No menu items!
2.7 C
Munich
Friday, May 1, 2026

ಇವರು 57 ವರ್ಷಗಳ ಕಾಲ 7 ಗುಡ್ಡಗಳನ್ನು ಕಡಿದು 40 ಕಿ.ಮೀ ರಸ್ತೆ ನಿರ್ಮಿಸಿದ ಶಿಕ್ಷಕ

Must read

ಇವರು 57 ವರ್ಷಗಳ ಕಾಲ 7 ಗುಡ್ಡಗಳನ್ನು ಕಡಿದು 40 ಕಿ.ಮೀ ರಸ್ತೆ ನಿರ್ಮಿಸಿದ ಶಿಕ್ಷಕ

ಅಹಮದ್ ನಗರ ಜಿಲ್ಲೆಯ ರಾಜಾರಾಂ ಭಾಪ್ಕರ್ ಮಾಂಝಿಯಂತೆ ಬೆಟ್ಟಗಳನ್ನು ಬಗೆದು ತನ್ನೂರಿಗೆ ರಸ್ತೆ ಭಾಗ್ಯ ಕರುಣಿಸಿದ್ದಾರೆ. ಗುಂಡೆಗಾಂವ್ನಲ್ಲಿ ಶಿಕ್ಷಕರಾಗಿದ್ದ ಭಾಪ್ಕರ್, ಬರೋಬ್ಬರಿ 57 ವರ್ಷಗಳ ಕಾಲ ನಿರಂತರವಾಗಿ 7 ಗುಡ್ಡಗಳನ್ನು ಕಡಿದು ತಮ್ಮೂರಿಗೆ 40 ಕಿ.ಮೀ. ದೂರದ ರಸ್ತೆ ನಿರ್ಮಿಸಿದ್ದಾರೆ.
ರಾಜಾರಾಂ ಭಾಪ್ಕರ್ ಅವರು, ಸ್ಥಳೀಯರಿಂದ ಭಾಪ್ಕರ್ ಗುರೂಜಿ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಾರೆ. ಭಾಪ್ಕರ್, ಬಿಳಿ ಅಂಗಿ, ಪೈಜಾಮ, ತಲೆಯ ಮೇಲೊಂದು ಗಾಂಧಿ ಟೊಪ್ಪಿ ತೊಟ್ಟ ಸಾದಾ-ಸೀದಾ ವ್ಯಕ್ತಿ. ಆದರೆ, ಆ ಸರಳತೆಯ ಒಳಗೆ ಸಾಲು ಸಾಲು ಬೆಟ್ಟಗಳನ್ನೇ ಕರಗಸಿದ ಅಸೀಮ ದೃಢತೆ ಮತ್ತು ಕಠಿಣ ಪರಿಶ್ರಮ ಅಡಗಿದೆ ಎಂದರೆ ಎಂತವರು ಬೆರಗಾಗಬೇಕು ಹಾಗಿದೆ ಇವರ ಕಥೆ.
ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊತ್ತಿಗೆ ಗುಂಡೆಗಾಂವ್ಗೆ ಸರಿಯಾದ ಕಾಲುದಾರಿ ಕೂಡ ಇರಲಿಲ್ಲ. ಭಾಪ್ಕರ್, ಗುಜರಾತಿ ಭಾಷೆಯಲ್ಲಿ ಕೇವಲ ಏಳನೇ ತರಗತಿವರೆಗೆ ಕಲಿತಿದ್ದಾರೆ. 1957ರಿಂದ 1991ರವರೆಗೆ ಕೋಲೆಗಾಂವ್ನ ಜಿಲ್ಲಾ ಪರಿಷತ್ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಆದರೆ, ಗುಂಡೆಗಾಂವ್ನಿಂದ ಕೋಲೆಗಾಂವ್ಗೆ ಹೋಗಲು ಅಲ್ಲಿನ ಜನ ಮೂರು ಹಳ್ಳಿಗಳನ್ನು ದಾಟಿ ಹೋಗಬೇಕಿತ್ತು.


700 ಮೀ. ಎತ್ತರದ ಬೆಟ್ಟಗಳನ್ನು ಬಗೆದು ರಸ್ತೆ ನಿರ್ಮಿಸುವ ಮೂಲಕ ಗ್ರಾಮಕ್ಕೆ ಸೂಕ್ತ ಸಂಪರ್ಕ ವ್ಯವಸ್ಥೆ ಮಾಡುವಂತೆ ಸರ್ಕಾರಗಳಿಗೆ ಹಲವು ಸಲ ಮನವಿ ಮಾಡಿದ್ದನ್ನು ಇಂದಿಗೂ ನೆನೆಪಿಸಿಕೊಳ್ಳುವ ಭಾಪ್ಕರ್, ಆಡಳಿತ ವ್ಯವಸ್ಥೆಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಗದೇ ಬೇಸತ್ತು, ಅಂತಿಮವಾಗಿ ತಾವೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾಗಿ ಹೇಳುತ್ತಾರೆ.
1957ರಲ್ಲಿ ಹಠಕ್ಕೆ ಬಿದ್ದು ಆರಂಭಿಸಿದ ಕೆಲಸ ಇವತ್ತು ಒಟ್ಟು 40 ಕಿಲೋಮೀಟರ್ ಉದ್ದದ ಏಳು ರಸ್ತೆನಿರ್ಮಿಸಿ ಹಳ್ಳಿಗೆ ಸಂಪರ್ಕಿಸಿದ್ದಾರೆ. ಈ ಮೊದಲು ಕೋಲೆಗಾಂವ್ನಿಂದ ಡಿಯುಲ್ಗಾಂವ್ಗಿದ್ದ 29 ಕಿಲೋಮೀಟರ್ ಅಂತರ ಇದೀಗ ಕೇವಲ 10 ಕಿಲೋಮೀಟರ್ ಇಳಿದಿದೆ.ಬೆಟ್ಟ ಕಡಿದು ಮಾಡಿದ ಕಚ್ಛಾ ರಸ್ತೆ 2 ಊರುಗಳನ್ನು ಸಮೀಪಿಸಿದೆ.


