No menu items!
18 C
Munich
Friday, July 24, 2026

ನೀಟ್ ಪ್ರಶ್ನೆ ಕೇಳಿದ್ದಕ್ಕೆ ಸೋನು ನಿಗಮ್ ಕೆಂಡಾಮಂಡಲ : ಕೆರಳಿದ Gen Z, ಕಾನ್ಸರ್ಟ್ ಬಹಿಷ್ಕಾರಕ್ಕೆ ಕರೆ

Must read

ದೇಶಾದ್ಯಂತ ಉರಿಯುತ್ತಿರುವ ನೀಟ್ (NEET) ಪೇಪರ್ ಲೀಕ್ ಜ್ವಾಲೆ ಮತ್ತು ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ಕಾವು ಈಗ ಬಾಲಿವುಡ್ ಅಂಗಳಕ್ಕೂ ತಟ್ಟಿದೆ. ದೇಶದ ಲಕ್ಷಾಂತರ ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ಈ ಸೂಕ್ಷ್ಮ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಬಾಲಿವುಡ್‌ನ ಖ್ಯಾತ ಗಾಯಕ ಸೋನು ನಿಗಮ್ ಭಾರಿ ಸಿಟ್ಟಿಗೆದ್ದು ಮಾಧ್ಯಮ ಪ್ರತಿನಿಧಿಗಳ ಮೇಲೆಯೇ ಗರಂ ಆಗಿದ್ದಾರೆ. ಸದ್ಯ ಸೋನು ನಿಗಮ್ ಅವರ ಈ ವರ್ತನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾವೇರಿದ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಗಾಯಕನ ನಡೆಗೆ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ಅಷ್ಟೇ, ಮುಗೀತು ಬಿಡಿ : ವರದಿಗಾರನ ಮೇಲೆಯೇ ಸಿಟ್ಟಾದ ಗಾಯಕ

ಘಟನೆಯ ವೀಡಿಯೋ ವೈರಲ್ ಆಗಿದ್ದು, ಅದರಲ್ಲಿ ಮಾಧ್ಯಮ ವರದಿಗಾರರೊಬ್ಬರು ಸೋನು ನಿಗಮ್ ಅವರ ಬಳಿ ದೇಶಾದ್ಯಂತ ನಡೆಯುತ್ತಿರುವ ನೀಟ್ ಅಕ್ರಮ ಮತ್ತು ವಿದ್ಯಾರ್ಥಿಗಳ ಹೋರಾಟದ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ಆದರೆ ಈ ಸೂಕ್ಷ್ಮ ವಿಚಾರಕ್ಕೆ ಉತ್ತರಿಸಲು ನಿರಾಕರಿಸಿದ ಸೋನು, ನಾನು ಇಲ್ಲಿಗೆ ಯಾವ ಕೆಲಸಕ್ಕೆ ಬಂದಿದ್ದೇನೋ ಅದು ಮುಗಿಯಿತು, ಅಷ್ಟೇ, ಸಾಕು ಬಿಡಿ ಎಂದು ಸಿಟ್ಟಿನಿಂದ ಜಾರಿಕೊಳ್ಳಲು ಯತ್ನಿಸಿದ್ದಾರೆ. ಪತ್ರಕರ್ತರು ಹೆಚ್ಚಿನ ಪ್ರತಿಕ್ರಿಯೆಗೆ ಒತ್ತಾಯಿಸಿದಾಗ, ಮತ್ತಷ್ಟು ಕೋಪಗೊಂಡ ಸೋನು ನಿಗಮ್ ಅಭಿ ಹೋ ಗಯಾ, ಬಸ್ ಎಂದು ಗಡಸು ಧ್ವನಿಯಲ್ಲಿ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಅತ್ಯಂತ ನಾಚಿಕೆಗೇಡಿನ ನಡವಳಿಕೆ : ನೆಟ್ಟಿಗರ ಕೆಂಗಣ್ಣು

