No menu items!
7.2 C
Munich
Thursday, April 30, 2026

ಮರೆಗುಳಿತನಕ್ಕೆ ಮದ್ದುಂಟೇ..???

Must read

ಮುಂಜಾನೆ ಎಂದಿನಂತೆ ಪೇಪರ್ ವಾಲ ಹುಡುಗ ಎಸೆದು ಹೋದ ವಾರ್ತಾಪತ್ರಿಕೆ ತೆಗೆಯಲು ಬಾಗಿಲು ತೆರೆದಾಗ ಪಕ್ಕದ ಮನೆಯ ಮನೀಶಭಾಬಿ ೪ ನೇ ತರಗತಿಯ ತನ್ನ ಮಗನ ಜೊತೆ ಎಲ್ಲಿಗೋ ಹೊರಡುವ ತರಾತುರಿಯಲ್ಲಿದ್ದಳು.ಇಂದು ಭಾನುವಾರ ಬೇರೆ..ಅದೆಲ್ಲಿಗಿರಬಹುದಪ್ಪ ಎಂಬ ಪ್ರಶ್ನೆ ಕ್ಷಣ ನನ್ನ ಕಾಡಿದರೂ ಹೊರಡುವವರನ್ನು ತಡೆಯಬಾರದು ಎಂದು ತೆಪ್ಪಗಾದೆ.ಬಾದ್ ಮೇ ಮಿಲೇಂಗೆ ಅಂದು ಕೈಬೀಸಿ ಹೊರಟೆ ಬಿಟ್ಟಳು.ಅವಳತ್ತ ತಿರುಗುತ್ತಿದ್ದಂತೆ ಇತ್ತ ಒಲೆಯ ಮೇಲಿಟ್ಟ ಹಾಲಿನ ನೆನಪಾಗಿ ಅಡಿಗೆ ಕೊಣೆಗೆ ಧಾವಿಸಿದಾಗ ಅಲ್ಲಿ ಹರಿದ ಹಾಲಿನ ಹೊಳೆಯು ಈಗ ತಾನೆ ಹೊಕ್ಕ ಮನೆಯ ನೂತನ ಗೃಹ ಪ್ರವೇಶವನ್ನು ನೆನಪಿಸುವಂತಿತ್ತು.ಇದು ದಿನ ನಿತ್ಯದ ಪರಿಪಾಠ.ನನ್ನ ಈ ಹಾಳು ಮರೆವನ್ನು ನಾನೇ ಶಪಿಸುತ್ತ ಮುಂದಿನ ಕೆಲಸದತ್ತ ಕಣ್ಣು ಹಾಯಿಸಿದೆ.ಅಷ್ಟರಲ್ಲಾಗಲೇ ಡಿಂಗ್ ಡಾಂಗ್ ಡಿಂಗ್ ಡಾಂಗ್ ಕಾಲಿಂಗ್ ಬೆಲ್ಲು ಸದ್ದು.ಬಾಗಿಲಲ್ಲಿ ಮನೀಶಾ ಬಾಬಿ ಪ್ರತ್ಯಕ್ಷ.ಅರೆ ಈಗ ಹೋದವಳು ಅದ್ಯಾವ ಮಾಯೆಯಿಂದ ಮತ್ತೆ ಬಂದಳಪ್ಪ ಅಂದುಕೊಂಡೆ.ಒಂದೇ ಉಸಿರಿನಲ್ಲಿ ಇಡಿ ವೃತ್ತಾಂತವನ್ನೆ ಹೇಳಿ ಮುಗಿಸಿದಳು.ಅಯ್ಯೋಪಾಪ ಅನ್ನಿಸಿತು.ಅವಳ ಪುಟ್ಟ ಕಂದಮ್ಮನಿಗೆ ಮರೆವಿನ ಕಾಯಿಲೆಯಂತೆ.ಶಾಲೆಯಲ್ಲಿ ಯಾವ ಪಾಠವೂ ನೆನಪುಳಿಯಲ್ಲವಂತೆ.ಸರಿಯಾದ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಕೊಡಿಸಿ ಎಂದು ಪ್ರಿನ್ಸಿಪಾಲ್ ಕರೆದು ಬುದ್ದಿ ಹೇಳಿದರಂತೆ

ಇದು ಕೇವಲ ನನ್ನ ಹಾಗೂ ಮನೀಶಾ ಭಾಬಿ ಕಥೆಯಲ್ಲ.ಬದಲಾಗಿ ಎಲ್ಲಾರ ಬದುಕಲ್ಲು ಈ ಮರೆವು ಒಂದು ಶಾಪವೇ ಸರಿ.ಎಲ್ಲೆಂದರಲ್ಲಿ ಏನನ್ನಾದರೂ ಮರೆಯುತ್ತ ಮತ್ತೆ ನೆನಪಿಸುತ್ತ ಆಗೋ ಅನಾಹುತವನ್ನು ತಪ್ಪಿಸುವ ಪ್ರಯತ್ನದತ್ತ ಸಾಗುವುದು ಎಲ್ಲರ ಜೀವನ ಶೈಲಿಯಾಗಿಬಿಟ್ಟಿದೆ.

