ನೀರಾವರಿ ಕ್ಷೇತ್ರದ ಕೊಡುಗೆ ಕುರಿತು ಸಂವಾದಕ್ಕೆ ಬನ್ನಿ: ಬಸವರಾಜ ಬೊಮ್ಮಾಯಿ ಆಗ್ರಹ
ಬಾಗಲಕೋಟೆ: ನೀರಾವರಿ ಕ್ಷೇತ್ರಕ್ಕೆ ಕಾಂಗ್ರೆಸ್ಸಿನ ಸರಕಾರಗಳ ಕೊಡುಗೆ ಮತ್ತು ಬಿಜೆಪಿ, ಕಾಂಗ್ರೆಸ್ಸೇತರ ಸರಕಾರಗಳ ಕೊಡುಗೆ ಕುರಿತು ಸಂವಾದ ಏರ್ಪಡಿಸಲು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಒತ್ತಾಯಿಸಿದ್ದಾರೆ.
ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಮಹಾರಾಷ್ಟ್ರ- ಆಂಧ್ರದಲ್ಲಿ ಇಲ್ಲದ ಎ, ಬಿ ಸ್ಕೀಮನ್ನು ಇಲ್ಯಾಕೆ ತಂದಿದ್ದೀರಿ ಎಂದು ನಾನು ನೀರಾವರಿ ಸಚಿವನಾಗಿ ಹೇಳಿದ್ದೆ. ಎ ನೂ ಇಲ್ಲ. ಬಿ ನೂ ಇಲ್ಲ. ಅದು ಒಂದೇ ಸ್ಕೀಂ. ಅದು ಕೃಷ್ಣಾ ಸ್ಕೀಂ. ಅದನ್ನು ಮಾಡಲು ತೀರ್ಮಾನ ಮಾಡಿ, ನಾವು ಮುಳವಾಡ ಲಿಫ್ಟ್ ಪೂರ್ಣಗೊಳಿಸಿದ್ದೇವೆ. ಚಿಮ್ಮಲಗಿ ಯೋಜನೆ ಮಾಡಿ ನೀರು ಹರಿಸಿದ್ದೇವೆ ಎಂದು ವಿವರಿಸಿದರು.
ಕಾಂಗ್ರೆಸ್ಸೇತರ ಸರಕಾರಗಳ ಮತ್ತು ಬಿಜೆಪಿ ಕೊಡುಗೆ ಅತಿ ಹೆಚ್ಚು. ಸಿದ್ದರಾಮಯ್ಯನವರ ಬಾದಾಮಿ ಕ್ಷೇತ್ರದ ಕೆರೂರು ಏತ ನೀರಾವರಿ ನಾವೇ ಮಾಡಿದ್ದು. ಬಹಳ ವರ್ಷದ ಬೇಡಿಕೆ ಇದ್ದ ಬಿಜಾಪುರದ ರೇವಣಸಿದ್ಧೇಶ್ವರ ನೀರಾವರಿ ಯೋಜನೆಯನ್ನೂ ನಾವೇ ಮಾಡಿದ್ದೇವೆ ಎಂದು ತಿಳಿಸಿದರು.



