ವಿಜಯ್ ಜಾಧವ್ . ಸಾಮಾಜಿಕ ಕಾರ್ಯಕರ್ತ, ಮುಖ್ಯವಾಗಿ ಮನೆ ಬಿಟ್ಟು ಮಕ್ಕಳ ರಕ್ಷಕ. ಮನೆ ತೊರೆದು ಬೀದಿಬದಿಯಲ್ಲೇ, ರೈಲ್ವೆ ಸ್ಟೇಷನ್ ನಲ್ಲೋ ಅಥವಾ ಭೀಕ್ಷಾಟನೆಯಲ್ಲೊ ತೊಡಗುವ ಮಕ್ಕಳನ್ನು ಹುಡುಕಿ ತಮ್ಮ ‘ಸಮತೋಲ್ ’ನಲ್ಲಿ ನೆಲೆವಿರಿಸಿ ಆ ಮಕ್ಕಳಿಗೆ ಹೊಸ ಬದುಕು ಕಟ್ಟಿಕೊಡುತ್ತಿದ್ದಾರೆ.
ನೋಡಿ, ನಮ್ಮ ದೇಶದಲ್ಲಿ ಮಕ್ಕಳು ಅದರಲ್ಲೂ 7ರಿಂದ 14 ವರ್ಷದ ಪುಟಾಣಿಗಳು ಸಣ್ಣಪುಟ್ಟ ಕಾರಣಕ್ಕೆ ಮನೆ ತೊರೆದು ಜೀವನದ ದಿಕ್ಕು ತಪ್ಪುತ್ತಾರೆ. ತಂದೆ-ತಾಯಿ ಬೈದಿದ್ದಕ್ಕೋ, ಬಡತನದ ಬೇಗೆಗೋ ಇಲ್ಲವೆ ಸ್ನೇಹಿತರ ಸಂಗದಿಂದಲೋ ಮನೆ ತೊರೆಯುವ ಮಕ್ಕಳನ್ನು ಹುಡುಕಿ ಮತ್ತೆ ಮನೆಗೆ ಸೇರಿಸುವ ಕೆಲಸವನ್ನು ವಿಜಯ್ ಜಾಧವ್ ಮಾಡುತ್ತಿದ್ದಾರೆ.
ವಿಜಯ್ ಜಾಧವ್ ಅವರು 2004ರಲ್ಲಿ ಈ ಮಕ್ಕಳ ರಕ್ಷಣೆಗೆ ಮುಂದಾದರು. ಈ ಕೆಲಸಕ್ಕೆ ದೊಡ್ಡ ಸ್ವರೂಪ ನೀಡಬೇಕೆಂಬ ಕನಸು ‘ಸಮತೋಲ್’ ಎಂಬ ಸಂಸ್ಥೆಯನ್ನು ಕಟ್ಟುವ ಮೂಲಕ 2006ರಲ್ಲಿ ನನಸಾಗಿಸಿಕೊಂಡರು.
‘ಸಮತೋಲ್’ ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡಿದ್ದು ಮುಂಬೈ ಹಾಗೂ ಸುತ್ತಮುತ್ತಲ್ಲಿರುವ ವಿವಿಧ ರೈಲು ನಿಲ್ದಾಣಗಳನ್ನು. ಮುಂಬೈ ರೈಲು ನಿಲ್ದಾಣವೊಂದಕ್ಕೇ ಪ್ರತಿನಿತ್ಯ 150ರಿಂದ 200ಮಕ್ಕಳು ಮನೆ ತೊರೆದು ಬರುತ್ತಾರೆ. ಇವರಿಗೆ ಮುಂದೇನು ಎಂಬುದು ಗೊತ್ತಿರುವುದಿಲ್ಲ.
ವಿಜಯ್ ನೇತೃತ್ವದ ‘ಸಮತೋಲ್’ ತಂಡ ಈವರೆಗೆ ಇಂಥ 12 ಸಾವಿರಕ್ಕೂ ಅಧಿಕ ಮಕ್ಕಳನ್ನು ಮನವೊಲಿಸಿ ಅವರ ಮನೆಗೆ ತಲುಪಿಸಿದೆ. ಕೌನ್ಸೆಲಿಂಗ್ ಮಾಡುವ ಮೂಲಕ ಬದುಕಿನ ಮುಂದಿನ ದಾರಿಯನ್ನೂ ತಿಳಿಸಿಕೊಟ್ಟಿದೆ. ಮಕ್ಕಳನ್ನು ನೋಡಿಕೊಳ್ಳುವ ಪರಿಯ ಬಗ್ಗೆ ಪಾಲಕರಿಗೂ ತಿಳಿವಳಿಕೆ ನೀಡಿದೆ.
ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಸಂಸ್ಥೆಯ ಇಬ್ಬರು ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಒಬ್ಬರು ರೈಲ್ವೆ ಪೊಲೀಸರ ನೆರವು ಪಡೆದುಕೊಂಡರೆ, ಇನ್ನೊಬ್ಬರು ಮಗುವಿನೊಂದಿಗೆ ಸ್ನೇಹ ಸಂಪಾದಿಸಿ ಸಮಸ್ಯೆ ತಿಳಿದುಕೊಳ್ಳಲು ಯತ್ನಿಸುತ್ತಾರೆ. ಈಗಲೂ ಪ್ರತಿನಿತ್ಯ 150ರಿಂದ 200 ಮಕ್ಕಳು ಇವರ ಸಂಪರ್ಕಕ್ಕೆ ಬರುತ್ತಾರೆ.
ಮನೆಗೆ ತೆರಳಲು ತೀವ್ರ ಅಡ್ಡಿಗಳಿರುವ ಮಕ್ಕಳಿಗೆ ‘ಸಮತೋಲ್’ ಶಾಶ್ವತವಾಗಿ ಆಶ್ರಯ ನೀಡಿದೆ. ಇಂಥ 400ಕ್ಕೂ ಅಧಿಕ ಮಕ್ಕಳು ಉತ್ತಮ ಭವಿಷ್ಯವನ್ನು ಅರಸುತ್ತ ಶಿಕ್ಷಣ ಪಡೆಯುತ್ತಿದ್ದಾರೆ. ನೂರಾರು ಮಕ್ಕಳು ದುಶ್ಚಟ ಗಳಿಂದ ಮುಕ್ತರಾಗಿದ್ದಾರೆ.
‘ಸಮತೋಲ್’ ಮೂಲಕ ಯಾವುದೋ ಕಾರಣಕ್ಕೂ ಮನೆಬಿಟ್ಟ ಮಕ್ಕಳಿಗೆ ಆಶ್ವಯ ನೀಡಿ ಹೊಸ ಬದುಕು ಕಟ್ಟಿಕೊಡುತ್ತಿರುವ ವಿಜಯ್ ಯಾದವ್ ಅವರ ಕಾರ್ಯ ಇತರರಿಗೂ ಸ್ಫೂರ್ತಿದಾಯಕ.
ಕ್ಯಾನ್ಸರ್ ಅಂತ ಗೊತ್ತಾದ್ಮೇಲೆ ಮಿಲೇನಿಯರ್ ಮಾಡಿದ್ದೇನು?
ಅಲಿ ಬನಾತ್.. ಈ ಹೆಸರು ಕೇಳದವರು ಬಹಳ ವಿರಳ. ಆಸ್ಟ್ರೇಲಿಯಾದ ಪ್ರಜೆಯಾದ ಅಲಿ ಬನಾತ್ ಎಂಬ ಯುವಕ ಹುಟ್ಟಿನಿಂದಲೇ ಅಗರ್ಭ ಶ್ರೀಮಂತ. ಧರ್ಮ ನಿಷ್ಠೆಯಿಂದ ಎಲ್ಲರೊಂದಿಗೂ ಸಂತೋಷಮಯವಾಗಿ ನಗುನಗುತ್ತಾ ಜೀವನ ಸಾಗಿಸುತ್ತಾ ಇದ್ದರು
ಅಲಿ ಬನಾತ್ ಪಾಲಿಗೆ 2015ರಲ್ಲಿ ಒಂದು ಅಘಾತಕಾರಿ ಸುದ್ಧಿ ಕಿವಿಗೆ ಅಪ್ಪಳಿಸುತ್ತದೆ. ಅದುವೇ ತನ್ನನ್ನು ಮರಣದ ಕೂಪಕ್ಕೆ ಕೊಂಡೊಯ್ಯುತ್ತಿರುವ ಕ್ಯಾನ್ಸರ್ ಎಂಬ ಮಾರಕ ರೋಗ ತನ್ನನ್ನು ಆವರಿಸಿರುವ ಸುದ್ಧಿ. ತಾನಿನ್ನು ಕೆಲವೇ ವರ್ಷ ಮಾತ್ರ ಬದುಕಿ ಉಳಿಯಲಿದ್ದೇನೆ ಎಂಬ ವಾಸ್ತವಾಂಶವನ್ನು ಆಸ್ಪತ್ರೆಯ ವೈದ್ಯರು ತನ್ನ ಮುಂದೆ ಬಿಚ್ಚಿಟ್ಟಾಗ ಅಲಿ ಬನಾತ್ ದೃತಿಗೆಡಲಿಲ್ಲ. ಎಲ್ಲವೂ ದೇವರ ಇಚ್ಚೆಯಾಗಿದೆ ಎಂದು ಹೇಳಿ ನಿರಾಳರಾದರು.
ತನಗೆ ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ ಎಂದರಿತ ಅಲಿ ಬನಾತ್ , ಅಂದಿನಿಂದ ಒಂದು ನಿರ್ಧಾರಕ್ಕೆ ಬಂದರು. ಇನ್ನುಮುಂದೆ ತನ್ನಲ್ಲಿರುವ ಹಣವನ್ನು ಬಡವರ ಏಳಿಗೆಗಾಗಿ ವಿನಿಯೋಗಿಸುವುದು ಎಂದು ನಿರ್ಧರಿಸಿದ ಅಲಿ ಬನಾತ್ ‘ಮುಸ್ಲಿಂ ಅರೌಂಡ್ ದಿ ವರ್ಲ್ಡ್’ ಎಂಬ ಚಾರಿಟಿ ಸಂಸ್ಥೆಯೊಂದನ್ನು ಸ್ಥಾಪಿಸಿದರು.