ಆದರೆ ಮರೆವು ಮನುಷ್ಯನಿಗೆ ದೇವರು ಕೊಟ್ಟಿರೋ ವರ ಅನ್ನುತ್ತಾರೆ.ಕೆಲವು ಸಂಗತಿಗಳು ನೆನಪಿಡಲು ಯೋಗ್ಯವಾಗಿರಬಹುದು ಅಥವಾ ಅಯೋಗ್ಯವಾಗಿರಬಹುದು.ಅತ್ಯಂತ ಸಂತೋಷ ತಂದ ಘಟನೆಯನ್ನು ನೀವು ಮರೀಬೇಕಂದ್ರೂ ಮರೆಯಲಾರಿರಿ ಆದರೆ ಅದೇ ಅತಿ ದುಖಃ ತರೋ ವಿಚಾರಗಳನ್ನು ನೀವು ಮರೆಯಲು ತುಂಬಾ ಕಷ್ಟ ಪಡ್ತೀರಿ. ಇತಿಹಾಸದ ಕಾಲದ ಪುಟಗಳನ್ನು ತಿರುವಿ ಹಾಕಿದಲ್ಲಿ ನಮಗೇ ಮತ್ತದೇ ಮರೆವಿನ ವಿಚಾರ ಲಭ್ಯ.ತಾನು ಮನಸಾ ಮೆಚ್ಚಿ ಮದುವೆಯಾದ ಶಕುಂತಳೆಯನ್ನೇ ಮರೆತ ದುಷ್ಯಂತನಿಲ್ಲವೇ ಸಾಯುವ ಕಾಲಕ್ಕೆ ದಿವ್ಯಾಸ್ತ್ರ ಮರೆತ ಮಹಾರಥಿ ಕರ್ಣ ನಿಲ್ಲವೇ? ಹೀಗೆ ಮರೆಯುವ ಮಂದಿ ಎಲ್ಲ ಕಾಲದಲ್ಲಿಯೂ ಇದ್ದದ್ದು ನಿಜ.ಅಮೇರಿಕದ ಮಾಜಿ ಅಧ್ಯಕ್ಶ ರೊನಾಲ್ಡ್ ರೀಗನ್ ಮತ್ತು ಇಂಗ್ಲೀಷ್ ಕಡಲ್ಗಾಲುವೆ ಈಜಿದ ಸಾಹಸಿ ಮಿಹಿರ್ ಸೇನ್ ಕೂಡ ತೀವ್ರ ಮರೆವಿನ ಕಾಯಿಲೆಯಿಂದ ನರಳುತ್ತಿದ್ದರು.ಯಾವುದೋ ಸಿನಿಮಾ ಕಥೆಯಂತೆ ನಾಯಕ ನಾಯಕಿಯರು ಯಾವುದೋ ಆಘಾತಕ್ಕೆ ನೆನಪು ಶಕ್ತಿ ಕಳೆದುಕೊಂಡು ಮತ್ತೆ ಹಠಾತ್ತಾಗಿ ಮರಳಿ ಪಡೆಯುವಂತಲ್ಲ ಈ ಕಾಯಿಲೆ.ಇದು ಎಂಬತ್ತರ ಹರೆಯದಲ್ಲಿ ಕಾಣುವ ಮುಪ್ಪಿನ ಮರೆಗುಳಿತನವಲ್ಲ,ಎಲ್ಲಾ ವಯಸ್ಸಿನವರಲ್ಲೂ ಕಾಡುವ ಕಾಯಿಲೆಯಾಗಿದೆ.ಮುಗ್ದ ಮಕ್ಕಳಲ್ಲಿ ತೋರುವ ಮರೆಗುಳಿತನಕ್ಕೆ ಸಾಮಾನ್ಯವಾಗಿ ಯವುದಾದರೊಂದು ತರದ ಮಾನಸಿಕ ಖಿನ್ನತೆಯೇ ಕಾರಣವೆನ್ನಲಾಗಿದ್ದು ಇದಕ್ಕೆ ಸರಿಯಾದ ಚಿಕಿತ್ಸೆದೊರೆತಲ್ಲಿ ಗುಣಪಡಿಸಬಹುದಾಗಿದೆ.ಎಲ್ಲರ ಜೀವನಕ್ಕೂ ಶಾಪವಾಗಿ ಪರಿಣಮಿಸಿರೋ ಈ ಮರೆಗುಳಿತನ ಸದ್ದಿಲ್ಲದೆ ಯಾಕೆ ನುಸುಳುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕೋದು ನೀರ ಮೇಲೆ ಮಾಡಿದ ವ್ಯರ್ಥ ಹೋಮದಂತಾಗುವುದೇನು?..ಇದಕ್ಕೆ ಮದ್ದು ಇದೆಯೇ???ಬನ್ನಿ ನೋಡೋಣ.ಮರೆಗುಳಿತನದ ಈ ಕಾಯಿಲೆಗೆ ಅಲಝೆಮಿಯರ್ಸ್(Alzhemiers) ಎಂದು ಹೆಸರು.ವಿಶ್ವ ಆರೊಗ್ಯ ಸಂಸ್ಥೆಯ ಪ್ರಕಾರ ಪ್ರಪಂಚದಲ್ಲಿ ಇಂದು ೪೪ ಮಿಲಿಯಕ್ಕೂ ಹೆಚ್ಚು ಜನರು ಈ ರೋಗಕ್ಕೆ ತುತ್ತಾಗಿದ್ದಾರೆ.ಪ್ರತಿ 10 ಜನಕ್ಕೆ 1 ಒಬ್ಬರಿಗಂತೆ ಈ ರೋಗಕ್ಕೆ ಬಲಿಯಾಗುತ್ತಿದಾರೆ.ಚಿಕಿತ್ಸೆಗೆ ಬಗ್ಗದ ಈ ರೋಗ ಬಲು ವಿಚಿತ್ರ.