ಭಾಷ್ಕರ್ ರಸ್ತೆ ನಿರ್ಮಾಣಕ್ಕೆ ತನ್ನೊಂದಿಗೆ ಕೈಜೋಡಿಸಿದವರಿಗೆ ತಮ್ಮ ಸ್ವಂತ ಹಣದಿಂದ ಕೂಲಿ ಕೊಟ್ಟಿದ್ದಾರೆ. ಅದರಲ್ಲೂ ತಮ್ಮ ಅರ್ಧ ಸಂಬಳವನ್ನು ರಸ್ತೆ ಕೆಲಸಕ್ಕಾಗಿಯೇ ವೆಚ್ಚ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರದಿಂದ ಒಂದೇ ಒಂದು ನಯಾ ಪೈಸೆಯನ್ನೂ ಪಡೆಯದೆ ರಸ್ತೆ ನಿರ್ಮಿಸಿದ್ದಾರೆ.


ಈ ರಸ್ತೆ, 1968ರಲ್ಲಿ ಇಲ್ಲಿದ್ದ ಕಾಲುದಾರಿ ಸೈಕಲ್ ಓಡಿಸಲು ಸಹ ಯೋಗ್ಯವಾಗಿರಲಿಲ್ಲ. ಆದರೆ, ಈಗ ಭಾರೀ ವಾಹನಗಳೂ ನಿತ್ಯ ಓಡಾಡುತ್ತವೆ . 1997ರಲ್ಲೇ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಿದ ಭಾಪ್ಕರ್, ತಮ್ಮ ಅಷ್ಟೂ ಪಿಂಚಣಿ ಹಾಗೂ ನಿವೃತ್ತಿ ನಂತರದ ಆದಾಯವನ್ನು ರಸ್ತೆಗಾಗಿಯೇ ವ್ಯಯಿಸಿದ್ದಾರೆ.
ಇನ್ನು ರಸ್ತೆ ನಿರ್ಮಿಸಲು ಭಾಪ್ಕರ್, ಗುದ್ದಲಿ, ಹಾರೆಗಳೊಂದಿಗೆ ಬೆಟ್ಟವನ್ನು ಕರಗಿಸಲು ಜೆಸಿಬಿಯಂತಹ ಯಂತ್ರಗಳನ್ನೂ ಅವರು ಬಾಡಿಗೆ ಪಡೆದಿದ್ದರು. ಬೇಕಾಬಿಟ್ಟಿಯಾಗಿ ಇವರು ರಸ್ತೆ ನಿರ್ಮಿಸಲಿಲ್ಲ. ಸರ್ಕಾರ ನಿರ್ಮಿಸಿದ್ರೆ, ಅಥವಾ ಒಬ್ಬ ಇಂಜಿನಿಯರ್ ನಿರ್ಮಿಸಿದ ರಸ್ತೆ ಹೇಗೆ ಇರುತ್ತೋ ಅಂತಹ ರಸ್ತೆಯನ್ನು ನಿರ್ಮಿಸಿದ್ರು. ಈಗ ಹೊರಜಗತ್ತಿನಿಂದ ದೂರವೇ ಉಳಿದಿದ್ದ ಹಳ್ಳಿಯೊಂದು ಬೆಟ್ಟ ಕರಗಿಸಿ ರಸ್ತೆ ಕಂಡಿದೆ.
ಮಹಾರಾಷ್ಟ್ರದ ಈ ಮಾಂಝಿ’ಯ ಕಾರಣದಿಂದಾಗಿ ಇಂದು ಈ ಗ್ರಾಮದ ಜನ ಅಭಿವೃದ್ಧಿಯ ಪಥದಲ್ಲಿ ಸಾಗಿದೆ. ಒಂದು ರಸ್ತೆ ನಿರ್ಮಾಣದಿಂದ ಒಂದು ಗ್ರಾಮದ ಭವಿಷ್ಯವನ್ನೇ ಬದಲಿಸಬಹುದು ಎಂಬುದನ್ನು, ರಾಜರಾಂ ತೋರಿಸಿಕೊಟ್ಟಿದ್ದಾರೆ. ಜಗತ್ತೇ ಬೆರಗುಗೊಳ್ಳುವಂತಹ ಸಾಧನೆ ಮಾಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article