No menu items!
9.3 C
Munich
Wednesday, April 29, 2026

ಕೊಹ್ಲಿಯನ್ನು ಬ್ಯಾನ್ ಮಾಡಿ ಎಂದಿದ್ದೇಕೆ ಲಾಯ್ಡ್?

Must read

ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರನ್ನು ಅನಗತ್ಯವಾಗಿ ಗುರಿಯಾಗಿಸುವ ಕಾರ್ಯ ಮುಂದುವರಿಸಿರುವ ಇಂಗ್ಲೆಂಡ್‌ ತಂಡದ ಮಾಜಿ ಆಟಗಾರ ಡೇವಿಡ್‌ ಲಾಯ್ಡ್‌, ಡಿಆರ್‌ಎಸ್‌ ವಿಚಾರವಾಗಿ ಆನ್‌ಫೀಲ್ಡ್‌ ಅಂಪೈರ್‌ ನಿತಿನ್‌ ಮೆನನ್ ಜೊತೆಗೆ ವಾದ ಮಾಡಿದ ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮೇಲೆ ಕನಿಷ್ಠ 3 ಪಂದ್ಯ ನಿಷೇಧ ಹೇರಿ ಎಂದು ಆಗ್ರಹಿಸಿದ್ದಾರೆ.

ಟೀಮ್‌ ಇಂಡಿಯಾ ಆಟಗಾರರು ಎಲ್‌ಬಿಡಬ್ಲ್ಯು ಸಲುವಾಗಿ ಸ್ಟ್ರೈಕ್‌ ಅಂಪೈರ್‌ ನಿತಿನ್ ಮೆನನ್ ಅವರನ್ನು ಮನವಿ ಮಾಡಿದ ಸಂದರ್ಭದಲ್ಲಿ ಚೆಂಡು ಪ್ಯಾಡ್‌ಗೆ ಬಡಿಯುವ ಮುನ್ನ ಬ್ಯಾಟ್‌ಗೆ ತಾಗಿದೆ ಎಂದು ನಾಟ್‌ ಔಟ್‌ ಎಂದು ತೀರ್ಪು ನೀಡಿದ್ದರು. ಬಳಿಕ ಭಾರತ ತಂಡ ಬ್ಯಾಟ್‌ ಅಂಡ್‌ ಪ್ಯಾಡ್‌ ಕ್ಯಾಚ್‌ ಸಲುವಾಗಿ ಡಿಆರ್‌ಎಸ್‌ ಮೊರೆ ಹೋಗಿತ್ತು.

ಬಳಿಕ ಡಿಆರ್‌ಎಸ್‌ ಪರಿಶೀಲನೆಯಲ್ಲಿ ಚೆಂಡು ಬ್ಯಾಟ್‌ಗೆ ತಾಗಿರಲಿಲ್ಲ ಇನ್ನು ಎಲ್‌ಬಿಡಬ್ಲ್ಯು ವಿಚಾರದಲ್ಲಿ ಚೆಂಡು ಅರ್ಧದಷ್ಟು ಮಾತ್ರವೇ ಲೈನ್‌ನಲ್ಲಿ ಇರುವುದು ಕಂಡುಬಂದಿತು. ಹೀಗಾಗಿ ಆನ್‌ಫೀಲ್ಡ್‌ ಅಂಪೈರ್‌ ನೀಡಿದ್ದ ತೀರ್ಪನ್ನೇ ನಿಯಮಾನುಸರಾ 3ನೇ ಅಂಪೈರ್‌ ಎತ್ತಿ ಹಿಡಿದರು. ಇದರಿಂದ ಜೋ ರೂಟ್‌ ಜೀವದಾನ ಪಡೆದದ್ದು, ಆನ್‌ ಪೀಲ್ಡ್‌ ಅಂಪೈರ್‌ ಎಲ್‌ಬಿಡಬ್ಲ್ಯು ಸರಿಯಾಗಿ ನಿರ್ಧರಿಸದೇ ಹೋದದ್ದು ಕ್ಯಾಪ್ಟನ್ ಕೊಹ್ಲಿಯ ಅಸಮಾಧಾನಕ್ಕೇ ಕಾರಣವಾಗಿತ್ತು.

