ಸೋನಿಯಾ ಗಾಂಧಿಗೆ ಜನ್ಮದಿನದ ಶುಭಾಶಯ ಕೋರಿದ ಮೋದಿ
69ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ. ಸೋನಿಯಾ ಗಾಂಧಿಯವರ ಹುಟ್ಟುಹಬ್ಬಕ್ಕೆ ಟ್ವೀಟರ್ನಲ್ಲಿ ಶುಭಾಶಯ ಕೋರಿರೋ ಮೋದಿ, ಅವರ ಆರೋಗ್ಯ ಚೆನ್ನಾಗಿರಲಿ ಎಂದು ಟ್ವೀಟ್ ಮಾಡಿದ್ದಾರೆ.
ಮುಂದಿನ ವರ್ಷ ಪ್ರಧಾನಿಯಿಂದ ಪಾಕ್ ಪ್ರವಾಸ – ಸುಷ್ಮಾ ಸ್ವರಾಜ್
ಪ್ರಧಾನಿ ನರೇಂದ್ರ ಮೋದಿ 2016ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಾಕಿಸ್ತಾನ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. 2016 ರಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ(ಸಾರ್ಕ್) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಸ್ಲಾಮಾಬಾದ್ ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ, ಪ್ರಧಾನಿ ಕಚೇರಿಯಿಂದಲೇ ಪಿತೂರಿ – ರಾಹುಲ್
ನ್ಯಾಷನಲ್ ಹೆರಾಲ್ಡ್ ಪ್ರಕರಣ ಒಂದು ರಾಜಕೀಯ ಪಿತೂರಿ ಎಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು, ಇದು ಬಿಜೆಪಿ ರಾಜಕೀಯ ಮಾಡುತ್ತಿರುವ ರೀತಿ ಎಂದು ಬುಧವಾರ ಹೇಳಿದ್ದಾರೆ. ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಶೇ.100ರಷ್ಟು ಪ್ರಧಾನಿ ಕಚೇರಿಯಿಂದ ನಡೆಯುತ್ತಿರುವ ರಾಜಕೀಯ ಪಿತೂರಿ ಎಂದು ಆರೋಪಿಸಿದ್ದಾರೆ.
ಚೆನ್ನೈಯಲ್ಲಿ ಮತ್ತೆ ವರುಣನ ಆರ್ಭಟ : ಸಂಕಷ್ಟದಲ್ಲಿ ಜನತೆ
ಕುಂಭದ್ರೋಣ ಮಳೆಯಿಂದಾಗಿ ಈಗಾಗಲೇ ತತ್ತರಿಸಿಹೋಗಿರುವ ತಮಿಳುನಾಡಿನಲ್ಲಿ ಇದೀಗ ಮತ್ತೆ ಮಳೆರಾಯ ತನ್ನ ಆರ್ಭಟವನ್ನು ಮುಂದುವರೆಸಿದ್ದು, ಚೆನ್ನೈನಾದ್ಯಂತ ತುಂತುರು ಮಳೆಯಾಗುತ್ತಿರುವುದಾಗಿ ಬುಧವಾರ ತಿಳಿದುಬಂದಿದೆ. ತಮಿಳುನಾಡಿದ ಕರಾವಳಿ ತೀರ ಪ್ರದೇಶ, ಚೆನ್ನೈ ಕನ್ಯಾಕುಮಾರಿ, ಮಧುರೈ, ತಿರುನಲ್ವೇಲಿ ಜಿಲ್ಲೆ ಸೇರಿದಂತೆ ದಕ್ಷಿಣಭಾಗದ ಜಿಲ್ಲೆಗಳಲ್ಲಿ ಡಿಸೆಂಬರ್ 11 ರವರೆಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬರಿಗಾಲಿನಲ್ಲಿದ್ದ ರಾಹುಲ್ ಗಾಂಧಿಗೆ ಚಪ್ಪಲಿ ನೀಡಿದ ಕೈ ಮುಖಂಡ
ಕುಂಭದ್ರೋಣ ಮಳೆಯ ಪರಿಣಾಮ ಪ್ರವಾಹಕ್ಕೀಡಾಗಿರುವ ತಮಿಳುನಾಡನ್ನು ಪ್ರತ್ಯಕ್ಷವಾಗಿ ನೋಡಲು ಹೋಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಚಪ್ಪಲಿಯನ್ನು ನೀಡಿ ಭಕ್ತಿ ಪ್ರದರ್ಶಿಸಿರುವ ಘಟನೆ ಮಂಗಳವಾರ ನಡೆದಿರುವುದಾಗಿ ತಿಳಿದುಬಂದಿದೆ. ನಿನ್ನೆ ಪುದುಚೇರಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿಯವರು ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ತಾವು ಹಾಕಿಕೊಂಡಿದ್ದ ಶೂವನ್ನು ಬಿಚ್ಚಿಟ್ಟು ಬರಿಗಾಲಿನಲ್ಲಿ ನಡೆಯಲು ಮುಂದಾಗಿದ್ದಾರೆ. ಈ ವೇಳೆ ರಾಹುಲ್ ಬರಿಗಾಲಿನಲ್ಲಿದುದ್ದನ್ನು ಕಂಡ ಮಾಜಿ ಕೇಂದ್ರ ಸಚಿವರ ವಿ. ನಾರಾಯಣಸಾಮಿ ಅವರು ರಾಹುಲ್ ಗೆ ತಾವು ತೊಟ್ಟಿದ್ದ ಚಪ್ಪಲಿಯನ್ನು ಬಿಟ್ಟು ರಾಹುಲ್ ಕಾಲಿಗೆ ತೊಡಿಸಲು ಹೋಗಿದ್ದಾರೆ.
ಐಸಿಸ್ ಉಗ್ರರು ಮುಸ್ಲಿಮರಲ್ಲ, ಫತ್ವಾ ಜಾರಿ: ಅನ್ವರ್ ಷರೀಫ್
ಸಿರಿಯಾ ಮತ್ತು ಇರಾಕ್ ನಲ್ಲಿ ಅಟ್ಟಹಾಸಗೈಯುತ್ತಿರುವ ಐಸಿಸ್ ಉಗ್ರರ ಕೃತ್ಯವನ್ನು ಖಂಡಿಸುತ್ತೇವೆ. ಐಸಿಸ್ ಉಗ್ರರು ನಿಜವಾದ ಮುಸ್ಲಿಮರೇ ಅಲ್ಲ. ಹಾಗಾಗಿ ಐಸಿಸ್ ಉಗ್ರರ ವಿರುದ್ಧ ಫತ್ವಾ ಹೊರಡಿಸಲಾಗುವುದು, ಅಷ್ಟೇ ಅಲ್ಲ ಈ ಬಗ್ಗೆ ರಾಷ್ಟ್ರಪತಿಗಳಿಗೂ ಮನವಿ ಮಾಡುತ್ತೇವೆ ಎಂದು ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಕಾರ್ಯದರ್ಶಿ ಅನ್ವರ್ ಷರೀಫ್ ತಿಳಿಸಿದ್ದಾರೆ.
ಸದಾನಂದ ಗೌಡರ ವಿರುದ್ಧ ಲೋಕಾಯುಕ್ತಕ್ಕೆ ದೂರು
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಸದಾನಂದಗೌಡ ಸಿಎಂ ಆಗಿದ್ದ ವೇಳೆ ಯಲಹಂಕ ಹೋಬಳಿ ಅವಲಹಳ್ಳಿ ಬಳಿ ಮಿಥಿಕ್ ಸೊಸೈಟಿಗೆ ಹತ್ತು ಎಕರೆ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ್ದರು ಎಂದು ಆರೋಪಿಸಿ ದೂರು ಸಲ್ಲಿಸಲಾಗಿದೆ. ಆರ್ಟಿಐ ಕಾರ್ಯಕರ್ತ ಜಯಕುಮಾರ್ ಹಿರೇಮಠ್ ಎನ್ನುವವರಿಂದ ಲೋಕಾಯುಕ್ತ ಎಸ್ಪಿಗೆ ದೂರು ಸಲ್ಲಿಸಲಾಗಿದೆ.
ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಣಿ ಮುಖರ್ಜಿ
ಬಾಲಿವುಡ್ ನಟಿ ರಾಣಿ ಮುಖರ್ಜಿ ಮತ್ತು ಚಿತ್ರ ನಿರ್ಮಾಪಕರಾಗಿರುವ ಆಕೆಯ ಪತಿ ಆದಿತ್ಯ ಚೋಪ್ರಾ ಅವರಿಂದು ತಮ್ಮ ನವಜಾತ ಹೆಣ್ಣು ಮಗುವನ್ನು ಸಂಭ್ರಮದಿಂದ ಸ್ವಾಗತಿಸಿದರು. ರಾಣಿ ಮುಖರ್ಜಿ ಅವರಿಗೆ ಹೆಣ್ಣು ಮಗು ಜನಿಸಿರುವುದನ್ನು ಆಕೆಯ ಸಹೋದರ ಉದಯ ಚೋಪ್ರಾ ಮತ್ತು ಗೆಳೆಯ ಕರಣ್ ಜೋಹರ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಕುಡಿದು ತೂರಾಡಿದ ರಷ್ಯಾ ರಾಯಭಾರಿ ವಿರುದ್ಧ ಎಫ್ ಐಆರ್
ಕುಡಿದ ಮತ್ತಿನಲ್ಲಿ ವೇಗದಿಂದ ಕಾರು ಚಲಾಯಿಸಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಸಿಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರಷ್ಯಾದ ದೂತಾವಾಸದ ರಾಜತಂತ್ರಜ್ಞನ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಲಾಗಿದೆ. ಆದರೆ ರಾಜತಂತ್ರಜ್ಞನಿಗೆ ಕಾನೂನಿನಿಂದ ರಾಜತಾಂತ್ರಿಕ ರಕ್ಷಣೆ ಇರುವುದರಿಂದ ಆತನ ಬಂಧನ ಸಾಧ್ಯತೆ ಇಲ್ಲ. ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು, ಘಟನೆ ಕುರಿತ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಲಿದೆ.
ದಿಲ್ಲಿ ಮುಖ್ಯಕಾರ್ಯದರ್ಶಿಯನ್ನು ಬಂಧಿಸಿದ ಸಿಬಿಐ
ದಿಲ್ಲಿ ಸರಕಾರಕ್ಕೆ ಭದ್ರತಾ ಸಿಬಂದಿಗಳನ್ನು ಹಾಗೂ ಇತರ ಬಗೆಯ ಕೆಲಸಗಾರರನ್ನು ಪೂರೈಸುವ ಸಂಸ್ಥೆಯೊಂದರ ಮಾಲೀಕನಿಂದ 2.20 ಲಕ್ಷ ರೂಪಾಯಿ ಲಂಚ ಕೇಳಿದ ದಿಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಸಿಬಿಐ ಬಂಧಿಸಿದೆ. ದೂರುದಾರ ವ್ಯಕ್ತಿಯು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಸಂಪರ್ಕಿಸಿದ್ದ. ಇದನ್ನು ಅನುಸರಿಸಿ ಸಿಬಿಐ ಅಧಿಕಾರಿಗಳು ಎಸ್ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮುಖ್ಯ ಕಾರ್ಯದರ್ಶಿ ಸಂಜಯ್ ಪ್ರತಾಪ್ ಸಿಂಗ್ ಮತ್ತು ಆತನ ಖಾಸಗಿ ಸಹಾಯಕನನ್ನು ಬಂಧಿಸಿದರು.
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]