ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದ ರಿಷಭ್ ಪಂತ್ ಬ್ಯಾಟಿಂಗ್ ಬಗ್ಗೆ ಇಡೀ ವಿಶ್ವವೇ ಗುಣಗಾನ ಮಾಡಿದೆ. ಅಲ್ಲದೆ, ಯುವ ಆಟಗಾರನನ್ನು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೂ ಹೋಲಿಕೆ ಮಾಡಲು ಹಲವರು ಪ್ರಯತ್ನಿಸಿದ್ದರು. ಆದರೆ, ಕ್ರಿಕೆಟ್ ದಂತಕತೆಗೆ ಹೋಲಿಕೆ ಮಾಡುವುದನ್ನು ಪಂತ್ ನಿರಾಕರಿಸಿದರು.
“ಎಂಎಸ್ ಧೋನಿ ಅವರಂಥ ದೊಡ್ಡ ಆಟಗಾರರಿಗೆ ನೀವು ಹೋಲಿಕೆ ಮಾಡಿದಾಗ ಅತ್ಯುತ್ತಮ ಭಾವನೆ ಉಂಟಾಗುತ್ತದೆ. ಆದರೆ, ಯಾರೊಂದಿಗೂ ಹೋಲಿಕೆ ಮಾಡುವುದು ನನಗೆ ಒಂಚೂರು ಇಷ್ಟವಿಲ್ಲ. ನನ್ನ ಹೆಸರಿನಲ್ಲಿಯೇ ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಸಾಧನೆ ಮಾಡಬೇಕೆಂದಿದ್ದೇನೆ. ಆ ಒಂದೇ ಒಂದು ವಿಷಯದ ಕಡೆಗೆ ಗಮನ ಹರಿಸುತ್ತಿದ್ದೇನೆ. ದಂತಕತೆಗಳೊಂದಿಗೆ ಯುವ ಆಟಗಾರರನ್ನು ಹೋಲಿಕೆ ಮಾಡುವುದು ಒಳ್ಳೆಯದಲ್ಲ,” ಎಂದು ಪಂತ್ ಹೊಸದಿಲ್ಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ 274 ರನ್ ಕಲೆ ಹಾಕಿದ್ದರ ಫಲವಾಗಿ ಬುಧವಾರ ಐಸಿಸಿ ಬಿಡುಗಡೆ ಮಾಡಿದ್ದ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ರಿಷಭ್ ಪಂತ್ ವೃತ್ತಿ ಜೀವನದ ಶ್ರೇಷ್ಠ 13ನೇ ಸ್ಥಾನ ಪಡೆದಿದ್ದರು. ಅಲ್ಲದೆ, ವಿಶ್ವದ ವಿಕೆಟ್ ಕೀಪರ್ಗಳ ಪೈಕಿ ಅತಿ ಹೆಚ್ಚು ಶ್ರೇಯಾಂಕ ಪಡೆದ ಆಟಗಾರ ಎಂಬ ಕೀರ್ತಿಗೆ ಪಂತ್ ಭಾಜನರಾದರು.
“ನನಗೆ ಅತ್ಯುತ್ತಮ ಭಾವನೆ ಉಂಟಾಗುತ್ತಿದೆ, ಆದರೆ ಶ್ರೇಯಾಂಕದ ಬಗ್ಗೆ ಏನೂ ಗೊತ್ತಿಲ್ಲ. ಭಾರತ ತಂಡವನ್ನು ಗೆಲ್ಲಿಸುವುದಷ್ಟೇ ನನ್ನ ಕೆಲಸ,” ಎಂದು ಯುವ ವಿಕೆಟ್ ಕೀಪರ್ ಹೇಳಿದರು.
ಇಂಗ್ಲೆಂಡ್ ವಿರುದ್ಧ ಮುಂಬರುವ ತವರು ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳಿಗೆ ವೃದ್ದಿಮಾನ್ ಸಹಾ ಜತೆಗೆ ರಿಷಭ್ ಪಂತ್ ಕೂಡ ವಿಕೆಟ್ ಕೀಪರ್ ಆಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2018ರಿಂದಲೂ ಟೀಮ್ ಇಂಡಿಯಾಗೆ ಪಂತ್, ವಿಕೆಟ್ ಕೀಪರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.