ಇದೊಂದು ತೀವ್ರ ಸ್ವರೂಪದ ಮರೆವಿನ ಕಾಯಿಲೆಯಾಗಿದ್ದು ಇದಕ್ಕೆ ನಿಖರ ವಾದ ಚಿಕಿತ್ಸೆ ಅಸಾಧ್ಯ.ಎಲ್ಲೊ ಏಕೆ?ಈ ರೋಗಿಗಳು ನಮ್ಮ ನಿಮ್ಮ ನಡುವೆಯೇ ಇರಬಹುದು.ಮನೆಯ ಅತ್ಯಂತ ಹಿರಿಯ ಸದಸ್ಯರು ತಾತ ಅಜ್ಜಿ ಮೊದಲಾದವರು ನಿಮ್ಮನ್ನು ಗುರುತಿಸಲು ಮರೆಯಬಹುದು.ತಾನು ಉಂಡಿದ್ದೇನೆಯೆ,ಸ್ನಾನ ಮಾಡಿದ್ದೇನೆಯೆ,ಹಗಲು ರಾತ್ರಿ ವ್ಯತ್ಯಾಸ ತಿಳಿಯದಾಗದಂತ ತೀರ ಮಗುವಿಗಿಂತ ಕಡೆಯ ಸ್ಥಿತಿ.ಕೇವಲ ಒಂದು ಜೀವಂತ ಶವ.ಮಿದುಳಿನ ನರಕೋಶಗಳ ಸಂಖ್ಯೆ ಇಳಿತ ಮತ್ತು ಉಂಟಾಗುವ ಬದಲಾವಣೆಯಿಂದ ಈ ರೋಗ ಸಂಭವ.ಕೆಲವೊಂದು ಸಮೀಕ್ಷೆಯ ಪ್ರಕಾರ ಕೆಲವೇ ವಂಶಗಳಲ್ಲಿ ರೋಗ ಮುಂದುವರಿದಿರುವುದನ್ನು ಗುರುತಿಸಲಾಗಿದೆ.ಕೆಲವು ಬಗೆಯ ವೈರಾಣು ಮಿದುಳಿನಲ್ಲಿ ಪ್ರವೇಶಿಸಿ ನರಕೋಶವನ್ನು ಆವರಿಸಿ ರೋಗ ಉಂಟುಮಾಡುವುದು.ಸಾಮಾನ್ಯವಾಗಿ ಈ ರೋಗಕ್ಕೆ ಬಲಿಯಾಗುವವರು ೪೦ ವರ್ಶಕ್ಕೆ ಮೆಲ್ಪಟ್ಟವರು.ಕ್ರಮೇಣ ಬೆನ್ನು ಗೂನಾಗುವುದನ್ನು ಬಿಟ್ಟರೆ ಶಾರೀರಿಕವಾಗಿ ಯಾವುದೇ ದೌರ್ಬಲ್ಯವಿರುವುದಿಲ್ಲ.ಮುಪ್ಪಿನಮರೆಗುಳಿತನವು (ಸೆನೆಲ್ ಡಿಮೆನ್ಶಿಯ)ಅಲ್ ಝೆಮಿಯರ್ ರೋಗಕ್ಕೆ ಸಮನಾದುದಲ್ಲ.ಇಲೆಕ್ಟ್ರೊಎನ್ಸೆಫೆಲೋಗ್ರಾಫಿ ಪರೀಕ್ಶೆಯಿಂದ ರೋಗದ ನಿಖರ ಪತ್ತೆ ಸಾಧ್ಯ.ಪುರಾತನ ದಾಖಲೆಗಳ ಪ್ರಕಾರ ಸ್ಮೃತಿ ವಿಭ್ರಂಶ ಎಂಬ ಹೆಸರಿನಿಂದ ಗುರುತಿಸಲಾದ ಈ ರೋಗ ಅಯುರ್ವೇದಿಯರಿಗೆ 2000೦ ವರ್ಷಗಳ ಹಿಂದೆಯೇ ತಿಳಿದಿತ್ತು.1907ರಲ್ಲಿ ನಿರೂಪಿಸಿದ ಆಲ್ಶೊಸ್ ಆಲ್ಷೆಮಿಯರ್ ಹೆಸರನ್ನು ಈ ರೋಗಕ್ಕೆ ಇಡಲಾಗಿದೆ.ಇದಕ್ಕೆ ಬೇಕಾದ ತಾತ್ಕಾಲಿಕ ಔಷಧಿ ಇದ್ದ್ರೂ ನಿಖರ ಪರಿಣಾಮ ಶೂನ್ಯ.