ಆಫ್ರಿಕಾ ಖಂಡದಲ್ಲಿರುವ ಟೋಗೊ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಹಸಿವೆಯಿಂದ ಸಾವನ್ನಪ್ಪುತ್ತಿರುವುದು ಹಾಗೂ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣಗಳಿಂದ ವಂಚಿತರಾಗುತ್ತಿರುವುದನ್ನು ಅರಿತ ಅಲಿ ಬನಾತ್, ತಾನೇ ಸ್ವತಹ ಅಲ್ಲಿಗೆ ತೆರಲಿ ಅವರ ಸೇವೆಯಲ್ಲಿ ನಿರತರಾದರು. ಈ ಮೂಲಕ ಏಷ್ಯಾ. ಆಫ್ರಿಕಾ ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಮೂಲೆ ಮೂಲೆಯಲ್ಲಿರುವ ಬಡವರ ಕಷ್ಟಗಳನ್ನು ಪರಿಹರಿಸಲು ಪ್ರಯತ್ನಿಸಿದರು.
ಆಫ್ರಿಕಾದಲ್ಲೇ ಆಲಿ ಬನಾತ್ ಕಟ್ಟಿಸಿದ ಶಾಲೆ, ಮಸೀದಿ ಹಾಗೂ ಮದರಸಗಳಿಗೆ ಲೆಕ್ಕವೇ ಇಲ್ಲ. ನೀರಿಗಾಗಿ ಕೊರೆಸಿದ ಬೋರ್ ವೆಲ್ ಗಳು ಅದೆಷ್ಟೋ. ಬಡವರ ಹಸಿವು ನೀಗಿಸಲು ನೀಡಿದ ಆಹಾರ ಪಾನೀಯಗಳು ನಮ್ಮ ಊಹೆಗೆ ನಿಲುಕದಷ್ಟು. ಈ ಕಾರಣದಿಂದಲೇ ಈ ಪ್ರದೇಶದ ಜನರ ಮನಸ್ಸಿನಲ್ಲಿ ಸದಾ ಅಚ್ಚಲಿಯದೇ ಉಳಿದಿದ್ದಾರೆ ಅಲಿ ಬನಾತ್.
ತನಗೆ ಬಾಧಿಸಿರುವ ಕ್ಯಾನ್ಸರ್ ರೋಗವು ನೀಡುತ್ತಿರುವ ಸಹಿಸಲಾಗದ ನೋವಿನ ನಡುವೆಯೂ ಬಡ ಮಕ್ಕಳೊಂದಿಗೆ ನಗುಮುಖದೊಂದಿಗೆ ಸಂತೋಷವನ್ನು. ಹಂಚಿಕೊಳ್ಳುತ್ತಿದ್ದ ಅಲಿ ಬನಾತ್ ಈಗ ನೆನಪು ಮಾತ್ರ. ತನ್ನ ಸಂಪತ್ತನ್ನು ಬಡವರಿಗಾಗಿ ದಾರೆ ಎರೆದಿದ್ದ ಆಸ್ಟ್ರೇಲಿಯಾದ ಮಲ್ಟಿ ಮಿಲಿಯನರ್ ಅಲಿ ಬನಾತ್ ಅವರು ಆಸ್ಟ್ರೇಲಿಯಾ ಸಮಯ ಮಗ್ರಿಬ್ನ ಸ್ವಲ್ಪ ಮುಂಚೆ ನಿಧನರಾದರು.
ತನ್ನ ಮರಣಕ್ಕಿಂತ ಕೆಲವೇ ಸಮಯದ ಹಿಂದೆ ತನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಲೋಕದ ಜನರಲ್ಲಿ ವಿನಂಸಿಕೊಂಡಿದ್ದ ಅಲಿ ಬನಾತ್ ಈಗ ಕೇವಲ ನೆನಪು ಮಾತ್ರ. ನನಗೆ ಬಂದಿರುವ ಕ್ಯಾನ್ಸರ್ ರೋಗವು ದೇವರು ಕಡೆಯಿಂದ ನನಗೆ ಬಂದ ಉಡುಗೊರೆಯಾಗಿದೆ. ಒಂದು ವೇಳೆ ಈ ರೋಗ ನನ್ನನ್ನು ಕಾಡದೇ ಇರುತ್ತಿದ್ದರೇ ಬಡವರಸೇವೆ ಮಾಡಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ ಎಂದ ಹಸನ್ಮುಖಿಯಾಗಿಯೇಈ ಭೂಮಿಯಿಂದ ವಿರಮಿಸಿದ ಅಲಿ ಬನಾತ್ ಎಂಬ ಚೇತನವನ್ನು ಮರೆಯಲು ಈ ಮನುಕುಲಕ್ಕೆ ಎಂದೆಂದಿಗೂ ಸಾಧ್ಯವಿಲ್ಲ ಅಲ್ಲವೇ?