ಸೋನು ನಿಗಮ್ ಅವರ ಈ ಅಹಂಕಾರದ ವರ್ತನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸಾಲು ಸಾಲು ಕಮೆಂಟ್‌ಗಳ ಮೂಲಕ ಗಾಯಕನ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ದೇಶದ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ಪ್ರಮುಖ ರಾಷ್ಟ್ರೀಯ ವಿಷಯದ ಬಗ್ಗೆ ಮಾತನಾಡಲು ಈ ಸೆಲೆಬ್ರಿಟಿಗಳಿಗೆ ಸಮಯವಿಲ್ಲವೇ? ಎಂದು ಹಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರಂತೂ ಸೋನು ಅವರ ನಡವಳಿಕೆಯನ್ನು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದ್ದು, ಅವರ ಮುಂದಿನ ಲೈವ್ ಶೋ ಹಾಗೂ ಕಾನ್ಸರ್ಟ್‌ಗಳನ್ನು ಬಹಿಷ್ಕರಿಸುವಂತೆ ಆನ್‌ಲೈನ್‌ನಲ್ಲಿ ಕರೆ ನೀಡಿದ್ದಾರೆ.

ಗಾಯಕನ ಪರ ವಕಾಲತ್ತು ವಹಿಸಿದ ಅಭಿಮಾನಿ ಬಳಗ

ಇನ್ನೊಂದೆಡೆ, ಸೋನು ನಿಗಮ್ ಬೆಂಬಲಕ್ಕೆ ನಿಂತಿರುವ ಅವರ ಅಭಿಮಾನಿಗಳು ಗಾಯಕನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ದೇಶದಲ್ಲಿ ನಡೆಯುವ ಪ್ರತಿಯೊಂದು ರಾಜಕೀಯ ಹಾಗೂ ಸಾಮಾಜಿಕ ಘಟನೆಗಳ ಬಗ್ಗೆಯೂ ಸೆಲೆಬ್ರಿಟಿಗಳು ಅಥವಾ ಸಾರ್ವಜನಿಕ ವ್ಯಕ್ತಿಗಳು ಪ್ರತಿಕ್ರಿಯಿಸಲೇಬೇಕು ಎಂದು ಬಲವಂತ ಮಾಡುವುದು ಸರಿಯಲ್ಲ ಎಂದು ವಾದಿಸಿದ್ದಾರೆ. ಯಾವುದಾದರೂ ವಿಷಯದ ಬಗ್ಗೆ ಮೌನವಾಗಿರುವುದು ಅಥವಾ ಪ್ರತಿಕ್ರಿಯಿಸದಿರುವುದು ಅವರ ವೈಯಕ್ತಿಕ ನಿರ್ಧಾರ ಮತ್ತು ಹಕ್ಕು. ಅದಕ್ಕೆ ಈ ರೀತಿ ಟ್ರೋಲ್ ಮಾಡುವುದು ಹಾಗೂ ಶೋ ಬಹಿಷ್ಕರಿಸಲು ಕರೆ ನೀಡುವುದು ಅನಗತ್ಯ ಎಂಬುದು ಅವರ ಅಭಿಪ್ರಾಯವಾಗಿದೆ.

