No menu items!
17 C
Munich
Saturday, May 2, 2026

ಇವರು ಭಾರತವನ್ನೇ ಹಸಿರಾಗಿಸೋ ಸಂಕಲ್ಪ ತೊಟ್ಟಿದ್ದಾರೆ!

Must read

 

ಇವರು ಭಾರತವನ್ನೇ ಹಸಿರಾಗಿಸೋ ಸಂಕಲ್ಪ ತೊಟ್ಟಿದ್ದಾರೆ!

ಭವ್ಯ ಭಾರತ ಹಸಿರಿನಿಂದ ಕಂಗೊಳಿಸಬೇಕು ಎಂಬುದು ಇವರ ಮಹಾದಾಸೆ. ಹಾಗಂತ ಕನಸು ಕಂಡು ಸುಮ್ಮನಾಗಲಿಲ್ಲ. ನನ್ನ ಜೀವ ಇರೋವರೆಗೂ ಅದಕ್ಕಾಗಿ ದುಡಿಯುತ್ತೇನೆ ಎಂದು ಸಂಕಲ್ಪ ತೊಟ್ಟಿದ್ರು.
ಸುತ್ತಲಿನ ಜನ ಮತ್ತು ಸಮಾಜ ಬಾಯಿಗೆ ಬಂದಂತೆ ಅಣಕಿಸುತ್ತಿತ್ತು. ಪ್ರತಿ ದಿನ ಸಸಿಗಳನ್ನು, ಸಸಿಗಾಗಿ ಬೀಜಗಳನ್ನು ಹಿಡ್ಕೊಂಡು ಹೋಗುತ್ತಿದ್ದಾಗ ಕಂಡಕಂಡವರೆಲ್ಲ ಬಾಯಿಗೆ ಬಂದಂತೆ ಮಾತನಾಡಿಕೊಳ್ತಿದ್ರು. ಆದ್ರೆ,  ಅದ್ಯಾವುದಕ್ಕೂ ಇವರು ತಲೆಕೆಡಿಸಿಕೊಳ್ಳಲಿಲ್ಲ. ತಾವು ಅಂದುಕೊಂಡಿದ್ದನ್ನ ಮಾಡುತ್ತಲೇ ಬಂದ್ರು. ಆದ್ರೀಗ ಇವರ ಸಾಧನೆ ಕಂಡು ಅಣುಕಿಸುತ್ತಿದ್ದವರೇ ಸಲಾಂ ಹೊಡೆಯುತ್ತಿದ್ದಾರೆ. ಅಂತಹ ಸಾಧನೆಗೈದ ಇವರ ಹೆಸರು ದಾರಿಪಲ್ಲಿ ರಾಮಯ್ಯ ಅಂತ.
ಇದು ತೆಲಂಗಾಣ ರಾಜ್ಯದ ಕಮ್ಮಂ ಜಿಲ್ಲೆಯ ರೆಡ್ಡಿಪಲ್ಲೆಯ ರಾಮಯ್ಯ ದಾರಿಪಲ್ಲಿಯವರ ಸ್ಫೂರ್ತಿದಾಯಕ ಕಥೆ. ರಾಮಯ್ಯ ಎಲ್ಲೇ ಹೋದ್ರು ತನ್ನ ಜೊತೆಗೆ ಗಿಡಮರಗಳ ಬೀಜಗಳನ್ನು ಮತ್ತು ಸಸಿಗಳನ್ನು ತೆಗೆದುಕೊಂಡು ಹೋಗುತ್ತಾರೆ! ನೂರಾರು ಕಿಲೋಮೀಟರ್ ಪ್ರಯಾಣ ಮಾಡಿ, ಖಾಲಿ ಜಾಗದಲ್ಲಿ ಗಿಡಗಳನ್ನು ನೆಟ್ಟು ಬರುತ್ತಾರೆ. ಅಷ್ಟೇ ಅಲ್ಲ. ಮುಂದಿನ ಪೀಳಿಗೆ ಸುಖವಾಗಿರಲಿ ಅಂತ ಮರಗಳನ್ನು ಬೆಳೆಸುವ ಕಾರ್ಯಗಳನ್ನು ಕೂಡ ಮಾಡುತ್ತಿದ್ದಾರೆ.

