ಸಿದ್ದರಾಮಯ್ಯನವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದ ಎಚ್.ವಿಶ್ವನಾಥ್

1
159

ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಉಳಿದ ನಾಲ್ಕು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಲು ಸಹಕಾರ ನೀಡಬೇಕು ಎಂದು ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವಿಟ್‍ಗೆ ತಿರುಗೇಟು ನೀಡಿದ ಅವರು, ಇದು ಸಮ್ಮಿಶ್ರ ಸರ್ಕಾರವೇ ಇದ್ದರೂ ಅಧಿಕಾರದ ಹೆಚ್ಚಿನ ಪಾಲು ಅನುಭವಿಸುತ್ತಿರುವವರು ಕಾಂಗ್ರೆಸ್ಸಿನವರು.ಮೂರನೇ ಎರಡು ಭಾಗದಷ್ಟು ಸಚಿವರು, ನಿಗಮ ಮಂಡಳಿ ಅಧ್ಯಕ್ಷರು ಕಾಂಗ್ರೆಸ್ಸಿಗರೇ ಇದ್ದಾರೆ. ಸರ್ಕಾರದಲ್ಲಿ ಏನೇ ನಿರ್ಧಾರಗಳಾದರೂ ಅದು ಕಾಂಗ್ರೆಸ್‍ನಿಂದಲೇ ಆಗಬೇಕು.

ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಹೆಸರಿನಲ್ಲಿ ಸರ್ಕಾರ ನಡೆಯುತ್ತಿದೆ, ಆದರೆ ನಿರ್ಧಾರಗಳು ಕಾಂಗ್ರೆಸ್‍ನ ಪಾಳಯದಲ್ಲಿ ಆಗುತ್ತಿವೆ.ಜೆಡಿಎಸ್ ಅಧಿಕಾರಕ್ಕಾಗಿ ಕಾಂಗ್ರೆಸ್‍ನ ಮನೆ ಬಾಗಿಲಿಗೆ ಹೋಗಿರಲಿಲ್ಲ. ಅವರಾಗಿಯೇ ಬಂದಿದ್ದಾರೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂಬ ಹೇಳಿಕೆಗಳು ಹೊರಬರುತ್ತಿವೆ. ಇವು ಅಪ್ರಸ್ತುತ.

ನನಗೆ ಸಿದ್ದರಾಮಯ್ಯ ಅವರ ಜೊತೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಕಿಡಿಗೇಡಿತನದ, ಹೊಟ್ಟೆ ಕಿಚ್ಚಿನ ಹೇಳಿಕೆಗಳನ್ನು ಕೊಡುವುದು, ಏಕವಚನದಲ್ಲಿ ಮಾತನಾಡುವುದು ನನ್ನ ಜಾಯಮಾನವಲ್ಲ, ನನ್ನ ರಕ್ತದಲ್ಲೂ ಅದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗಲೂ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಮುಖ್ಯಮಂತ್ರಿಯಂತೆ ಕಾಣಿಸುತ್ತಾರೆ, ಧರ್ಮಸಿಂಗ್ ಆ ರೀತಿ ಕಾಣುವುದಿಲ್ಲ ಎಂದು ಹೇಳಿಸಿ ಮುಖ್ಯಮಂತ್ರಿಯಾಗಿದ್ದವರಿಗೇ ಅವಮಾನ ಮಾಡಿದ್ದರು. ಹಿಂಬಾಲಕರ ಮೂಲಕ ಈ ರೀತಿ ಹೇಳಿಕೆಗಳು ಒಳ್ಳೆಯದಲ್ಲ ಎಂದರು.

ಸಮ್ಮಿಶ್ರ ಸರ್ಕಾರ ಉತ್ತಮವಾಗಿ ನಡೆಯಲು ಸಮನ್ವಯ ಸಮಿತಿ ಬಹಳ ಮುಖ್ಯವಾಗಿದೆ. ಆ ಸಮಿತಿಗೆ ನನ್ನನ್ನು ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸೇರಿಸಿಕೊಳ್ಳಿ. ಚರ್ಚೆ ಮಾಡೋಣ, ಪ್ರಜಾಪ್ರಭುತ್ವದಲ್ಲಿ ಚರ್ಚೆ ಮುಖ್ಯ ಎಂದು ವಿಶ್ವನಾಥ್ ಹೇಳಿದರು.

1 COMMENT

LEAVE A REPLY

Please enter your comment!
Please enter your name here