ನಮ್ಮ ನಿಮ್ಮೆಲ್ಲರ ನೆಚ್ಚಿನ ಅಪ್ಪು ನಮ್ಮ ಜತೆಯಲ್ಲಿಲ್ಲ ಎಂಬುದು ಸತ್ಯ. ನಮ್ಮನ್ನೆಲ್ಲ ಅಗಲಿರುವುದನ್ನು ಒಪ್ಪಿಕೊಂಡು ಸಾಗಲೇಬೇಕಾಗಿದೆ ಎಂದು ಸಹೋದರ, ನಟ ರಾಘವೇಂದ್ರ ರಾಜ್ಕುಮಾರ್ ಭಾವುಕರಾಗಿ ನುಡಿದರು.
ಅಪ್ಪ-ಅಮ್ಮನನ್ನು ಕಳೆದುಕೊಂಡಾಗಲೂ ಇಷ್ಟೊಂದು ದುಃಖವಾಗಿರಲಿಲ್ಲ. ಅವರಿಗೆ ವಯಸ್ಸಾಗಿತ್ತು, ನಮ್ಮನ್ನು ಅಗಲಿದರು. ಆದರೆ, ಅಪ್ಪು ಅಗಲಿಕೆ ನಮ್ಮನ್ನೆಲ್ಲ ಹೆಚ್ಚಾಗಿ ಕಾಡುತ್ತಿದೆ. ಎಲ್ಲರೂ ದುಃಖವನ್ನು ಸಹಿಸಿಕೊಳ್ಳಬೇಕು ಎಂದರು.
ನಮ್ಮ ಕುಟುಂಬಕ್ಕಷ್ಟೆ ಅಲ್ಲ, ರಾಜ್ಯದ ಜನತೆಯನ್ನು ಕಾಡಿದೆ. ಅಪ್ಪುಗೆ ಏನಾಯಿತು, ಹೇಗಾಯಿತು ಎಂದು ಯೋಚಿಸುತ್ತಾ ಕುಳಿತರೆ ಪ್ರಯೋಜನವಿಲ್ಲ. ಇಂಥ ಕೆಟ್ಟ ಗಳಿಗೆ ಬರಬಾರದಿತ್ತು ಎಂದು ನೊಂದು ನುಡಿದರು.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೃದಯ ಸ್ತಂಭನದಿಂದ ನಿಧನರಾಗಿ ನಾಲ್ಕು ದಿನಗಳಾದರೂ ದೊಡ್ಮನೆ ಕುಟುಂಬ, ಬಂಧುಗಳು, ಅಭಿಮಾನಿಗಳು ಈ ಅಘಾತದಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ.