No menu items!
11.1 C
Munich
Wednesday, April 29, 2026

ಈತನಿಗೆ ಮ್ಯಾನ್ ಆಫ್ ದಿ‌ ಮ್ಯಾಚ್ ನೀಡಬೇಕಿತ್ತು ಎಂದ ಕೊಹ್ಲಿ!

Must read

ಸಾಮಾನ್ಯವಾಗಿ ಗೆದ್ದ ತಂಡದ ಪರ ಪಂದ್ಯದ ಶ್ರೇಷ್ಠ ಪ್ರಶಸ್ತಿ ನೀಡುವುದು ವಾಡಿಕೆ. ಆದರೆ, ಇಂಗ್ಲೆಂಡ್‌ ಗೆಲುವಿಗೆ ಕಠಿಣ ಹೋರಾಟ ನಡೆಸಿ ಅಜೇಯ 95 ರನ್‌ ಗಳಿಸಿದ್ದ ಸ್ಯಾಮ್‌ ಕರ್ರನ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಶಾರ್ದುಲ್‌ ಠಾಕೂರ್‌ಗೆ‌ ನೀಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

329 ರನ್‌ ಗುರಿ ಹಿಂಬಾಲಿಸಿದ ಇಂಗ್ಲೆಂಡ್‌ ತಂಡ ಒಂದು ಹಂತದಲ್ಲಿ 168 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಭಾರತ ಸುಲಭವಾಗಿ ಗೆಲುವು ಪಡೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ, ಇಂಗ್ಲೆಂಡ್‌ ಯುವ ಆಲ್‌ರೌಂಡರ್‌ ಸ್ಯಾಮ್‌ ಕರ್ರನ್‌ ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದರು. ಅದ್ಭುತವಾಗಿ ಬ್ಯಾಟ್‌ ಮಾಡಿದ ಕರ್ರನ್‌ 83 ಎಸೆತಗಳಲ್ಲಿ ಅಜೇಯ 95 ರನ್‌ ಗಳಿಸಿದರು.

ಅಲ್ಲದೆ, 9ನೇ ಕ್ರಮಾಂಕದ ಆದಿಲ್‌ ರಶೀದ್‌ ಹಾಗೂ 10ನೇ ಕ್ರಮಾಂಕದ ಮಾರ್ಕ್‌ವುಡ್‌ ಅವರೊಂದಿಗೆ ಎರಡು ಅರ್ಧಶತಕಗಳ ಜತೆಯಾಟವನ್ನೂ ಅವರು ಆಡಿದ್ದರು. ಆ ಮೂಲಕ ಇಂಗ್ಲೆಂಡ್‌ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೂ, ಅಂತಿಮವಾಗಿ 7 ರನ್‌ಗಳಿಂದ ಇಂಗ್ಲೆಂಡ್‌ ಸೋಲು ಅನುಭವಿಸಬೇಕಾಯಿತು.

ಶಾರ್ದುಲ್‌ ಠಾಕೂರ್‌ ಆಲ್‌ರೌಂಡ್‌ ಪ್ರದರ್ಶನದ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧ‌ ಹ್ಯಾಟ್ರಿಕ್‌ ಸರಣಿ ಗೆಲುವು ಪಡೆಯಿತು. ಬ್ಯಾಟಿಂಗ್‌ನಲ್ಲಿ 21 ಎಸೆತಗಳಿಗೆ 30 ರನ್‌ ಗಳಿಸಿದ್ದ ಠಾಕೂರ್‌, ಬೌಲಿಂಗ್‌ನಲ್ಲಿ ಜೋಸ್‌ ಬಟ್ಲರ್, ಡಾವಿಡ್‌ ಮಲಾನ್‌, ಲಿಯಾಮ್ ಲಿವಿಂಗ್‌ಸ್ಟೋನ್‌ ಹಾಗೂ ಆದಿಲ್‌ ರಶೀದ್‌ ಅವರ ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದ್ದರು.