ಬಳಿಕ ಆನ್‌ ಫೀಲ್ಡ್‌ ಅಂಪೈರ್‌ ಬಳಿ ಕೊಹ್ಲಿ ಕೆಲ ಕಾಲ ವಾದವನ್ನೂ ಮಾಡಿದರು. ಇದನ್ನು ಸಹಿಸದ ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್‌ ಲಾಯ್ಡ್‌, ವಿರಾಟ್‌ ಕೊಹ್ಲಿ ಅವರ ಈ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಕನಿಷ್ಠ 3 ಪಂದ್ಯಗಳ ನಿಷೇಧ ಹೇರಬೇಕಿದೆ ಎಂದಿದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್‌ ವಾನ್‌ ಕೂಡ ಕೊಹ್ಲಿ ವರ್ತನೆಯನ್ನು ಖಂಡಿಸಿದ್ದಾರೆ.

ಚೆಪಾಕ್‌ನ ಸ್ಪಿನ್ನಿಂಗ್‌ ಪಿಚ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 134 ರನ್‌ಗಳಿಗೆ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 164 ರನ್‌ಗಳಿಗೆ ಆಲ್‌ಔಟ್‌ ಮಾಡಿದ ಭಾರತ ತಂಡ 317 ರನ್‌ಗಳ ದಾಖಲೆಯ ಬೃಹತ್‌ ಮೊತ್ತದ ಗೆಲುವು ದಾಖಲಿಸಿತು. ಈ ಮೂಲಕ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ 1-1 ಅಂತರದ ಸಮಬಲ ತಂದುಕೊಂಡಿತು.

ಈ ಬಗ್ಗೆ ಮಾತನಾಡಿರುವ ಡೇವಿಡ್‌ ಲಾಯ್ಡ್‌, ಬೇರೆ ಯಾವುದೇ ಕ್ರೀಡೆ ಆಗಿದ್ದರೆ ಕೊಹ್ಲಿಗೆ ಕನಿಷ್ಠ ಮೂರು ಪಂದ್ಯ ನಿಷೇಧದ ಶಿಕ್ಷೆ ಎದುರಾಗುತ್ತಿತ್ತು. ಫುಟ್‌ಬಾಲ್‌ ರೀತಿಯಾಗಿದ್ದರೆ ಅವರಿಗೆ ರೆಫ್ರಿಯಿಂದ ನೇರವಾಗಿ ರೆಡ್‌ ಕಾರ್ಡ್‌ ಸಿಗುತ್ತಿತ್ತು ಎಂದಿದ್ದಾರೆ.

“ವಿರಾಟ್‌ ಕೊಹ್ಲಿ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಳ್ಳಲಾಗಿಲ್ಲ? ರಾಷ್ಟ್ರೀಯ ತಂಡದ ನಾಯಕನೊಬ್ಬನಿಗೆ ಆನ್‌ಫೀಲ್ಡ್‌ ಅಂಪೈರ್‌ ಜೊತೆ ವಾದ ಮಾಡಿ ಅಗೌರವ ಸೂಚಿಸಲು ಬಿಡಲಾಗಿದೆ. ಅಷ್ಟು ಜಗಳವಾಡಿದರೂ ಕೂಡ ದ್ವಿತೀಯ ಟೆಸ್ಟ್‌ನಲ್ಲಿ ಅವರನ್ನು ಆಡಲು ಬಿಡಲಾಯಿತು. ಅವರನ್ನೂ ಕೂಡಲೇ ಅಂಗಣದಿಂದ ಹೊರನಡೆಯುವಂತೆ ಮಾಡಬೇಕಿತ್ತು. ಜೊತೆಗೆ ಅಹ್ಮದಾಬಾದ್‌ನಲ್ಲಿ ನಡೆಯಲಿರುವ 3ನೇ ಟೆಸ್ಟ್‌ನಿಂದಲೂ ಬ್ಯಾನ್‌ ಮಾಡಬೇಕಿತ್ತು,” ಎಂದು ಲಾಯ್ಡ್‌ ಡೇಲಿ ಮೇಲ್‌ ಪತ್ರಿಕೆಗೆ ಬರೆದಿರುವ ತಮ್ಮ ಲೇಖನದಲ್ಲಿ ಹೇಳಿದ್ದಾರೆ.

