No menu items!
13.9 C
Munich
Wednesday, April 29, 2026

ಧ್ರುವಾ ಸರ್ಜಾಗೆ ಜೋಗಿ ಪ್ರೇಮ್ ಆ್ಯಕ್ಷನ್ ಕಟ್?

Must read

ನಿರ್ದೇಶಕ ಪ್ರೇಮ್‌ ಸಿನಿಮಾ ಮಾಡುತ್ತಾರೆ ಎಂದರೆ, ಅದಕ್ಕೆ ಆರಂಭದಿಂದಲೇ ಒಂದು ಕ್ರೇಜ್‌ ಸೃಷ್ಟಿ ಮಾಡುತ್ತಾರೆ. ಈ ಹಿಂದೆ ಹಾಗೆ ಸೃಷ್ಟಿ ಮಾಡಿದ ಕ್ರೇಜ್‌ಗಳಲ್ಲಿ ಕೆಲವು ಸಫಲವಾಗಿವೆ, ಕೆಲವು ವಿಫಲವಾಗಿವೆ. ಆದರೆ ಪ್ರೇಮ್‌ ಅವರ ಮಾರುಕಟ್ಟೆ ಮಾತ್ರ ಬಿದ್ದಿಲ್ಲ. ನಟರಾದ ಸುದೀಪ್‌, ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ರಂತಹ ಸ್ಟಾರ್‌ಗಳನ್ನು ನಿರ್ದೇಶನ ಮಾಡಿರುವ ಪ್ರೇಮ್‌ ಈಗ ಕನ್ನಡದ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಜತೆ ಸಿನಿಮಾ ಮಾಡಲು ತಯಾರಾಗುತ್ತಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ.

ಪ್ರೇಮ್‌ ಅವರೆಂದರೆ ಕೆಲ ನಾಯಕರಿಗೆ ಬಲು ಪ್ರೀತಿ. ಅವರು ಹೀರೋಗಳನ್ನು ತೆರೆಯ ಮೇಲೆ ಬಹಳ ಚೆನ್ನಾಗಿ ತೋರಿಸುತ್ತಾರೆ. ಹಾಡುಗಳನ್ನು ಅಷ್ಟೇ ಅದ್ಭುತವಾಗಿ ಮಾಡಿಸುತ್ತಾರೆ ಮತ್ತು ಅವುಗಳು ಹಿಟ್‌ ಕೂಡ ಆಗುತ್ತವೆ. ಇದುವರೆಗೂ ಪ್ರೇಮ್‌ ಅವರ ಸಿನಿಮಾಗಳ ಎಲ್ಲ ಹಾಡುಗಳು ಮತ್ತು ಮೇಕಿಂಗ್‌ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಈಗ ಅವರು ನಟ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಜತೆ ಸಿನಿಮಾ ಮಾಡಲು ಹೊರಟಿರುವುದು ಗಾಂಧಿನಗರದ ಮಂದಿಯನ್ನು ಮತ್ತೆ ತಿರುಗಿ ನೋಡುವಂತೆ ಮಾಡಿದೆ.

ಪ್ರೇಮ್‌ ಅವರು ‘ಅಭಿನಯ ಚಕ್ರವರ್ತಿ’ ಸುದೀಪ್‌ ಜತೆ ಮತ್ತೆ ಸಿನಿಮಾ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಜತೆಗೆ ಆ ಸಿನಿಮಾ ಹಿಂದೆಂದೂ ಕಾಣದ ರೀತಿಯಲ್ಲಿ ಮೇಕಿಂಗ್‌ ಆಗಲಿದೆ ಎಂದು ಸ್ವತಃ ನಿರ್ದೇಶಕ ಪ್ರೇಮ್‌ ಹೇಳಿದ್ದರು. ಆದರೆ ಸದ್ಯ ಸುದೀಪ್‌ ತಮ್ಮ ಬೇರೆ ಬೇರೆ ಸಿನಿಮಾಗಳ ಕೆಲಸದಲ್ಲಿ ಬಿಝಿ ಇದ್ದಾರೆ. ಈ ಕಾರಣದಿಂದ ಪ್ರೇಮ್‌ ಅವರ ಸಿನಿಮಾ ತಡವಾಗಬಹುದು. ಈ ನಡುವೆ ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್‌ ನಡುವೆ ಮಾತುಕತೆಯಾಗಿದ್ದು, ಪ್ರೇಮ್‌ ನಿರ್ದೇಶನ ಮಾಡುವುದು ಕನ್ಫರ್ಮ್ ಆಗಿದೆ ಎನ್ನುತ್ತಿವೆ ಪ್ರೇಮ್‌ ಅವರ ಆಪ್ತ ಮೂಲಗಳು.

