ಅಪ್ಪ-ಮಕ್ಕಳ ಕುತಂತ್ರದಿಂದ ನನ್ನನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ‌ !

0
30

ಶಿವಮೊಗ್ಗ: ಎಳಸು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅಪ್ಪ ಯಡಿಯೂರಪ್ಪನ ಮಾತು ಕೇಳಿ ಉಚ್ಚಾಟನೆ ಮಾಡಿದ್ದಾರೆ ಎಂದು ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಳಸು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅಪ್ಪ ಯಡಿಯೂರಪ್ಪನ ಮಾತು ಕೇಳಿ ಉಚ್ಚಾಟನೆ ಮಾಡಿದ್ದಾರೆ. ನಮಗೆ ಬಹಳ ನೋವುಂಟು ಮಾಡಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಬಿಜೆಪಿ ಕಟ್ಟಿದ ನಿಮಗೆ ಹೀಗಾಗಬಾರದಿತ್ತು ಎನ್ನುತ್ತಾರೆ. ಬಿಜೆಪಿಗೆ ವಿಜಯೇಂದ್ರನ ಕೊಡುಗೆ ಶೂನ್ಯವೆಂದು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದರು.
ಯಡಿಯೂರಪ್ಪ ಅವರು ಡೂಪ್ಲಿಕೇಟ್ ಬಿಜೆಪಿ ಕಾರ್ಯಕರ್ತ ಆಗಿದ್ದಾರೆ. ಅವರು ಕೆಜೆಪಿಗೆ ಹೋಗಿ ಬಂದಿದ್ದಾರೆ. ರಾಘವೇಂದ್ರ ಸೋತ ಬಳಿಕ ಒಂದು ಸಮಸ್ಯೆ ನಿವಾರಣೆ. ಲೋಕಸಭೆ ಚುನಾವಣೆ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದೊಂದು ಸಮಸ್ಯೆ ನಿವಾರಣೆ ಆದಂತಾಗಲಿದೆ. ಇನ್ನೂ ನಾನು ಗೆದ್ದ ಕೂಡಲೇ ವಿಜಯೇಂದ್ರನ ಅಪ್ಪ ಯಡಿಯೂರಪ್ಪ ಬಂದು ಬಿಜೆಪಿಗೆ ಕರೆದುಕೊಂಡು ಹೋಗಲಿದ್ದಾರೆ ಎಂದು ತಿಳಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್‌ ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿದ್ದರು. ಇದೀಗ ಯಡಿಯೂರಪ್ಪ ಅವರ ಮನೆಗೆ ಹೋಗಿ ಶೆಟ್ಟರ್ ಅವರನ್ನು ಮತ್ತೆ ಕರೆದುಕೊಂಡು ಬಂದು ಅವರಿಗೆ ಬೆಳಗಾವಿಯ ಎಂಪಿ ಟಿಕೆಟ್ ಕೊಟ್ಟಿದ್ದಾರೆ. ಅಪ್ಪ-ಮಕ್ಕಳ ಷಡ್ಯಂತ್ರದಿಂದ ಹೊರಗೆ ಬಂದಿದ್ದೇನೆ. ನನಗೂ ಈಗ ನಿರಾಳವಾಗಿದೆ ಎಂದು ಹೇಳಿದರು.
ಜನರಲ್ಲಿ‌ ಬಹಳ ಅನುಮಾನ ಇತ್ತು. ನಾನು ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಅಂತಾ ಈಗ ಸ್ಪಷ್ಟವಾಗಿ ಸಂದೇಶ ಹೋಗಿದೆ. ಪಕ್ಷದಿಂದ ಉಚ್ಚಾಟನೆ ಮಾಡಿರುವುದಕ್ಕೆ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುವೆ. ನನ್ನ ಸ್ಪರ್ಧೆ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದರು. ಕೆಲವರು ಗೊಂದಲ ಮಾಡುತ್ತಿದ್ದರು. ಎಲ್ಲವೂ ಕ್ಲಿಯರ್ ಆಗಿದೆ. ನನ್ನಿಂದ ಬೆಳೆದ ಶಿಷ್ಯರ ಬಗ್ಗೆ ಮಾತನಾಡಲ್ಲ. ನನ್ನ ಹೆಸರಿನ ಡಿ.ಎಸ್.ಈಶ್ವರಪ್ಪ ಅವರನ್ನು ಇವರೇ ನಿಲ್ಲಿಸಿದ್ದಾರೆ. ಇನ್ನೂ 10 ಜನರನ್ನು ಅಪ್ಪ-ಮಕ್ಕಳು ನಿಲ್ಲಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.