ಕಲಬುರಗಿ: ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ (81) ನಿಧನರಾಗಿದ್ದಾರೆ. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಕ್ಬಾಲ್ ಅಹಮ್ಮದ್ ಇಂದು ನಸುಕಿನ ಜಾವ 1 ಗಂಟೆಗೆ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇನ್ನೂ ಅವರ ಅಂತಿಮ ದರ್ಶನಕ್ಕೆ ದರ್ಗಾ ಪ್ರದೇಶದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹಾಗೂ ಇಂದು ಸಂಜೆ 6 ಗಂಟೆಗೆ ನಗರದಲ್ಲಿ ಸರಡಗಿ ಅಂತ್ಯಕ್ರಿಯೆ ಸಮಯವನ್ನ ನಿಗದಿ ಮಾಡಲಾಗಿದೆ. ಸರಡಗಿ ಕಾಂಗ್ರೆಸ್ ನಲ್ಲಿ ತಮ್ಮದೆ ಆದಂತಹ ಛಾಪು ಮೂಡಿಸಿದ್ದ ನಾಯಕರಾಗಿದ್ದು, ಅವರ ನಿಧನಕ್ಕೆ ಕಾಂಗ್ರೆಸ್ ನ ನಾಯಕರು ಸಂತಾಪ ಸೂಚಿಸಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇನ್ನೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ದಿ ಎನ್ ಧರ್ಮಸಿಂಗ್ ಪರಮಾಪ್ತರಾಗಿದ್ದ ಸರಡಗಿಯವರು 1999 ಮತ್ತು 2004 ರಲ್ಲಿ ಎರಡು ಬಾರಿ ಸಂಸದರಾಗಿ, 1 ಬಾರಿ ಎಮ್ಎಲ್ಸಿ ಆಗಿ ಸೇವೆ ಸಲ್ಲಿಸಿದ್ದಾರೆ. 2009 ರಲ್ಲಿ ಕಲಬುರಗಿ ಮೀಸಲು ಕ್ಷೇತ್ರವಾದ ನಂತರ ಮಲ್ಲಿಕಾರ್ಜುನ ಖರ್ಗೆಗೆ ಬಿಟ್ಟುಕೊಟ್ಟಿದ್ದರು.