ಅಯುರ್ವೆದದಲ್ಲಿ ಬುದ್ದಿ ಹೆಚ್ಚಿಸಲು ಅನೇಕ ತರದ ಗಿಡಮೂಲಿಕೆಗಳ ಉಲ್ಲೇಖವಿದೆ.ಮಂಡೂಕಪರ್ಣಿ ಎಂಬ ಪುಟ್ಟ ಗಿಡಕ್ಕೆ ನೆನಪು ಹೆಚ್ಚಿಸುವ ಶಕ್ತಿ ಇದೆ.ತಿನ್ನಲು ಸಕ್ಕರೆಗಿಂತ ರುಚಿಯಾದ ಈ ದ್ರವ್ಯವನ್ನು ಚರಕರು ಹಾಲುಕಷಾಯ ರೂಪದಲ್ಲಿ ಸೇವಿಸಬೇಕೆಂದು ಹೇಳಿರುತ್ತಾರೆ.(ಬೇರು 1 ಭಾಗ,4 ಭಾಗ ಹಾಲು,ನೀರು 16 ಭಾಗ ಕುದಿಸಿ ಇಂಗಿಸಿದ ದ್ರವ)ಇದನ್ನು ಒಂದೆಲಗ ಅಂತಲೂ ಕರೆಯಲಾಗುತ್ತಿದೆ.ಮನೆ ಹಿತ್ತಲಲ್ಲಿ ಹಬ್ಬಿರುವ ಅಮೃತ ಬಳ್ಳಿಯಂತೂ ನೆನಪಿಗೆ ರಾಮಬಾಣ.ಅಷ್ಟೇ ಅಲ್ಲ ನಾವು ನಿತ್ಯ ತಿನ್ನೋ ಹಣ್ಣು,ತರಕಾರಿ ಧವಸ ಧಾನ್ಯಗಳು ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಪುಷ್ಟಿ ನೀಡುತ್ತಿದೆ.ಹೆಸರು,ಕೆಂಪಕ್ಕಿ,ಗೋಧಿ,ಆಗ ತಾನೆ ಕರೆದ ಹಾಲು,ತುಪ್ಪ,ನೆಲ್ಲಿಕಾಯಿ,ಮಾವು,ಬೂದುಕುಂಬಳ,ಪಡುವಲ,ಕೀರೆ,ತೆಂಗು,ದ್ರಾಕ್ಷಿ,ಬೇಲ ಮೊದಲಾದವುಗಳು ಬುದ್ದಿ ಮತ್ತೆಗೆ ಟಾನಿಕ್ ಇದ್ದಂತೆ.ತುಪ್ಪ ತಿಂದಷ್ಟು ಬುದ್ದಿ ಹೆಚ್ಚುತ್ತದೆಂದು ಹೇಳುತ್ತಾರೆ ಆಯುರ್ವೇದ ಪಂಡಿತರು.ಅಯುರ್ವೇದದಲ್ಲಿ ಹಳೆಯ ತುಪ್ಪ ಕುಡಿಸಿ ಹುಚ್ಚು ಕಡಿಮೆಮಾಡುವ ಚಿಕಿತ್ಸೆಇದೆ.ಚಿಂತೆ,ಶೋಕ,ಭಯ,ಅಶುಚಿ,ಮದ್ಯ,ಮೀನು,ಮಾಂಸಾಹಾರ,ಅನಿದ್ರೆ,ಆಯಾಸ ಈ ಕಾರಣಗಳಿಂದ ಮಾನಸಿಕ ಕ್ಷೋಭೆಹೆಚ್ಚಿ ನೆನಪು ಹಾರಿ ಹೋಗುತ್ತದೆ.”ಪರಿಶ್ರಮದ ಕೆಲಸ,ಹೊಟ್ಟೆತುಂಬ ಊಟ,ಕಣ್ಣು ತುಂಬ ನಿದ್ದೆ” ಪ್ರಾತಃ ಕಾಲದಲ್ಲೆದ್ದು(ಬ್ರಾಹ್ಮಿ ಮುಹೂರ್ತ) ಪ್ರಶಾಂತ ವಾತಾವರಣದಲ್ಲಿ ಯೋಗ ಧ್ಯಾನಗಳಿಗೆ ನಿಮ್ಮ ಅಮೂಲ್ಯ ಸಮಯವನ್ನು ನೀಡಿ ಆರೋಗ್ಯವಂತ ಜೀವನ ಶೈಲಿ ನಿಮ್ಮದಾಗಿಸಿದಲ್ಲಿ ಎಲ್ಲಾರೀತಿಯ ದೈಹಿಕ ,ಮಾನಸಿಕ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು.

