋಟ್ಗಳು ಬಂದಿವೆ. ಅವರ ವಯಸ್ಸು, ಆಟ ಆಡುವ ಸಾಮರ್ಥ್ಯವನ್ನು ನೋಡಿ ಎಲ್ಲರೂ ವೋಟ್ ಮಾಡಿದ್ದಾರೆ. ಟಾಸ್ಕ್ ವೇಳೆ ಶಂಕರ್ ಅವರಿಗೆ ಏನಾದರೂ ಸಮಸ್ಯೆ ಆದರೆ ನೋಡಲು ಆಗೋದಿಲ್ಲ ಅಂತ ಕೂಡ ಕೆಲವರು ಹೇಳಿದ್ದಾರೆ.
ಇನ್ನು ಶಂಕರ್ ಅಶ್ವತ್ಥ್ ಅವರು ಕೂಡ ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದಾರೆ. “ಸ್ಪರ್ಧೆ ವಿಚಾರದಲ್ಲಿ ನಾನು ದೈಹಿಕವಾಗಿ ಫಿಟ್ ಇಲ್ಲ ಅಂತ ಕೆಲವರು ಹೇಳಿದ್ದಾರೆ. ಅದನ್ನು ನಾನು ಒಂದು ರೀತಿಯಲ್ಲಿ ಒಪ್ಪುತ್ತೇನೆ. ನಾನು ಏನು ಮಾಡಬಲ್ಲೆ, ಹೇಗೆ ಮಾಡಬಲ್ಲೆ ಅಂತ ನನಗೆ ಗೊತ್ತಿಲ್ಲ ಅಂತ ಅಂದಮೇಲೆ ಬೇರೆಯವರಿಗೆ ಹೇಗೆ ಗೊತ್ತಾಗತ್ತೆ? ಕೆಲವರು ಅತಿಯಾದ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ, ನಮ್ಮನ್ನು ಬಿಟ್ಟರೆ ಇಲ್ಲ ಅಂತ ಅಂದುಕೊಂಡಿರುತ್ತಾರೆ. ಆರಂಭದಲ್ಲಿಯೇ ಧನುಶ್ರೀ ಅವರಲ್ಲಿ ಅತಿಯಾದ ಆತ್ಮವಿಶ್ವಾಸ ನೋಡಿದೆ. ಆಟದಲ್ಲಿ ಫಿಟ್ನೆಸ್ ಮುಖ್ಯ. ಗೀತಾ ಅವರನ್ನು ನಾಮಿನೇಟ್ ಮಾಡುತ್ತೇನೆ” ಎಂದು ಶಂಕರ್ ಅಶ್ವತ್ಥ್ ಹೇಳಿದ್ದಾರೆ.
ಇನ್ನು ಬೇರೆ ಬೇರೆ ಕಾರಣಕ್ಕೆ ದಿವ್ಯಾ ಉರುಡುಗ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ರಾಜೀವ್, ಕೆಪಿ ಅರವಿಂದ್, ಚಂದ್ರಕಲಾ ಮೋಹನ್, ಧನುಶ್ರೀ, ಪ್ರಶಾಂತ್ ಸಂಬರಗಿ ಅವರನ್ನು ನಾಮಿನೇಟ್ ಮಾಡಲಾಗಿದೆ. ಇನ್ನು ಕ್ಯಾಪ್ಟನ್ ಆದ ಬ್ರೊ ಗೌಡ ಅವರಿಗೆ ಒಬ್ಬರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಆಗ ಅವರು ಶಂಕರ್ ಅಶ್ವತ್ಥ್ರನ್ನು ಉಳಿಸಿಕೊಂಡರು. ಇನ್ನು ನಿರ್ಮಲಾ ಚೆನ್ನಪ್ಪ, ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ಧನುಶ್ರೀ ಈ ನಾಲ್ವರಲ್ಲಿ ಯಾರು ಈ ವಾರ ಮನೆಗೆ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.