ರಾಮಯ್ಯನವರು ಇಲ್ಲಿಯವರೆಗೂ ಸರಿಸುಮಾರು  ಕೋಟಿಗಿಂತಲೂ ಅಧಿಕ ಮರಗಳನ್ನು ಬೆಳೆಸಿದ್ದಾರೆ. ಸುಮಾರು ಐದು ದಶಕಗಳಿಂದಲೂ ಗಿಡ ನೆಡುವ ಕಾರ್ಯವನ್ನು ಮಾಡಿಕೊಂಡು ಬರ್ತಿದ್ದಾರೆ. 70 ವರ್ಷ ವಯಸ್ಸಿನ ರಾಮಯ್ಯನವರನ್ನು “ಮರಗಳ ರಾಮಯ್ಯ” ಮತ್ತು “ವನಜೀವಿ ರಾಮಯ್ಯ” ಅಂತ ಇಡೀ ರಾಜ್ಯ ಕರೆಯುವ ಮಟ್ಟಿಗೆ ತಮ್ಮ ಕೆಲಸದಿಂದ ಫೇಮಸ್​ ಆಗಿದ್ದಾರೆ.
ಊರಿನ ಸುತ್ತಮುತ್ತ ಸ್ವಲ್ಪ ಖಾಲಿ ಜಾಗ ಸಿಕ್ಕಿದ್ರೂ ಸಾಕು ಅಲ್ಲಿ ರಾಮಯ್ಯನವರು ಸಸಿ ನೆಡಲು ಮನಸ್ಸು ಮಾಡ್ತಾರೆ. ಅಷ್ಟೇ ಅಲ್ಲ ಅವ್ರು ನೆಟ್ಟ ಸಸಿ ಬೆಳೆದು ದೊಡ್ಡದಾಗುವರೆಗೂ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವರಿಗೆ ನೆಟ್ಟ ಗಿಡಗಳ ಪೈಕಿ ಒಂದು ಸಸಿ ಸತ್ರೂ ಕೂಡ ಅವರು ತನಗಾದ ನೋವಿನಂತೆ ದುಖಿಃಸುತ್ತಾರೆ.
ರಾಮಯ್ಯನವರ ಮನೆಯ ಸುತ್ತಲೂ ಪರಿಸರಕ್ಕೆ ಸಂಬಂಧ ಪಟ್ಟ ಸ್ಲೋಗನ್​​ಗಳು ಮತ್ತು ಬ್ಯಾನರ್​​ಗಳು ಇವೆ. ಈ ಮೂಲಕ ಜನರಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುತ್ತಿದ್ದಾರೆ. ರಾಮಯ್ಯನವರ ಈ ಕೆಲಸದ ಬಗ್ಗೆ ಹಲವರು ಮನಸ್ಸಿಗೆ ನೋವಾಗುವಂತಹ ಮಾತುಗಳನ್ನು ಆಡಿದ್ದಾರೆ. ಆದ್ರೆ ರಾಮಯ್ಯನವರು ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲಿಲ್ಲ. ಖಾಲಿ ಜಾಗಕ್ಕೆ ಸೈಕಲ್ ಮೂಲಕ ತೆರಳಿ ಅಲ್ಲಿ ಸಸಿ ನೆಟ್ಟು ಬರುತ್ತಾರೆ. ಮರಗಳನ್ನು ಉಳಿಸಿ, ಅವುಗಳು ಜೀವ ಉಳಿಸುತ್ತವೆ ಅನ್ನೋದನ್ನ ರಾಮಯ್ಯ ಪ್ರತಿಯೊಬ್ಬರಿಗೂ ಹೇಳುತ್ತಾರೆ. ಅಷ್ಟೆ ಅಲ್ಲದೇ ತಲೆಯ ಮೇಲೆ ವನ ಸಂಪತ್ತು ರಕ್ಷಿಸಿ ಎಂಬ ಸಂದೇಶವನ್ನು ಇಟ್ಟುಕೊಂಡು ತಿರುಗುತ್ತಾರೆ.

ರಾಮಯ್ಯವರು ತಮ್ಮ ಮೂರು ಎಕರೆ ಆಸ್ತಿಯನ್ನು ಮಾರಿ ಪರಿಸರಕ್ಕೆ ಉಪಯೋಗವಾಗುವ ಮರಗಳನ್ನ ನೆಡುತ್ತಿದ್ದಾರೆ. ಸದಾ ಇವರ ಜೇಬಿನಲ್ಲಿ ಮತ್ತು ಸೈಕಲ್​​ನಲ್ಲಿ ಗಿಡಗಳ ಬೀಜ ಇಟ್ಟು ಕೊಂಡಿರುತ್ತಾರೆ! ಇವರಿಗೆ ಪತ್ನಿ ಜಾನಕಮ್ಮನವರು ಕೂಡ ರಾಮಯ್ಯನವರ ಈ ಸಾರ್ಥಕ ಜೀವನಕ್ಕೆ ಕೈ ಜೋಡಿಸಿದ್ದಾರೆ. ಇನ್ನು ಬರ್ತ್ ಡೇ ಮತ್ತು ಮದುವೆ ವಾರ್ಷಿಕೋತ್ಸವಗಳಿಗೆ ಅಥವಾ ಇನ್ಯಾವುದೇ ಸಮಾರಂಭಗಳಿಗೆ ಹೋದ್ರೂ ಸಸಿಗಳನ್ನೇ ಇವರು ಉಡುಗೊರೆಯಾಗಿ ಕೊಡೋದು.
ಸರಳವಾಗಿ, ವಿನಮ್ರವಾಗಿ ಯಾರು ಏನೇ ಹೇಳಿದ್ರೂ ಮರು ಮಾತನಾಡದೆ ಬಯಲು ಪ್ರದೇಶವನ್ನು ಹಸಿರುಮಯವನ್ನಾಗಿ ಮಾಡೋಕೆ ಶ್ರಮ ಪಡ್ತಿದ್ದಾರೆ. ರಾಮಯ್ಯನವರ ನಿಸ್ವಾರ್ಥ ಸೇವೆ ಗುರುತಿಸಿ ಭಾರತದ ನಾಲ್ಕನೇ ಶ್ರೇಷ್ಠ ನಾಗರಿಕ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಇದರ ಜೊತೆಗೆ ರಾಮಯ್ಯನವರು ಪದ್ಮ ವಿಭೂಷಣ, ಪದ್ಮಭೂಷಣ ಗೌರವಗಳನ್ನೂ ಪಡೆದಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article