No menu items!
8 C
Munich
Saturday, May 2, 2026

ಭಿಕ್ಷುಕರು, ಸೂರಿಲ್ಲದವರೆಂದ್ರೆ ಈ ಡಾಕ್ಟರಿಗೆ ಜೀವ.. ಇಂಥಾ ದೊಡ್ಡ ಮನಸ್ಸು ಯಾರಿಗಿದೆ ರೀ..?

Must read

ಭಿಕ್ಷುಕರು, ಸೂರಿಲ್ಲದವರೆಂದ್ರೆ ಈ ಡಾಕ್ಟರಿಗೆ ಜೀವ.. ಇಂಥಾ ದೊಡ್ಡ ಮನಸ್ಸು ಯಾರಿಗಿದೆ ರೀ..?

ಭಿಕ್ಷುಕರು, ಸೂರಿಲ್ಲದವರು ಕಂಡರೆ ಎಲ್ಲಿಲ್ಲದ ಪ್ರೀತಿ, ಮಮತೆ. ಇದ್ದಲ್ಲಿಗೆ ಹೋಗಿ ಉಚಿತ ಆರೋಗ್ಯ ಸೇವೆ ನೀಡ್ತಾರೆ ವೈದ್ಯ! ಕಳೆದ ಕೆಲ ವರ್ಷಗಳಿಂದ ಇಂತಹ ಮಹಾನ್ ಕಾರ್ಯದಲ್ಲಿ ತೊಡಗಿರುವವರೇ ಪುಣೆಯ ವೈದ್ಯ ಡಾ. ಅಭಿಜಿತ್ ಸೋನವಾನೆ ಅವರು. ತಮ್ಮ ಕುಟುಂಬಗಳಿಗೆ ಬೇಡವಾಗಿ, ಬೀದಿಗೆ ಬಿದ್ದು ನೆಲೆಗಾಗಿ ಅಲೆದಾಡುತ್ತಿರುವವರನ್ನು ರಕ್ಷಿಸಿ ಅವರ ಆರೈಕೆ ಮಾಡುವುದೇ ತನ್ನ ಕರ್ತವ್ಯವೆಂದು ಭಾವಿಸಿ ಇವರ ಸೇವೆಯಲ್ಲಿ ತೊಡಗಿದ್ದಾರೆ.
ಡಾ. ಸೋನವಾನೆ ಅವರು ಈ ಸೇವೆಗೆ ಕಾರಣವೂ ಇದೆ. ಕೆಲ ವರ್ಷಗಳ ಹಿಂದೆ ವೈದ್ಯ ವೃತ್ತಿ ಆರಂಭಿಸಿದ್ದ ಸೋನವಾನೆರವರು ಹಳ್ಳಿಯೊಂದರಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಅವರ ಬಳಿ ಹಣವಿರಲಿಲ್ಲ. ಯಾವ ಆಸ್ಪತ್ರೆಯಲ್ಲೂ ವೈದ್ಯನಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಮನೆಗಳಿಗೆ ತೆರಳಿ ಬಾಗಿಲು ತಟ್ಟಿ ಮನೆಯಲ್ಲಿ ಯಾರಾದರೂ ರೋಗಿಗಳಿದ್ದಾರೆಯೇ ಎಂದು ಕೇಳುತ್ತಿದ್ದರಂತೆ. ಮುಂದೆ ತನ್ನ ಧ್ಯೇಯೋದ್ದೇಶವನ್ನ ಕಳೆದುಕೊಂಡಿದ್ದರಂತೆ ಮತ್ತೆ, ದಾರಿ ತಪ್ಪಿದ್ದಂತೆ.
ಇದಾದ ನಂತ್ರ ಒಂದು ಭಿಕ್ಷುಕರ ಕುಟುಂಬವನ್ನು ಭೇಟಿಯಾದದ್ದು ಅವರ ಜೀವನದ ಗುರಿಯನ್ನು ಕಂಡುಕೊಳ್ಳಲು ಸಾಧ್ಯವಾಯಿತಂತೆ. ಹೀಗಾಗಿ ಡಾಕ್ಟರ್ ಸೋನವಾನೆ ಆರ್ಥಿಕವಾಗಿ ಸದೃಢರಾದಾಗ ಗುರಿ ಸಾಧನೆಗೆ ಕಾರಣರಾದ ಭಿಕ್ಷುಕರಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿ ಈ ಸೇವೆ ಮಾಡುತ್ತಿದ್ದಾರೆ.

