ಸಾಮಾಜಿಕ ಜಾಲತಾಣ ಈಗ ಕೇವಲ ಲೈಕ್, ಕಾಮೆಂಟ್, ಶೇರ್ ಗೆ ಮಾತ್ರ ಸೀಮಿತವಾಗಿಲ್ಲ.ಬದಲಿಗೆ ವ್ಯಕ್ತಿಯ ಅಸ್ವಿತ್ವ ಅಳೆಯುವ ಮಾಪನವೂ ಹೌದು.
ಸೆಲೆಬ್ರೇಟಿಗಳ ಪಾಲಿಗೆ ಇದು ಚಿನ್ನದ ಮೊಟ್ಟೆ ಇಡುವ ಕೋಳಿಯಾದರೆ ರಾಜಕೀಯದವರಿಗೆ ಇದು ಜನರನ್ನು ತಲುಪಲಿರುವ ವೇದಿಕೆ. ಹಿಂದೆ ಎಲ್ಲ ಪ್ರಜಾಪ್ರಭುತ್ವದ ನಾಡಿಮಿಡಿತ ತಿಳಿಯಲು ರಾಜಕಾರಣಿಗಳು ರಸ್ತೆಗೆ ಇಳಿಯಬೇಕಿತ್ತು.
ಆದರೆ ಈಗ ರಾಜಕಾರಣಿಗಳಿಗೆ ಜನಾಭಿಪ್ರಾಯ ಕೇವಲ ತಮ್ಮ ಹಿಂಬಾಲಕರ ಸಂಖ್ಯೆಯಿಂದಲೇ ಗೊತ್ತಾಗುತ್ತೆ. ಡಿಜಿಟಲ್ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚಾದಷ್ಟೂ ಅಧಿಕಾರಕ್ಕೆ ಹತ್ತಿರ ಎನ್ನುವ ನಂಬಿಕೆಯಿರುವ ಈ ಕಾಲದಲ್ಲಿ ರಾಜಕಾರಣಿಗಳಿಗೆ ಅಸಮಾಧಾನದ ಅಲೆ ಮೊದಲು ಕಂಡು ಬರುವುದೇ ಇದೇ ಸೋಶಿಯಲ್ ಮೀಡಿಯಾದಲ್ಲಿ. ಉದಾಹರಣೆಗೆ ರಾಘವ್ ಚಡ್ಡಾ ಅವರನ್ನೇ ತೆಗೆದುಕೊಳ್ಳಿ.
ಹೌದು, ಮೊನ್ನೆಯವರೆಗೆ ಆಮ್ ಆದ್ಮಿಯಾಗಿದ್ದ ರಾಘವ್ ಛಡ್ಡಾ ಈಗ ಬಿಜೆಪಿ ಸದಸ್ಯ. ತಾವು ಹೋಗುವುದಲ್ಲದೇ ಇನ್ನೂ ಆರು ಜನರನ್ನು ಕರೆದುಕೊಂಡು ಹೋಗಿರುವ ವಲಸೆ ಹಕ್ಕಿ.
ಇವರ ಈ ನಿರ್ಧಾರದ ಹಿಂದಿನ ನಿಖರ ಲೆಕ್ಕಾಚಾರವೇನು ಎನ್ನುವುದು ಅವರಿಗೆ ಗೊತ್ತಾದರೂ ಹಲವರಿಗೆ ಇವರ ಈ ನಡೆ ಇಷ್ಟವಾಗಿಲ್ಲ. ಇಷ್ಟ ಆಗಿಲ್ಲ ಅನ್ನುವುದಕ್ಕಿಂತ ರಾಘವ್ ಛಡ್ಡಾ ಅವರಿಂದ ಇದನ್ಯಾರು ನಿರೀಕ್ಷೆ ಮಾಡಿರಲಿಲ್ಲ.
ಇದಕ್ಕೆ ಕೈಗನ್ನಡಿ ಎಂಬಂತೆ ಕೈಯಲ್ಲಿ ಕಮಲ ಹಿಡಿದ ತಪ್ಪಿಗೆ ರಾಘವ್ ಛಡ್ಡಾ ಅವರಿಗೆ ಸೋಶಿಯಲ್ ಆಘಾತವಾಗಿದೆ.
ಹೌದು. ”ನಾಟ್ ಜಸ್ಟ್ ಅನಾಲಿಟಿಕ್ಸ್” ಎಂಬ ಆನ್ಲೈನ್ ಸೈಟ್ ವರದಿ ಮಾಡಿರುವಂತೆ ಬಿಜೆಪಿ ಸೇರಿದ ಬೆನ್ನಲ್ಲೇ ರಾಘವ್ ಛಡ್ಡಾ ಕೇವಲ 24 ಗಂಟೆಗಳಲ್ಲಿ ಸುಮಾರು 10 ಲಕ್ಷ ಫಾಲೋವರ್ಗಳನ್ನು ಕಳೆದುಕೊಂಡಿದ್ದಾರೆ. ಮೊದಲು 14.6 ಮಿಲಿಯನ್ ಇದ್ದ ಫಾಲೋವರ್ಗಳ ಸಂಖ್ಯೆ, ಈಗ 13.6 ಮಿಲಿಯನ್ಗೆ ಇಳಿದಿದೆ.
ಇನ್ನೂ ರಾಘವ್ ಛಡ್ಡಾ ಅವರ ಖಾತೆಯಿಂದ ಕಾಲ್ಕಿತ್ತ 10 ಲಕ್ಷ ಜನ ಜೆನ್ ಝೀ ತಲೆಮಾರಿನವರು ಎನ್ನುವ ಅಭಿಪ್ರಾಯವನ್ನು ರಾಜಕೀಯ ತಜ್ಞರು ವ್ಯಕ್ತಪಡಿಸಿದ್ದಾರೆ. ಮೊದಲೆಲ್ಲಾ ಜನ ಸಾಮಾನ್ಯರ ಕಷ್ಟಕ್ಕೆ ಮಿಡಿಯುತ್ತಿದ್ದ ರಾಘವ್ ಛಡ್ಡಾ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.