ಸ್ನೇಹಿತರೇ! “ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್”ಅನ್ನೊ ಆಂಗ್ಲ ನುಡಿಮಾತಿನಂತೆ ರೋಗ ಬಂದ ಮೇಲೆ ಪರಿಹಾರ ಹುಡುಕೊ ಹುಚ್ಚು ಸಾಹಸಕ್ಕಿಂತ ರೋಗ ಬರದಂತೆ ತಡೆಗಟ್ಟೊದೆ ಲೇಸಲ್ಲವೇ?????ಏನಂತೀರಾ?????

  • ಸ್ವರ್ಣಲತ ಭಟ್

POPULAR  STORIES :

ಐದು ಕೋಟಿ ಡೀಲ್ ರಹಸ್ಯ..! ಬೆಕ್ಕು ಕಣ್ಣು ಬಿಟ್ಟು ಹಾಲು ಕುಡಿದಿದೆ..!?

ಚರ್ಚ್ ಮೆಟ್ಟಿಲಿನ ಮೇಲೆ ಸೆಕ್ಸ್ ಮಾಡುವಂತಿಲ್ಲ..! ನಾಯಿಯನ್ನು ತಮಾಷೆ ಮಾಡಿದ್ರೇ ಜೈಲೂಟ ಫ್ರೀ..!!

ಮದ್ವೆಯಾದವ್ರು ಒಂದು ಗ್ಲಾಸ್‍ಗಿಂತ ಹೆಚ್ಚು ವೈನ್ ಸೇವಿಸುವಂತಿಲ್ಲ..! ಬಬಲ್ ಗಮ್ ಅಗಿದರೇ ಶಿಕ್ಷೆ ಗ್ಯಾರಂಟಿ..!

ನಮ್ಮ ಕ್ರಿಕೆಟರ್ಸ್ ಎಷ್ಟು ಸಂಬಳ ಪಡಿತಾರೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ..

ತಮಾಷೆ ಮಾಡಲು ಹೋಗಿ ಗುಂಡಿಟ್ಟು ಕೊಂದೇಬಿಟ್ಟ..! ಸಿಸಿಟಿವಿಯಲ್ಲಿ ಸೆರೆಯಾಯ್ತು ಲೈವ್ ಮರ್ಡರ್..!

ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

 

 

 

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article