ಡಾ. ಸೋನವಾನೆ ಅವರು ಸೋಮವಾರದಿಂದ ಶನಿವಾರದವರಗೆ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಇವರ ಸೇವಾ ಕಾರ್ಯ ಮಧ್ಯಾಹ್ನ 3 ಗಂಟೆಯವರೆಗೆ ನಡೆಯುತ್ತದೆ. ತಮ್ಮ ವೈದ್ಯಕೀಯ ಸಲಕರಣೆಗಳ ಜೊತೆ ಹೊರಡುವ ಇವರು ಊರಿನ ಧಾರ್ಮಿಕ ಸ್ಥಳಗಳಿಗೆ ತೆರಳಿ ಅಲ್ಲಿನ ಜನರೊಂದಿಗೆ ಬೆರೆಯುತ್ತಾರೆ. ಈ ವೇಳೆ ಅವರ ಕಷ್ಟಗಳಿಗೆ ಸ್ಪಂದಿಸಿ ಆರೋಗ್ಯ ತಪಾಸಣೆ ಮಾಡುತ್ತಾರೆ. ಒಂದು ವೇಳೆ ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೆ ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ.
ಕುತೂಹಲಕಾರಿಯ ವಿಷಯ ಅಂದರೆ ಸೋನವಾನೆ ಅವರು ‘ ಭಿಕ್ಷುಕರಿಗಾಗಿ ಈ ವೈದ್ಯ ’ಎಂದು ತಮ್ಮ ಬೆನ್ನ ಹಿಂದೆ ಬರೆದುಕೊಂಡಿದ್ದಾರೆ. ದೇವಸ್ಥಾನ, ಚರ್ಚ್, ಮಸೀದಿ ಹೀಗೆ ಭಿಕ್ಷುಕರು ನಗರದಲ್ಲಿ ಎಲ್ಲೇ ಇದ್ದರೂ ಅವರನ್ನು ಭೇಟಿಯಾಗುತ್ತಾರೆ. ವಾರದ ವಿಶೇಷ ದಿನಗಳಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳ ಬಳಿ ಸೇರುವ ಅಂಗವಿಕಲರು ಹಾಗೂ ವಯಸ್ಸಾದವರಿಗಾಗಿ ಚಿಕಿತ್ಸೆ ನೀಡುವುದಕ್ಕಾಗಿಯೇ ಅವರ ಇರುವಿಕೆಯ ಆಧಾರದ ಮೇಲೆ ಒಂದು ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದಾರೆ.

ಪ್ರತಿದಿನ ಅವರವರ ಸರದಿ ಬಂದಾಗ ಆಯಾ ಸ್ಥಳಗಳಿಗೆ ತೆರಳಿ ಚಿಕಿತ್ಸೆ ನಿಡುತ್ತಾರೆ. ಅಧಿಕ ಜನರು ಸೇರುವ ಧಾರ್ಮಿಕ ಸ್ಥಳಗಳನ್ನು ಗುರುತಿಸುವ ಕೆಲಸವನ್ನು ಸೋಹಮ್ ಟ್ರಸ್ಟ್ ಮಾಡುತ್ತಿದೆ. ಪಟ್ಟಿಯಲ್ಲಿರುವಂತೆ ಸೋಮವಾರ ಶಿವ ದೇವಸ್ಥಾನದ ಹೊರಗೆ, ಮಂಗಳವಾರ ದೇವಿ ದೇವಸ್ಥಾನ, ಬುಧವಾರ ಗಣಪತಿ ದೇವಸ್ಥಾನ, ಗುರುವಾರ ಸಾಯಿ ಬಾಬಾ ದೇವಸ್ಥಾನ, ಶುಕ್ರವಾರ ಮಸೀದಿ ಮತ್ತು ಶನಿವಾರದಂದು ಮಾರುತಿ ದೇವಸ್ಥಾನಕ್ಕೆ ತಮ್ಮನ್ನು ಮೀಸಲಾಗಿಸಿಕೊಂಡಿದ್ದಾರೆ.
ಇನ್ನು ತಮ್ಮ ಸೇವೆಯ ಬಗ್ಗೆ ಮಾತನಾಡುವ ಡಾ. ಅಭಿಜಿತ್ ಸೋನವಾನೆ, ‘ನಾವು ಅವರ ಸಂಪರ್ಕವನ್ನು ಸಾಧಿಸಿದ್ದೇವೆ. ನಾನು ಅವರಿಗೆ ಗೊತ್ತು, ಅವರು ನನಗೆ ಗೊತ್ತು. ನನ್ನ ಗುರಿ ಏನೆಂದರೆ ಅವರನ್ನು ಭಿಕ್ಷೆ ಬೇಡುವುದರಿಂದ ಬಿಡಿಸಿ ದುಡಿದು ತಿನ್ನುವಂತೆ ಮಾಡಬೇಕು. ನನ್ನ ಟ್ರಸ್ಟ್ ನಿಂದ ಅವರಿಗೆ ಹಣದ ಸಹಾಯವನ್ನು ಒದಗಿಸುತ್ತಿದ್ದೇನೆ. ಇದು ಅವರಿಗೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ’ ಎಂದು ತಮ್ಮ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು, ಇವರ ಸೇವೆಗಳಿಗೆ ಕೃತಜ್ಞರಾಗಿರುವ ರೋಗಿಗಳು ನಮ್ಮನ್ನು ರಕ್ಷಿಸಲು ಬಂದಿರುವ “ದೇವರು” ಎಂದು ಪ್ರಶಂಸಿಸಿದ್ದಾರೆ. ಆದರೆ ಸೋನವಾನೆಯವರು ಇವರಿಂದ ಇನ್ನು ಹೆಚ್ಚಿನದನ್ನು ಬಯಸುತ್ತಾರೆ. ನಾನು ಎಲ್ಲರಲ್ಲೂ ಕೇಳಿಕೊಳ್ಳುವುದು ಒಂದೇ. ಇವರನ್ನೂ ಮಾನವರಂತೆ ಕಾಣಿ. ಅವರಿಗೆ ಹಣ ನೀಡಿ ಇನ್ನೊಬ್ಬರನ್ನು ಅವಲಂಬಿಸುವಂತೆ ಮಾಡಬೇಡಿ. ಇದರ ಬದಲಾಗಿ ಅವರಿಗೆ ಕೆಲಸ ಪಡೆಯಲು ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article