ಇಂದು ಡಿ.ಕೆ. ಶಿವಕುಮಾರ್ ಪ್ರಮಾಣವಚನ; ಸಚಿವ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ?
ಬೆಂಗಳೂರು: ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಲೋಕಭವನದ ಗಾಜಿನ ಮನೆಯಲ್ಲಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ವಿವಿಧ ಧರ್ಮಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ.
ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಫಾದರ್ಗಳು ಹಾಗೂ ಮೌಲ್ವಿಗಳನ್ನು ಒಳಗೊಂಡಂತೆ ಸುಮಾರು 55 ಧಾರ್ಮಿಕ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ವೇದಿಕೆಯಲ್ಲಿ ಸುಮಾರು 20 ಗಣ್ಯರ ಆಸನ ವ್ಯವಸ್ಥೆ ಮಾಡಲಾಗಿದೆ.
ಹೈಕಮಾಂಡ್ ನಾಯಕರ ಉಪಸ್ಥಿತಿ
ಪ್ರಮಾಣವಚನ ಸಮಾರಂಭಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್ನ ಹಲವು ರಾಷ್ಟ್ರೀಯ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಡಿ.ಕೆ. ಶಿವಕುಮಾರ್, 1980ರ ದಶಕದಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಪಕ್ಷ ಸಂಘಟನೆ, ಚುನಾವಣೆ ನಿರ್ವಹಣೆ ಹಾಗೂ ಹಲವು ಸವಾಲುಗಳನ್ನು ಎದುರಿಸಿ ಇದೀಗ ರಾಜ್ಯದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ.
ಸಚಿವ ಸಂಪುಟ ರಚನೆಗೆ ಅಂತಿಮ ಕಸರತ್ತು
ಪ್ರಮಾಣವಚನದ ಜೊತೆಯಲ್ಲೇ ಮೊದಲ ಹಂತದಲ್ಲಿ 10ಕ್ಕೂ ಹೆಚ್ಚು ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಕುರಿತು ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.
ಸಂಭಾವ್ಯ ಸಚಿವರ ಪಟ್ಟಿ
ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇರುವ ನಾಯಕರಲ್ಲಿ:
• ಡಾ. ಜಿ. ಪರಮೇಶ್ವರ್
• ಯು.ಟಿ. ಖಾದರ್
• ರಾಮಲಿಂಗಾ ರೆಡ್ಡಿ
• ಕೆ.ಜೆ. ಜಾರ್ಜ್
• ಪ್ರಿಯಾಂಕ್ ಖರ್ಗೆ
• ಸತೀಶ್ ಜಾರಕಿಹೊಳಿ
• ಎಂ.ಬಿ. ಪಾಟೀಲ್
• ಕೃಷ್ಣ ಬೈರೇಗೌಡ
• ಯತೀಂದ್ರ ಸಿದ್ದರಾಮಯ್ಯ
• ಬೈರತಿ ಸುರೇಶ್
• ಕೆ.ಎಚ್. ಮುನಿಯಪ್ಪ
ಅಥವಾ
• ರೂಪಕಲಾ ಶಶಿಧರ್
ಇಂದು ನಡೆಯಲಿರುವ ಪ್ರಮಾಣವಚನ ಸಮಾರಂಭದೊಂದಿಗೆ ಕರ್ನಾಟಕ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದ್ದು, ನೂತನ ಸರ್ಕಾರದ ರೂಪುರೇಷೆಗಳತ್ತ ರಾಜ್ಯದ ಗಮನ ನೆಟ್ಟಿದೆ.



