ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆಯ ಶಾಲಾ ಮಕ್ಕಳಿಗೆ ರಾಜ್ಯದ ಯಾವುದೇ ಶಾಲೆಯಲ್ಲಾದರೂ ಉಚಿತ ಪ್ರವೇಶ ಪಡೆಯುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ.
ಪ್ರವಾಹ ಪೀಡಿತ ಕೊಡಗಿನ ಶಾಲಾ ಮಕ್ಕಳಿಗೆ ಯಾವ ಶಾಲೆಯಲ್ಲೂ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಸಂಬಂಧಿತ ಕಚೇರಿಗಳು ಹಾಗೂ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸುವ ಮೂಲಕ ಆದೇಶಿಸಿದೆ.
ಪ್ರವಾಹದಿಂದ ಕೊಡಗಿನ ಅನೇಕ ಶಾಲೆಗಳಿಗೆ ಹಾನಿಯಾಗಿದ್ದು, ಅಲ್ಲಿನ ವಿದ್ಯಾರ್ಥಿಗಳು ರಾಜ್ಯದ ಯಾವುದೇ ಶಾಲೆಯಲ್ಲಾದರೂ ಶಿಕ್ಷಣ ಮುಂದುವರೆಸಬಹುದು.
ಪ್ರಸ್ತುತ 9 ,ಸರ್ಕಾರಿ ಪ್ರಾಥಮಿಕ ಶಾಲೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅವುಗಳನ್ನು ಪುನಃ ನಿರ್ಮಿಸ ಬೇಕಿದೆ. 76 ಪ್ರಾಥಮಿಕ ಶಾಲೆಗಳ ಸಣ್ಣಪುಟ್ಟ ದುರಸ್ತಿ ಕಾರ್ಯಗಳು ನಡೆಯಬೇಕಿದೆ.