ಕಾಲ ಎಷ್ಟೇ ಬದಲಾದರೂ ಕೂಡ ಇವತ್ತು ನಕ್ಷತ್ರ ಮತ್ತು ನಸೀಬಿನ ಸುತ್ತ ಮುತ್ತ ಚರ್ಚೆ ನಡೆಯುತ್ತಲೇ ಇರುತ್ತೆ. ಮಂಗಳ ಗ್ರಹಕ್ಕೆ ಗಗನ ನೌಕೆಯನ್ನು ಕಳಿಸುವ ನಾವು ಅದೇ ಕೈಯನ್ನು ಜ್ಯೋತಿಷಿಗಳ ಮುಂದೆ ಚಾಚಿ ಗ್ರಹಚಾರ ಹೇಗಿದೆ ಎಂದು ಕೇಳುತ್ತೇವೆ. ನೋಡಲು ಕೇಳಲು ಇದು ವಿಚಿತ್ರವಾದರೂ ಕೂಡ ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯನಾ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇ ನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ ? ವಿಜ್ಞಾನವೇಕೆ ? ಎನ್ನುವ ಪ್ರಶ್ನೆ ಆಗಾಗ ಎದ್ದೇಳುತ್ತಲೇ ಇರುತ್ತೆ.
ಇಂತಹ ಕಾಲದಲ್ಲಿ ತಮ್ಮ ಭವಿಷ್ಯವಾಣಿ ಮೂಲಕವೇ ಸುದ್ದಿ ಮಾಡುವ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಇದೀಗ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ.
ಹೌದು, ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಜಿ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಇಂದು (ಏಪ್ರಿಲ್ 25 ) ನಡೆದ ಶ್ರೀ ಬಂಡೆ ಶನೇಶ್ವರಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಮಹಾ ರಾಜಗೋಪುರ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದರು.
ಇದೇ ಸಮಯದಲ್ಲಿ ಮಾತನಾಡಿರುವ ಕೋಡಿಮಠದ ಸ್ವಾಮಿಜಿ ದೇಶದಲ್ಲಿ ಮುಂದಿನ ದಿನಗಳಲ್ಲಿ ಆಹಾರ ಮತ್ತು ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಷ್ಟೇ ಅಲ್ಲ ಹೆಚ್ಚೆಚ್ಚು ಜನ ಅಕಾಲಿಕ ಮರಣ ಹೊಂದುತ್ತಾರೆ ಎಂದು ಹೇಳಿದ್ದಾರೆ.
ಹವಾಮಾನದ ಏರುಪೇರು ದೇಶದಲ್ಲಿ ತುಂಬಾನೇ ಗಂಭೀರ ಸ್ವರೂಪ ಪಡೆಯುತ್ತೆ, ಅತಿವೃಷ್ಟಿ, ಅನಾವೃಷ್ಟಿಯಾಗುತ್ತೆ ಎಂದು ಕೂಡ ಹೇಳಿರುವ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭೂಮಿ ಮತ್ತು ನೀರಿನ ಸಾಮರ್ಥ್ಯ ಕುಸಿಯುತ್ತದೆ. ಇದರ ಪರಿಣಾಮ ಬೆಳೆ ವಿಫಲವಾಗಿ, ಕೃಷಿಕರು ತೀವ್ರ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತೆ ಎಂದು ಹೇಳಿದ್ದಾರೆ. ಕೃಷಿ ಉತ್ಪನ್ನದ ಕೊರತೆಯಿಂದ ಆಹಾರದ ದರ ಗಗನಕ್ಕೇರಬಹುದು ಎಂದಿದ್ದಾರೆ.
ಬಾವಿ ಮತ್ತು ಕೆರೆ ಬತ್ತಿ ಹೋಗುತ್ತಾವೆ ಎಂದು ಕೂಡ ಹೇಳಿರುವ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾರ್ವಜನಿಕ ಆರೋಗ್ಯದ ಮೇಲೂ ವ್ಯಾಪಕ ಪರಿಣಾಮವಾಗುತ್ತೆ ಎಂದಿದ್ದಾರೆ. ಶುದ್ದ ನೀರಿನ ಕೊರತೆ ಎದುರಾಗುತ್ತೆ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಇಷ್ಟೆಲ್ಲಾ ಆದರೂ ಕೂಡ ಕರುನಾಡಿಗೆ ಯಾವ ದೊಡ್ಡ ಮಟ್ಟದ ಗಂಡಾಂತರ ಇಲ್ಲ ಎಂದು ಹೇಳಿರುವ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನಮ್ಮ ರಾಜ್ಯದಲ್ಲಿ ದೈವಾರಾಧನೆ, ಪ್ರಕೃತಿ ಪೂಜೆ, ಹಾಗೂ ಶನೇಶ್ವರನ ಕೃಪೆಯಿಂದಾಗಿ ಎಲ್ಲವೂ ಒಳ್ಳೆಯದಾಗುತ್ತೆ ಎಂದಿದ್ದಾರೆ.



