No menu items!
9.3 C
Munich
Wednesday, April 29, 2026

ಗಿಲ್ ಚೊಚ್ಚಲ ಅರ್ಧಶತಕ

Must read

ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಅರ್ಧ ಶತಕವನ್ನು ಬಾರಿಸಿ ಮಿಂಚಿದ್ದಾರೆ. ಇದು ಶುಭ್ಮನ್ ಗಿಲ್ ಅವರ ಎರಡನೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಗಿದೆ. ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್‌ ಆರಂಭಿಸಿದ ಗಿಲ್ ಮೊದಲ ವಿಕೆಟ್‌ಗೆ 70 ರನ್‌ಗಳ ಜೊತೆಯಾಟವನ್ನು ನೀಡಿದರು.
ಶುಭ್ಮನ್ ಗಿಲ್ 101 ಎಸೆತಗಳನ್ನು ಎದುರಿಸಿ 50 ರನ್ ಗಳಿಸಿದರು. ಬಳಿಕ ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಕ್ಯಾಮರೂನ್ ಗ್ರೀನ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. 49.50 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಗಿಲ್ ಇನ್ನಿಂಗ್ಸ್‌ನಲ್ಲಿ 8 ಬೌಂಡರಿಗಳು ಒಳಗೊಂಡಿದ್ದವು. ಈ ಮೂಲಕ ಏಷ್ಯಾದಿಂದ ಹೊರಗೆ ಅರ್ಧ ಶತಕ ಸಿಡಿಸಿದ ನಾಲ್ಕನೆ ಕಿರಿಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು
ಶುಭ್ಮನ್ ಗಿಲ್ ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದರು. ಅಲ್ಲಿಯೂ ಆತ್ಮವಿಶ್ವಾಸದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಗಿಲ್ ಮೊದಲ ಇನ್ನಿಂಗ್ಸ್‌ನಲ್ಲಿ 45 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲೂ 35 ರನ್ ಸಿಡಿಸಿ ಅಜೇಯವಾಗುಳಿದಿದ್ದರು. ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಅರ್ಧ ಶತಕವನ್ನು ಬಾರಿಸುವಲ್ಲಿ ಗಿಲ್ ಯಶಸ್ವಿಯಾಗಿದ್ದಾರೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಭ್ಮನ್ ಗಿಲ್ ಆಸ್ಟ್ರೇಲಿಯಾದ ಬೌಲರ್‌ಗಳ ದಾಳಿಯನ್ನು ಆತ್ಮವಿಶ್ವಾಸದಿಂದಲೇ ಎದುರಿಸಿದರು. ಮತ್ತೊಂದೆಡೆ ಸುದೀರ್ಘ ಕಾಲದ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಮರಳಿರುವ ರೋಹಿತ್ ಶರ್ಮಾ ಉತ್ತಮ ಲಯದಲ್ಲಿರುವಂತೆ ತೋರಿದರಾದರೂ ಅವರ ಆಟ 26 ರನ್‌ಗಳಿಗೆ ಅಂತ್ಯವಾಗಿದೆ. 77 ಎಸೆತವನ್ನು ಎದುರಿಸಿದ ರೋಹಿತ್ ಶರ್ಮಾ 3 ಬೌಂಡರಿ ಹಾಗೂ 1 ಸಿಕ್ಸ್ ಸಿಡಿಸಿದರು.
ರೋಹಿತ್ ಶರ್ಮಾ ಜೋಶ್ ಹ್ಯಾಸಲ್‌ವುಡ್ ಎಸೆತದಲ್ಲಿ ಅವರಿಗೆ ಕ್ಯಾಚ್‌ ನೀಡುವ ಮೂಲಕ ನಿರ್ಗಮಿಸಿದರು. ಬಳಿಕ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಬ್ಯಾಟಿಂಗ್‌ಗೆ ಇಳಿಸಿದ್ದು ನಿಧಾನಗತಿಯನ್ನು ಬ್ಯಾಟಿಂಗ್ ಮುಂದುವರಿಸಿದರು. ಎರಡನೇ ದಿನದಾಟ ಅಂತ್ಯದ ವೇಳೆಗೆ ಭಾರತ 96 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದು 242 ರನ್‌ಗಳ ಹಿನ್ನೆಡೆಯಲ್ಲಿದೆ.