ಪ್ಲಾನಿಂಗ್‌ ಪ್ರಕಾರ ಧ್ರುವ ಸರ್ಜಾ ಇಷ್ಟೊತ್ತಿಗಾಗಲೇ ‘ದುಬಾರಿ’ ಚಿತ್ರದ ಚಿತ್ರೀಕರಣದಲ್ಲಿರಬೇಕಿತ್ತು. ಕಾರಣಾಂತರಗಳಿಂದ ಆ ಚಿತ್ರ ತಡವಾಗುತ್ತಿದೆ. ಇತ್ತ ಆ ಚಿತ್ರದ ನಿರ್ದೇಶಕ ನಂದಕಿಶೋರ್‌ ಸಹ ಶ್ರೇಯಸ್‌ ಮಂಜು ಜತೆ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಸಿನಿಮಾ ಯಾಕೆ ತಡವಾಗುತ್ತಿದೆ ಎಂಬುದಕ್ಕೆ ಅವರ ಬಳಿಯೂ ಉತ್ತರವಿಲ್ಲ. ಈ ನಡುವೆ ಧ್ರುವ ಸರ್ಜಾ ಜತೆಗೆ ತೆಲುಗಿನ ಸ್ಟಾರ್‌ ನಿರ್ದೇಶಕ ಪೂರಿ ಜಗನ್ನಾಥ್‌ ಸಿನಿಮಾ ಮಾಡುತ್ತಾರೆ. ಈಗಾಗಲೇ ಕಥೆ ಕೂಡ ಓಕೆ ಆಗಿದೆ ಎಂದು ಧ್ರುವ ಅವರ ಆಪ್ತ ಬಳಗವೇ ಲವಲವಿಕೆ ಜತೆ ಹೇಳಿಕೊಂಡಿತ್ತು. ಈಗ ಪ್ರೇಮ್‌ ಅವರ ಸಿನಿಮಾದ ಸುದ್ದಿ ಹಬ್ಬಿದೆ.

ಈ ಬಗ್ಗೆ ಪ್ರೇಮ್‌ ಅವರನ್ನು ಕೇಳಿದರೆ, ‘ಸದ್ಯಕ್ಕೆ ಸಿನಿಮಾ ಬಗ್ಗೆ ನಾನು ಹೇಳುವುದಿಲ್ಲ. ಜನತಾ ಕರ್ಫೂ್ಯ ಮುಗಿದ ಮೇಲೆ ಬೆಂಗಳೂರಿಗೆ ಬಂದು ಮಾತನಾಡುತ್ತೇನೆ. ಯಾರ ಜತೆ ಸಿನಿಮಾ ಮಾಡುತ್ತೇನೆ ಎಂದು ಹೇಳುತ್ತೇನೆ’ ಎನ್ನುತ್ತಾರೆ.

ಇನ್ನೊಂದು ಕಡೆ ಧ್ರುವ ಸರ್ಜಾ ಒಂದಷ್ಟು ಬರಹಗಾರರ ಜತೆ ಸಂಪರ್ಕದಲ್ಲಿದ್ದು, ಆ ಬರಹಗಾರರು ಕಥೆಯೊಂದನ್ನು ಹೇಳಿದ್ದಾರೆ. ಆ ಸಿನಿಮಾಗಾಗಿ ಹೊಸ ನಿರ್ದೇಶಕರನ್ನು ಅವರು ಹುಡುಕುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಈಗಾಗಲೇ ಪ್ರೇಮ್‌ ಕಥೆಯನ್ನು ಧ್ರುವ ಅವರಿಗೆ ಹೇಳಿ ಬಂದಿದ್ದಾರೆ. ಆದರೆ ಧ್ರುವ ಅವರು ಸಹ ಏನನ್ನು ಹೇಳಿಲ್ಲ. ಇದರ ಜತೆಗೆ ರಾಘವೇಂದ್ರ ಹೆಗಡೆಯವರ ಸಿನಿಮಾದ ಕೆಲಸಗಳು ನಡೆಯುತ್ತಿವೆ.

ಈ ಬಗ್ಗೆ ಪ್ರೇಮ್‌ ಅವರನ್ನು ಕೇಳಿದರೆ, ‘ಸದ್ಯಕ್ಕೆ ಸಿನಿಮಾ ಬಗ್ಗೆ ನಾನು ಹೇಳುವುದಿಲ್ಲ. ಜನತಾ ಕರ್ಫೂ್ಯ ಮುಗಿದ ಮೇಲೆ ಬೆಂಗಳೂರಿಗೆ ಬಂದು ಮಾತನಾಡುತ್ತೇನೆ. ಯಾರ ಜತೆ ಸಿನಿಮಾ ಮಾಡುತ್ತೇನೆ ಎಂದು ಹೇಳುತ್ತೇನೆ’ ಎನ್ನುತ್ತಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article