ಯುವಕನೊಬ್ಬ ಅಪ್ರಾಪ್ತೆಯನ್ನು ಪ್ರೀತಿಸಿ, ಆಕೆಯನ್ನು ಕಿಡ್ನಾಪ್ ಮಾಡಿ , ಒತ್ತಾಯಿಸಿ ಮದ್ವೆ ಮಾಡಿಕೊಂಡು, ಅವಳ ಶವದ ಜೊತೆ ಊರಿಗೆ ಮರಳಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ತಮ್ಮಣ್ಣ ಕಾಲೋನಿ ನಿವಾಸಿ ಆನಂದ್ ( 28) ಅದೇ ಕಾಲೋನಿಯ ಅಪ್ರಾಪ್ತೆಯನ್ನು ಪ್ರೀತಿಸಿ, ಕಿಡ್ನಾಪ್ ಮಾಡಿ , ಒತ್ತಾಯದಿಂದ ಮದ್ವೆಯಾಗಿದ್ದ.
ಈ ಬಗ್ಗೆ ಬಾಲಕಿ ಪೋಷಕರು ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ , ಇಬ್ಬರೂ ಪತ್ತೆಯಾಗಿರಲಿಲ್ಲ.
ಆನಂದ್ 1ವರ್ಷಗಳ ಕಾಲ ಹೊಸ ಪೇಟೆಯಲ್ಲಿ ಆಕೆಯೊಂದಿಗೆ ಸಂಸಾರ ಮಾಡಿದ್ದಾನೆ. ಗುರುವಾರ ರಾತ್ರಿ ಅವಳು ಮೃತಪಟ್ಟಿರುವುದಾಗಿ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾನೆ.
ಪತ್ನಿಯ ಮೃತದೇಹದೊಂದಿಗೆ ಭದ್ರಾವತಿಗೆ ಆಗಮಿಸಿದ ಆನಂದ್ ಗೆ ಸಂಬಂಧಿಕರು, ಸಾರ್ವಜನಿಕರು ಥಳಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾದ ಸ್ಥಿತಿಯೂ ನಿರ್ಮಾಣವಾಗಿತ್ತು. ಆನಂದ್ ತನ್ನ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುತ್ತಿದ್ದಾನೆ. ಬಾಲಕಿಯ ಸಂಬಂಧಿಕರು ಆನಂದೇ ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾನೆ . ಅವನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.