 

———-

ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ

ದಿನೇ ದಿನೇ ಮೀಟರ್ ಬಡ್ಡಿ ದಂಧೆಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಎಲ್ಲರನ್ನು ಬಲಿ ಪಡೆದುಕೊಳ್ಳುತ್ತಿರುವ ಬಡ್ಡಿ ದಂಧೆ ಇದೀಗ ದೇವರಿಗೆ ಪೂಜೆ ಮಾಡುವ ದೇವಸ್ಥಾನದ ಅರ್ಚಕನ ಪ್ರಾಣವನ್ನು ಬಲಿ ತೆಗೆದುಕೊಂಡಿದೆ.
ಒಂದಲ್ಲ ಅಂತ ಮೂರು ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡುವುದರ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದ ಯುವ ಅರ್ಚಕನೋರ್ವ ಸಾಲಗಾರರ ಕಿರುಕುಳ ತಾಳಲಾರದೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸುಲ್ತಾನಪೇಟೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಆರ್ಚಕ ಕೆ.ವಿ.ರಾಘವೇಂದ್ರ(30) ಎಂದು ಗುರುತಿಸಲಾಗಿದೆ. ಸುಲ್ತಾನಪೇಟೆ ಗ್ರಾಮದ ಸಪ್ಪಲಮ್ಮ ದೇವಸ್ಥಾನ ಹಾಗೂ ನಂದಿಗ್ರಾಮದ ಮಾರಮ್ಮ ದೇವಸ್ಥಾನ ಸೇರಿದಂತೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕನಾಗಿದ್ದ ರಾಘವೇಂದ್ರ, ಅಕ್ಷತಾ ಕೋ ಆಪರೇಟಿವ್ ಸಂಘದಲ್ಲಿ ಏಜೆಂಟ್ ಆಗಿ ನಷ್ಟವಾದಾಗ ನಂದಿ ಗ್ರಾಮದ ಜೆ.ಸಿ.ಬಿ ಮಂಜುನಾಥ್, ಗುರುಮೂರ್ತಿ, ಅಜಯೇಂದ್ರ ಬಾಬು, ಪ್ರಾಧ್ಯಾಪಕ ರಾಮಚಂದ್ರಪ್ಪ, ಎನ್.ಎಂ.ಮುನಿರಾಜು, ಎನ್.ಎಲ್ ನರೇಂದ್ರ ಬಾಬು ಬಳಿ ಸಾಲ ಪಡೆದಿದ್ದಾರೆ.
ಆದ್ರೆ ಇತ್ತೀಚೆಗೆ ಸಾಲಗಾರರು ಮೀಟರ್ ಬಡ್ಡಿ ವಿಧಿಸಿ ಹಣ ಕೊಡುವಂತೆ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ಧಾರೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಾಘವೇಂದ್ರ ಡೆತ್ ನೋಟ್ ಬರೆದು, ಸೆಲ್ಫಿ ವೀಡಿಯೋನಲ್ಲಿ ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಿಂದ ಮೃತನ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನ್ಯಾಯಕ್ಕಾಗಿ ನಂದಿಗಿರಿಧಾಮದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆತ್ಮಹತ್ಯೆಗೆ ಶರಣಾಗಿದ್ದ ರಾಘವೇಂದ್ರನನ್ನು ಮಂಗಳವಾರ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದರು. ಆದ್ರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿರಲಿಲ್ಲ. ಈ ಮಧ್ಯೆ ಮನೆ ಕ್ಲೀನ್ ಮಾಡುವ ವೇಳೆ ಸಿಕ್ಕ ಡೆತ್ ನೋಟ್ ಹಾಗೂ ಡೆತ್ ನೋಟ್‍ನಲ್ಲಿ ಮೊಬೈಲ್‍ನಲ್ಲಿ ವೀಡಿಯೋ ಮಾಡಿರುವ ಬಗ್ಗೆ ರಾಘವೇಂದ್ರ ಬರೆದಿದ್ದು, ಫೋನ್ ಆನ್‍ಲಾಕ್ ಹೇಗೆ ಮಾಡಬೇಕೆಂಬುವುದನ್ನು ಸಹ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಬಳಿಕ ರಾಘವೇಂದ್ರ ಮೊಬೈಲ್ ಫೋನ್ ಪರಿಶೀಲಿಸಿದಾಗ ಸಾವಿನ ಸತ್ಯ ಬಹಿರಂಗಗೊಂಡಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article