ಬೆಂಗಳೂರು: ದೇಶದ್ರೋಹ ಕೆಲಸದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಪೊಲೀಸರ ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪಾಕ್ ಪರ ಘೋಷಣೆ ಪ್ರಕರಣದಲ್ಲಿ ಪೊಲೀಸರಿಗೆ ತನಿಖೆ ನಡೆಸಲು ಸ್ವಾತಂತ್ರ್ಯ ನೀಡಿದ್ದೇವೆ. ಈ ಬಗ್ಗೆ ಗೃಹಸಚಿವರು ಹೇಳಿಕೆ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಎಂದು ನಮ್ಮ ರಾಜ್ಯಸಭಾ ಸದಸ್ಯರು ಕೂಡ ಅವತ್ತೇ ಹೇಳಿಕೆ ನೀಡಿದ್ದಾರೆ.
ಕೆಲ ಸಚಿವರು ಪಾಕ್ ಪರ ಘೋಷಣೆ ಕೂಗಿಲ್ಲ ಎಂದು ಹೇಳಿದ್ದರ ಬಗ್ಗೆ ಕೇಳಿದಾಗ, ಅವರ ಅಭಿಪ್ರಾಯ ಅವರು ಹೇಳಿದ್ದಾರೆ. ಇಲ್ಲಿ ವಿಡಿಯೋ ತಿರುಚಿರಬಹುದು. ಇಲ್ಲಿ ನಮ್ಮ ಅಭಿಪ್ರಾಯಕ್ಕಿಂತ ಪೊಲೀಸರ ತನಿಖೆಯ ವರದಿ ಮುಖ್ಯ. ಈ ಪ್ರಕರಣದ ತನಿಖೆಗಾಗಿ ಧ್ವನಿ ಮಾದರಿ ನೀಡಬೇಕು. ನಿನ್ನೆಯೇ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಮಂಡ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದ ಪ್ರಕರಣವನ್ನು ತನಿಖೆ ಮಾಡುತ್ತೇವೆ. ಬಿಜೆಪಿ ಸ್ನೇಹಿತರು ಅದಕ್ಕೂ ಉತ್ತರ ನೀಡಬೇಕು”ಎಂದು ತಿಳಿಸಿದರು.