No menu items!
9.3 C
Munich
Wednesday, April 29, 2026

ಹೊಸಕೋಟೆವರೆಗೂ ನಮ್ಮ ಮೆಟ್ರೋ ರೈಲು!?

Must read

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣಕ್ಕೆ ನಮ್ಮ ಮೆಟ್ರೋ ರೈಲು ಸೇವೆವನ್ನು ವಿಸ್ತರಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಲಾಗಿದೆ.

ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಈ ಕುರಿತು ಮನವಿ ಸಲ್ಲಿಕೆ ಮಾಡಿದ್ದಾರೆ. ಮೈಸೂರು ರಸ್ತೆ-ಕೆಂಗೇರಿ ವಿಸ್ತರಿತ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ ದೀಪ್ ಸಿಂಗ್ ಪುರಿಗೆ ಮುಖ್ಯಮಂತ್ರಿಗಳ ಮೂಲಕ ಎಂಟಿಬಿ ನಾಗರಾಜ್ ಮನವಿ ಸಲ್ಲಿಸಿದರು.

 

ಹೊಸಕೋಟೆ ಪಟ್ಟಣ ಬೆಂಗಳೂರು ಹೊರವಲಯದಲ್ಲಿ ಅಂದರೆ ಬಿಬಿಎಂಪಿ ವ್ಯಾಪ್ತಿಯಿಂದ 10 ಕಿ. ಮೀ. ದೂರದಲ್ಲಿದೆ. ಭಾರತದ ಸಿಲಿಕಾನ್ ವ್ಯಾಲಿ ವೈಟ್ ಫೀಲ್ಡ್ ಐಟಿ ಪಾರ್ಕ್‌ಗೆ ಹೊಸಕೋಟೆ ಪಟ್ಟಣ ತೀರ ಹತ್ತಿರದಲ್ಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ವೈಟ್ ಫೀಲ್ಡ್ ಸುತ್ತ-ಮುತ್ತ ನೂರಾರು ಐಟಿ ಕಂಪನಿಗಳು ಬೀಡು ಬಿಟ್ಟಿವೆ. ವಾಣಿಜ್ಯ ಕಟ್ಟಡಗಳು, ಬೃಹತ್ ಕಟ್ಟಡಗಳು ಇದ್ದು ಲಕ್ಷಾಂತರ ಅಪಾರ್ಟ್‌ಮೆಂಟ್‌ಗಳಿವೆ. ಇದರಿಂದಾಗಿ ಹೊಸಕೋಟೆ ಪಟ್ಟಣದ ಸುತ್ತ- ಮುತ್ತ ತೀವ್ರ ಸಂಚಾರದ ಒತ್ತಡ ನಿರ್ಮಾಣವಾಗಿದೆ ಎಂದು ವಿವರಿಸಲಾಗಿದೆ.

ಹೊಸಕೋಟೆ ಪಟ್ಟಣವು ಮಾಲೂರು ಕೈಗಾರಿಕಾ ಪ್ರದೇಶ, ನಂದಗುಡಿ ಕೈಗಾರಿಕಾ ಪ್ರದೇಶ ಮತ್ತು ಕೋಲಾರ ಕೈಗಾರಿಕಾ ಪ್ರದೇಶಗಳ ಹೆಬ್ಬಾಗಿಲು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬದಲಿ ರಸ್ತೆಯು ಹೊಸಕೋಟೆ ತಾಲ್ಲೂಕಿನ ಮೂಲಕ ಹಾದು ಹೋಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಹೊಸಕೋಟೆ ಪಟ್ಟಣದಲ್ಲಿನ ಜೀವನ ಮಟ್ಟ ಬೆಂಗಳೂರು ನಗರಕ್ಕಿಂತ ಕಡಿಮೆ ಇರುವುದರಿಂದ ಬೆಂಗಳೂರಿನ ಉದ್ಯೋಗಿಗಳು ಬೆಂಗಳೂರು ಹೊರವಲಯ ಹಾಗೂ ಹೊಸಕೋಟೆ ಪಟ್ಟಣದಲ್ಲಿ ಭಾರೀ ಸಂಖ್ಯೆಯಲ್ಲಿ ವಾಸವಾಗಿದ್ದು, ಅವರು ಬೆಂಗಳೂರಿಗೆ ತೆರಳಲು ನಮ್ಮ ಮೆಟ್ರೋ ರೈಲು ಸಂಚಾರ ಕಲ್ಪಿಸಿದರೆ ಸಹಾಯಕವಾಗಲಿದೆ.

ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾದರೆ ರಸ್ತೆ ಮಾರ್ಗದ ಮೇಲೆ ಇರುವ ಅತೀ ದೊಡ್ಡ ಒತ್ತಡವನ್ನು ತಪ್ಪಿಸಬಹುದು. ಹಾಗಾಗಿ, ಮೆಟ್ರೋ ಮಾರ್ಗವನ್ನು ಹೊಸಕೋಟೆ ಪಟ್ಟಣದವರೆಗೆ ವಿಸ್ತರಿಸುವಂತೆ ಎಂಟಿಬಿ ನಾಗರಾಜ್ ಮನವಿ ಮಾಡಿದ್ದಾರೆ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article