ಗೃಹಲಕ್ಷ್ಮೀ ಫಲಾನುಭವಿಗಳಿಗೆ ಶಾಕ್: ಸರ್ವೆ ಅವಧಿಯಲ್ಲಿ ಹಣ ಜಮೆ ಅನುಮಾನ, ಇಂದು ಹೊಸ ಮಾರ್ಗಸೂಚಿ
ಬೆಂಗಳೂರು: ಗೃಹಲಕ್ಷ್ಮೀ ಯೋಜನೆಗೆ ಮೂರು ವರ್ಷ ಪೂರ್ಣಗೊಳ್ಳುತ್ತಿರುವ ಹೊತ್ತಿನಲ್ಲೇ ಫಲಾನುಭವಿಗಳಿಗೆ ಮಹತ್ವದ ಬೆಳವಣಿಗೆಯೊಂದು ಎದುರಾಗಿದೆ. ಗೃಹಲಕ್ಷ್ಮೀ ಮರುಪರಿಶೀಲನೆಗೆ ಸರ್ಕಾರ ನಿರ್ಧರಿಸಿದ್ದು, ಇಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.
ಮರುಪರಿಶೀಲನೆಗಾಗಿ ಸರ್ವೆ ಆರಂಭವಾಗುವ ಅವಧಿಯಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುವುದು ಅನುಮಾನ ಎನ್ನಲಾಗುತ್ತಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಇಂದು ಗೃಹಲಕ್ಷ್ಮೀ ಮರುಪರಿಶೀಲನೆ ಸಂಬಂಧ ಹೊಸ ಮಾರ್ಗಸೂಚಿ ಪ್ರಕಟಿಸಲಿದ್ದು, ಅದಾದ ಮೂರು ದಿನಗಳಲ್ಲಿ ಸರ್ವೆ ಪ್ರಕ್ರಿಯೆ ಆರಂಭವಾಗಲಿದೆ.
ಸರ್ವೆ ಆರಂಭಗೊಂಡು ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿದ ಬಳಿಕವಷ್ಟೇ ಗೃಹಲಕ್ಷ್ಮೀ ಹಣ ಪಾವತಿಯಾಗಲಿದೆ ಎನ್ನಲಾಗಿದೆ. ಒಂದು ತಿಂಗಳ ಒಳಗೆ ಸರ್ವೆ ಪೂರ್ಣಗೊಳಿಸುವಂತೆ ಸರ್ಕಾರ ಸೂಚನೆ ನೀಡಲಿದ್ದರೂ, ಇಷ್ಟು ಕಡಿಮೆ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸುವುದು ಕಷ್ಟಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ.



