ವಾರಂಟಿ ಮುಗಿದಿದೆ, ಅಸ್ತಿತ್ವ ತೋರಿಸಲು ಹೀರೋ ಆಗಲು ಹೊರಟಿದ್ದಾರೆ: ವಿಜಯೇಂದ್ರ ಪಾದಯಾತ್ರೆ ಬಗ್ಗೆ ಯತ್ನಾಳ್ ಟೀಕೆ
ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ ಬಳಿಕವೇ ಪಾದಯಾತ್ರೆ ಫಿಕ್ಸ್ ಆಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ್, ಸದನದಲ್ಲಿ ನಡೆದ ಹೋರಾಟವನ್ನು ಪ್ರಸ್ತಾಪಿಸಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ಆರ್. ಅಶೋಕ್, ಸುನೀಲ್ ಕುಮಾರ್ ಸೇರಿದಂತೆ ಹಲವರು ಸದನದ ಬಾವಿಗೆ ಇಳಿದು ಹೋರಾಟ ನಡೆಸಿದ್ದರು. ಆದರೆ ವಿಜಯೇಂದ್ರ ಐದು ನಿಮಿಷವೂ ಬಾವಿಯಲ್ಲಿ ನಿಲ್ಲಲಿಲ್ಲ ಎಂದು ಟೀಕಿಸಿದರು.
‘ಪುಕ್ಸಟ್ಟೆ ಒಂದು ಪಾದಯಾತ್ರೆ ಮಾಡಿದರೆ ಕ್ರೆಡಿಟ್ ಬರುತ್ತಾ? ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ ಬಳಿಕ ಪಾದಯಾತ್ರೆ ಕೂಡ ಗ್ಯಾರಂಟಿಯಾಗಿದೆ. ವಾರಂಟಿ ಮುಗಿದಿದೆ. ಹೀಗಾಗಿ ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಹಾಗೂ ಹೀರೋ ಆಗಲು ಹೊರಟಿದ್ದಾರೆ’ ಎಂದು ಯತ್ನಾಳ್ ವ್ಯಂಗ್ಯವಾಡಿದರು.
ಪಾದಯಾತ್ರೆ ಯಾರಿಗೆ ಮೈನಸ್ ಅಥವಾ ಪ್ಲಸ್ ಆಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ರಾಜ್ಯಾಧ್ಯಕ್ಷ ಸ್ಥಾನದಿಂದ ತಮ್ಮನ್ನು ತೆಗೆಯುತ್ತಾರೆ ಎಂಬ ಭಯ ವಿಜಯೇಂದ್ರ ಅವರಿಗೆ ಬಂದಿದೆ. ಹೀಗಾಗಿ ಪಾದಯಾತ್ರೆ ನಡೆಸುವ ಮೂಲಕ ತಾವು ಹೀರೋ ಆಗಬೇಕು ಎಂಬ ಉದ್ದೇಶದಿಂದ ಈ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು.
ಇದೇ ವೇಳೆ ಹೋರಾಟ ಹಾಗೂ ಪಾದಯಾತ್ರೆ ಮಾಡುವುದಾದರೆ ಕೆಪಿಎಸ್ಸಿ ಹಗರಣದ ವಿರುದ್ಧ ಹೋರಾಟ ನಡೆಸಲಿ ಎಂದು ಯತ್ನಾಳ್ ಸವಾಲು ಹಾಕಿದರು. ಕೆಪಿಎಸ್ಸಿ ಹಗರಣದ ವಿಚಾರದಲ್ಲಿ ಹೋರಾಟ ನಡೆಸುವಂತೆ ಅವರು ಆಗ್ರಹಿಸಿದರು.



