ದ್ವೇಷ ಭಾಷಣ ಮಸೂದೆ ಜಾರಿಗೆ ಅಡ್ಡಿಯಾಗಲೆಂದೇ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ: ಸಚಿವ ಪರಮೇಶ್ವರ್ ಆರೋಪ
ಬೆಂಗಳೂರು: ದ್ವೇಷ ಭಾಷಣ ಕುರಿತ ಮಸೂದೆ ಜಾರಿಗೆ ಬರಬಾರದು, ನೆನೆಗುದಿಗೆ ಬೀಳಬೇಕು ಎಂಬ ಉದ್ದೇಶದಿಂದಲೇ ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದ್ವೇಷ ಭಾಷಣ ಮಸೂದೆಯಲ್ಲಿರುವ 28 ಅಂಶಗಳನ್ನು ರಾಜ್ಯಪಾಲರು ಪ್ರಶ್ನಿಸಿದ್ದು, ಅದನ್ನು ರಾಷ್ಟ್ರಪತಿಗಳಿಗೂ ಕಳುಹಿಸಿದ್ದಾರೆ. “ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಮಸೂದೆಯನ್ನು ರಾಷ್ಟ್ರಪತಿಗಳು ಪರಿಶೀಲಿಸಿ ವಾಪಸ್ ಕಳುಹಿಸಿದರೆ ಅಗತ್ಯ ಬದಲಾವಣೆಗಳನ್ನು ಮಾಡಿ ಮತ್ತೆ ಕಳುಹಿಸಲಾಗುವುದು” ಎಂದು ಹೇಳಿದರು.
ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಏನು ಬೇಕಾದರೂ ಮಾತನಾಡುವುದರಿಂದ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದು ಗೃಹ ಸಚಿವರು ಹೇಳಿದರು. “ಸಮುದಾಯಗಳನ್ನು ದೂಷಿಸುವುದು, ವೈಯಕ್ತಿಕವಾಗಿ ನಿಂದಿಸುವ ಭಾಷಣಗಳು ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ದ್ವೇಷ ಭಾಷಣ ಮಸೂದೆ ತರಲಾಗಿದೆ. ಕೆಲವು ಭಾಗಗಳಲ್ಲಿ ನಡೆದ ಭಾಷಣಗಳ ನಂತರ ಉಂಟಾದ ಪರಿಣಾಮಗಳನ್ನು ನಾವು ಗಮನಿಸಿದ್ದೇವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದಲೇ ಈ ಬಿಲ್ ತಂದಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ಬಜೆಟ್ನ್ನು ಗೃಹ ಸಚಿವರು ತೀವ್ರವಾಗಿ ಟೀಕಿಸಿದರು. “ದೇಶದ ಅಭಿವೃದ್ಧಿಗಾಗಿ ಜನ ಸಮುದಾಯಕ್ಕೆ ಬಜೆಟ್ನಿಂದ ಬಹಳ ನಿರೀಕ್ಷೆಗಳಿದ್ದವು. ಆದರೆ ಅವೆಲ್ಲವೂ ಹುಸಿಯಾಗಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಒಂಬತ್ತು ಬಜೆಟ್ಗಳಲ್ಲಿ ಇದು ಅತ್ಯಂತ ದುರ್ಬಲ ಬಜೆಟ್” ಎಂದು ಹೇಳಿದರು.