ವಿದ್ಯಾರ್ಥಿ ಹೋರಾಟಕ್ಕೆ ಸಾಥ್ ನೀಡಿದ ಬಾಲಿವುಡ್ ದಿಗ್ಗಜರು

ವಿಶೇಷವೆಂದರೆ, ಒಂದು ಕಡೆ ಸೋನು ನಿಗಮ್ ಮೌನಕ್ಕೆ ಶರಣಾಗಿ ಗರಂ ಆಗಿದ್ದರೆ, ಇನ್ನೊಂದೆಡೆ ಬಾಲಿವುಡ್‌ನ ಹಲವು ಪ್ರಮುಖ ತಾರೆಯರು ನೀಟ್ ಅಕ್ರಮದ ವಿರುದ್ಧ ವಿದ್ಯಾರ್ಥಿಗಳ ಜೊತೆ ಧ್ವನಿಗೂಡಿಸಿದ್ದಾರೆ. ನವದೆಹಲಿಯಲ್ಲಿ ನಡೆದ ‘ಚಲೋ ಸಂಸದ್’ ಮೆರವಣಿಗೆಯಲ್ಲಿ ಹಿರಿಯ ನಟಿ ಶಬಾನಾ ಅಜ್ಮಿ, ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತು ರ‍್ಯಾಪರ್ ಹನುಮಾನಕೈಂಡ್ ನೇರವಾಗಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ನಡೆದ ಧರಣಿಯಲ್ಲಿ ನಟರಾದ ಇಮ್ರಾನ್ ಖಾನ್, ಹುಮಾ ಖುರೇಷಿ, ಸಾಕಿಬ್ ಸಲೀಮ್, ಆಯೇಷಾ ಖಾನ್ ಮತ್ತು ಶಾಲಿನಿ ಪಾಂಡೆ ಬೀದಿಗಿಳಿದು ಹೋರಾಟಕ್ಕೆ ಸಾಥ್ ನೀಡಿದ್ದಾರೆ.

ಆಲಿಯಾ, ಮಾಧವನ್‌ಗೆ ಕ್ಲಾಸ್ ತಗೊಂಡಿದ್ದ ಫ್ಯಾನ್ಸ್

ಇನ್ನು ಸೂಪರ್‌ಸ್ಟಾರ್‌ಗಳಾದ ಆಲಿಯಾ ಭಟ್ ಮತ್ತು ಆರ್. ಮಾಧವನ್ ಸೇರಿದಂತೆ ಹಲವು ನಟರು ಪ್ರತಿಭಟನೆ ತೀವ್ರಗೊಂಡ ನಂತರ, ತಡವಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ವಿದ್ಯಾರ್ಥಿಗಳು ಹಾಗೂ ನೆಟ್ಟಿಗರು ಎಲ್ಲ ಮುಗಿದ ಮೇಲೆ ಬೆಂಬಲ ನೀಡಲು ಬಂದಿದ್ದೀರಾ? ಎಂದು ಇಬ್ಬರನ್ನೂ ತೀವ್ರವಾಗಿ ಟೀಕಿಸಿದ್ದರು. ಈಗ ಸೋನು ನಿಗಮ್ ಅವರ ಈ ಬೇಜವಾಬ್ದಾರಿ ರಿಯಾಕ್ಷನ್ ಬಾಲಿವುಡ್ ಮಂದಿಗೆ ದೇಶದ ವಿಷಯಗಳಿಗಿಂತ ತಮ್ಮ ವೈಯಕ್ತಿಕ ಕಾರ್ಯಕ್ರಮಗಳೇ ಮುಖ್ಯವೇ ಎಂಬ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ ನೀಟ್ ಜ್ವಾಲೆ

ಪರೀಕ್ಷಾ ಅಕ್ರಮ ಮತ್ತು ಪೇಪರ್ ಲೀಕ್ ವಿರುದ್ಧ ಆರಂಭವಾದ ಈ ವಿದ್ಯಾರ್ಥಿ ಚಳವಳಿ ಈಗ ದೇಶದ ಪ್ರಮುಖ ನಗರಗಳಿಗೆ ಹಬ್ಬಿದ್ದು, ಭಾರಿ ಕಿಚ್ಚು ಹೊತ್ತಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ತಕ್ಷಣವೇ ಪಾರದರ್ಶಕ ಸುಧಾರಣೆ ತರಬೇಕು ಹಾಗೂ ಅಕ್ರಮಕ್ಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಈ ನಡವಳಿಕೆಗಳು ಮತ್ತು ಸೆಲೆಬ್ರಿಟಿಗಳ ಮೌನ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

- Advertisement -spot_img

More articles

- Advertisement -spot_img

Latest article