ಇದೇ ವೇಳೆ ಪಂದ್ಯಕ್ಕೆ ಮ್ಯಾಚ್‌ ರೆಫ್ರಿಯಾಗಿ ನೇಮಕಕೊಂಡಿದ್ದ ಭಾರತ ತಂಡದ ಮಾಜಿ ವೇಗದ ಬೌಲರ್‌ ಜಾವಗಲ್‌ ಶ್ರೀನಾಥ್‌ ಅವರ ಕಾರ್ಯಕ್ಷಮತೆಯನ್ನೂ ಲಾಯ್ಡ್‌ ಪ್ರಶ್ನೆ ಮಾಡಿದ್ದು, ಕೊಹ್ಲಿ ನಡವಳಿಕೆಯಲ್ಲಿ ತಪ್ಪು ಕಾಣಿಸಲಿಲ್ಲವೇ? ಎಂದು ಕೇಳಿದ್ದಾರೆ.

“ಇಂತಹ ನಡವಳಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಯೆಲ್ಲೋ ಕಾರ್ಡ್‌ ಮತ್ತು ರೆಡ್‌ ಕಾರ್ಡ್‌ನಂತಹ ನಿಯಮಗಳನ್ನು ತರಬೇಕು. ಇದು ನೇರವಾಗಿ ರೆಡ್‌ ಕಾರ್ಡ್‌ ನೀಡುವಂತಹ ತಪ್ಪು. ಇದರರ್ಥ ಈ ಆಟಗಾರನಿಗೆ ಕನಿಷ್ಠ ಮೂರು ಪಂದ್ಯಗಳ ಬ್ಯಾನ್‌ ಶಿಕ್ಷೆ ಎದುರಾಗಬೇಕು. ಮ್ಯಾಚ್‌ ರೆಫ್ರಿ ತಮ್ಮ ಎಸಿ ರೂಮ್‌ನಲ್ಲಿ ಕುಳಿತು ಮಜಾ ಮಾಡುತ್ತಿದ್ದಾರೆ. ಇದರ ವಿರುದ್ಧ ಕ್ರಮಕ್ಕೆ ಅವರು ಮುಂದಾಗಿಲ್ಲ. ಮೂರೂವರೆ ದಿನ ಅವರು ಏನನ್ನೂ ಮಾತನಾಡಿಲ್ಲ,” ಎಂದು ಲಾಯ್ಡ್‌ ಕಿಡಿ ಕಾರಿದ್ದಾರೆ.

ಅಂದಹಾಗೆ ಅಂಪೈರ್‌ ಎದುರು ವಾದಮಾಡಿದ ಕಾರಣಕ್ಕೆ ವಿರಾಟ್‌ ಕೊಹ್ಲಿ ವಿರುದ್ಧ ಐಸಿಸಿ ನೀತಿ ಸಂಹಿತೆಯ ನಿಯಗಳ ಅನುಸಾರ ಲೆವೆಲ್‌ 1 ಮತ್ತು ಲೆವೆಲ್‌ 2 ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಇದರಿಂದ ಕೊಹ್ಲಿಗೆ 2 ಡೀಮೆರಿಟ್‌ ಅಂಕಗಳು ಲಭ್ಯವಾಗಲಿದೆ. ಒಟ್ಟು 4 ಡೀಮೆರಿಟ್‌ ಅಂಕಗಳು ಲಭ್ಯವಾದರೆ ಒಂದು ಟೆಸ್ಟ್‌ ಪಂದ್ಯದ ನಿಷೇಧ ಶಿಕ್ಷೆ ಎದುರಿಸುವಂತ್ತಾಗುತ್ತದೆ.

ಭಾರತ ಮತ್ತು ಇಂಗ್ಲೆಂಡ್‌ ನಡುವೆ ಈಗ 3ನೇ ಟೆಸ್ಟ್‌ ಪಂದ್ಯ ಅಹ್ಮದಾಬಾದ್‌ನ ಸರ್ದಾರ್‌ ಪಟೇಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇತ್ತಂಡಗಳ ನಡುವೆ ಇದು ಮೊತ್ತ ಮೊದಲ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯವಾಗಿದೆ. ಸರಣಿಯ ನಾಲ್ಕನೇ ಟೆಸ್ಟ್‌ ಕೂಡ ಅಹ್ಮದಾಬಾದ್‌ನಲ್ಲೇ ನಡೆಯಲಿದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article