ಇನ್ನು ಭುವನೇಶ್ವರ್ ಕುಮಾರ್‌ ಅತಿ ಹೆಚ್ಚು ರನ್‌ ಗಳಿಸಿದ ಸರಣಿಯಲ್ಲಿ 5ಕ್ಕಿಂತ ಕಡಿಮೆ ಎಕಾನಮಿ ರೇಟ್‌ನಲ್ಲಿ ಎದುರಾಳಿಗೆ ರನ್‌ ನೀಡಿದ್ದರು ಹಾಗೂ ಆರು ವಿಕೆಟ್‌ ಕಬಳಿಸಿದ್ದರು. ಈ ಹಿನ್ನೆಲೆಯಲ್ಲಿ ಭುವಿಗೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ಅರ್ಹರು ಎಂದು ಕೊಹ್ಲಿ ಇದೇ ವೇಳೆ ಅಭಿಪ್ರಾಯ ಪಟ್ಟರು. ಆದರೆ, ಒಂದು ಶತಕ ಹಾಗೂ ಎರಡು ಅರ್ಧಶತಕ ಸಿಡಿಸಿದ್ದ ಜಾನಿ ಬೈರ್‌ಸ್ಟೋವ್‌ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಪಂದ್ಯದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ “4 ವಿಕೆಟ್‌ ಕಿತ್ತು 30 ರನ್‌ ಗಳಿಸಿದ್ದ ಶಾರ್ದುಲ್‌ ಠಾಕೂರ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡದೇ ಇರುವುದು ಅಚ್ಚರಿ ಉಂಟು ಮಾಡಿತು. ಸರಣಿ ಶ್ರೇಷ್ಠ ಪ್ರಶಸ್ತಿ ರೇಸ್‌ನಲ್ಲಿ ಭುವನೇಶ್ವರ್ ಕುಮಾರ್ ಕೂಡ‌ ಇದ್ದರು. ಈ ಇಬ್ಬರೂ ಪವರ್‌ಪ್ಲೇ ಹಾಗೂ ಮಧ್ಯಮ ಓವರ್‌ಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು,” ಎಂದು ಹೇಳಿದರು.

ನಿರ್ಣಾಯಕ ಕ್ಯಾಚ್‌ಗಳನ್ನು ಕೈ ಚೆಲ್ಲಿದ ಹೊರತಾಗಿಯೂ ಹಾರ್ದಿಕ್‌ ಪಾಂಡ್ಯ ಹಾಗೂ ಟಿ ನಟರಾಜನ್‌ ಅವರ ಬೌಲಿಂಗ್‌ ಅನ್ನು ನಾಯಕ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. 22 ರನ್‌ ಗಳಿಸಿದ್ದಾಗ ಸ್ಯಾಮ್‌ ಕರ್ರನ್‌ ಅವರ ಕ್ಯಾಚ್ ಅನ್ನು ಹಾರ್ದಿಕ್‌ ಕೈಚೆಲ್ಲಿದ್ದರು. ಆದರೆ, ಆಲ್ರೌಂಡರ್‌ 49ನೇ ಓವರ್‌ನಲ್ಲಿ ಕೇವಲ 5 ರನ್‌ ನೀಡಿದ್ದರು. ನಂತರ ನಟರಾಜನ್‌ ಕೊನೆಯ ಓವರ್‌ನಲ್ಲಿ ಕೇವಲ 7 ರನ್‌ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟರು.

“ಎರಡು ಅಗ್ರ ತಂಡಗಳು ಮುಖಾಮುಖಿಯಾದರೆ ಕದನ ಕುತೂಹಲದಿಂದ ಕೂಡಿರುತ್ತದೆ. ಒಂದು ಹಂತದಲ್ಲಿ ಇಂಗ್ಲೆಂಡ್‌ ತಂಡ ಪ್ರಮುಖ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಸ್ಯಾಮ್‌ ಕರ್ರನ್‌ ಅತ್ಯುತ್ತಮ ಪ್ರದರ್ಶನ ತೋರಿದರು. ಆದರೂ ನಾವು ನಿಯಮಿತವಾಗಿ ವಿಕೆಟ್‌ಗಳನ್ನು ಪಡೆಯುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹಾಕಿದ್ದೆವು. ಹಾರ್ದಿಕ್‌ ಹಾಗೂ ನಟ್ಟು ಕೊನೆಯ ಎರಡು ಓವರ್‌ಗಳನ್ನು ಅದ್ಭತವಾಗಿ ಮುಗಿಸಿದ ಬಳಿಕ ನಮ್ಮ ಮನಸ್ಥಿತಿ ಬದಲಾಯಿತು,” ಎಂದು ವಿರಾಟ್‌ ಸಹ ಆಟಗಾರರನ್ನು ಗುಣಗಾನ ಮಾಡಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article